ಬೆಂಗಳೂರು – ಪ್ರಖರ ಹಿಂದೂ ವಿಚಾರಧಾರೆ, ಅಲ್ಪಸಂಖ್ಯಾತರ ವಿರುದ್ಧ ಬೆಂಕಿಯುಗುಳುವ ಭಾಷಣಗಳಿಂದ ಪ್ರಸಿದ್ಧರಾದವರು ಚೈತ್ರಾ ಕುಂದಾಪುರ (Chaitra Kundapura). ಇವರು ಈಗ ಪೊಲೀಸರ ಅತಿಥಿ. ಅದು ತಮ್ಮ ದ್ವೇಷದ ಕಾರುವ ಭಾಷಣ,ಪ್ರಚೋದನಕಾರಿ ಹೇಳಿಕೆ ಇದಾವುದಕ್ಕೂ ಅಲ್ಲ.ಬದಲಿಗೆ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಬಿಜೆಪಿ ಟಿಕೆಟ್ ಕೊಡಿಸುತ್ತೇನೆಂದು ವ್ಯಕ್ತಿಯೊಬ್ಬರಿಗೆ ನಂಬಿಸಿ,ಏಳು ಕೋಟಿ ರೂಪಾಯಿ ಪಡೆದು ವಂಚಿಸಿದ ಆರೋಪಕ್ಕೆ.
ಕಳೆದ ವಿಧಾನಸಭೆ ಚುನಾವಣೆ ವೇಳೆ ಬಿಜೆಪಿಯ ಕೆಲವು ಹಾಲಿ ಶಾಸಕರಿಗೆ ಟಿಕೆಟ್ ಸಿಗುವುದಿಲ್ಲ.ಹೊಸ ಮುಖಗಳಿಗೆ ಹೈಕಮಾಂಡ್ ಮಣೆ ಹಾಕಲಿದೆ ಎಂದು ಪ್ರಚಾರವಾಗಿತ್ತು.ಅಲ್ಲದೆ ಟಿಕೆಟ್ ನಿರಾಕರಿಸಲಾಗುವ ಕೆಲವು ಶಾಸಕರ ಹೆಸರು ಬಹಿರಂಗಗೊಂಡಿತ್ತು. ಇದರಲ್ಲಿ ಉಡುಪಿ ಜಿಲ್ಲೆಯ ಬೈಂದೂರು ಕ್ಷೇತ್ರದ ಶಾಸಕ ಸುಕುಮಾರ ಶೆಟ್ಟಿ ಅವರ ಹೆಸರು ಪ್ರಮುಖವಾಗಿತ್ತು.
ಈ ಮಾಹಿತಿಯನ್ನು ಬಂಡವಾಳವಾಗಿ ಮಾಡಿಕೊಂಡ ಚೈತ್ರಾ ಕುಂದಾಪುರ ಐನಾತಿ ಯೋಜನೆಯೊಂದನ್ನು ರೂಪಿಸಿ ಕಾರ್ಯಾಚರಣೆಗೆ ಇಳಿದರು.ಈ ಕಾರ್ಯಾಚರಣೆ ಇವರನ್ನು ಇದೀಗ ಪೊಲೀಸ್ ಬಂಧನದ ಕುಣಿಕೆಯೊಳಗೆ ಸಿಲುಕುವಂತೆ ಮಾಡಿದೆ.
ಇನ್ನು ಬಂಧನದ ವೇಳೆ ಚೈತ್ರಾ ಕುಂದಾಪುರ (Chaitra Kundapura) ಅವರು ಹೈ ಡ್ರಾಮಾ ಮಾಡಿದ್ದಾರೆ. ಪೊಲೀಸರು ಬಂಧಿಸುವ ವೇಳೆ ತಮ್ಮ ಕೈ ಬಳೆ ಒಡೆದುಕೊಂಡು ಉಂಗುರ ನುಂಗಿ ಆತ್ಮಹತ್ಯೆ ಮಾಡಿಕೊಳ್ಳಲು ಹೋಗಿ ಗೊಂದಲ ಸೃಷ್ಟಿಸಿದರಾದರೂ ಮಹಿಳಾ ಸಿಬ್ಬಂದಿ ಅದೆಲ್ಲವನ್ನು ವಿಫಲಗೊಳಿಸಿ ವಶಕ್ಕೆ ಪಡೆದಿದೆ.
ಇದೆಲ್ಲದರ ವಿವರ ಹೀಗಿದೆ ನೋಡಿ.
ಚಿಕ್ಕಮಗಳೂರು ಜಿಲ್ಲೆಯ ಬಿಜೂರಿನ ನಿವಾಸಿ, ಗೋವಿಂದ ಬಾಬು ಪೂಜಾರಿ ಬೈಂದೂರಿನ ಚೆಫ್ ಟಾಕ್ ಸಂಸ್ಥೆಯನ್ನು ನಡೆಸುತ್ತಿದ್ದು,ಕೆಲಕಾಲ ರಾಷ್ಟ್ರೀಯ ಸೇವಾ ಸಂಘದ ಸಕ್ರಿಯ ಕಾರ್ಯಕರ್ತರಾಗಿ ಕೆಲಸ ಮಾಡಿದ್ದರು. ನಂತರ ಕಳೆದ 6 ವರ್ಷಗಳಿಂದ ಬಿಜೆಪಿ ಸಂಘಟನೆಯಲ್ಲಿ ತೊಡಗಿದ್ದ. ಅವರು ಶಾಸಕ ಸುಕುಮಾರ ಶೆಟ್ಟಿ ಅವರಿಗೆ ಬೈಂದೂರ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ನೀಡದೆ ಹೋದರೆ ತನಗೆ ನೀಡುವಂತೆ ಪ್ರಮುಖರಲ್ಲಿ ಮನವಿ ಮಾಡಿದ್ದರು.
ಆದರೆ,ಈ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಲು ಹಲವರು ಆಕಾಂಕ್ಷಿಗಳಾಗಿದ್ದರು.ಹೀಗಾಗಿ ಗೋವಿಂದ ಬಾಬು ಪೂಜಾರಿ ಅವರು ಹಲವರನ್ನು ಭೇಟಿ ಮಾಡಿ ಟಿಕೆಟ್ ಗಾಗಿ ಮನವಿ ಮಾಡುತ್ತಿದ್ದರು ಈ ವೇಳೆ ಇವರಿಗೆ ಚೈತ್ರಾ ಕುಂದಾಪುರ ಹಾಗೂ ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಯುವ ಮೊರ್ಚಾ ಗಗನ್ ಕಡೂರು ಪರಿಚಯವಾಗುತ್ತದೆ.
ನಂತರ ಇವರು ಗೋವಿಂದ ಬಾಬು ಪೂಜಾರಿ ಅವರಿಗೆ ಟಿಕೆಟ್ ಕೊಡಿಸುವುದಾಗಿ ಹೇಳಿ ನಂಬಿಸುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದ ಚೈತ್ರಾ ಕುಂದಾಪುರ ಅವರು ಬಿಜೆಪಿ ಮತ್ತು ಸಂಘ ಪರಿವಾರದ ಹಲವರ ಜೊತೆ ನಂಟು ಹೊಂದಿರುವುದನ್ನು ತಿಳಿದ ಗೋಪಾಲ ಬಾಬು ಪೂಜಾರಿ ಇವರು ಮನಸ್ಸು ಮಾಡಿದರೆ ತನಗೆ ಟಿಕೆಟ್ ಗ್ಯಾರಂಟಿ ಎಂದು ನಂಬಿ ಅವರು ಹೇಳಿದಂತೆ ಕೇಳುತ್ತಾರೆ.
ಮಿಖ ಬಲೆಗೆ ಬಿತ್ತು ಎಂಬುದನ್ನು ಖಾತ್ರಿ ಪಡಿಸಿಕೊಂಡ ಚೈತ್ರಾ ಕುಂದಾಪುರ ಗ್ಯಾಂಗ್ ವ್ಯಕ್ಯಿಯೊಬ್ಬರನ್ನು ಪೂಜಾರಿ ಅವರಿಗೆ ಪರಿಚಯಿಸಿ, ಇವರು ವಿಶ್ವನಾಥ್ ಜೀ. ಇವರು ಕಳೆದ 45 ವರ್ಷಗಳಿಂದ ಆರ್ಎಸ್ಎಸ್ ಪ್ರಚಾರಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೇ ಕೇಂದ್ರದ ಅಭ್ಯರ್ಥಿಯ ಸೆಲೆಕ್ಷನ್ ಕಮಿಟಿಯಲ್ಲಿ ಅವರು ಒಬ್ಬರಾಗಿರುತ್ತಾರೆ ಎಂದು ಹೇಳುತ್ತಾರೆ.ವಿಶ್ವನಾಥ್ ಜೀ ಎಂಬ ವ್ಯಕ್ತಿ ಸಂಘದ ಪ್ರಮುಖ ನಾಯಕನ ರೀತಿಯಲ್ಲಿ ಹಾವಭಾವಗಳನ್ನು ಹೊಂದಿದ್ದು ಅದೇ ರೀತಿ ನಡವಳಿಕೆ ಪ್ರದರ್ಶಿಸುತ್ತಾರೆ.ಇದು ಪೂಜಾರಿ ಅವರನ್ನು ಸುಲಭವಾಗಿ ನಂಬುವಂತೆ ಮಾಡುತ್ತದೆ.
ನಂತರದಲ್ಲಿ ಪೂಜಾರಿ ಹಲವು ಬಾರಿ ಚೈತ್ರಾ ಕುಂದಾಪುರ ಮತ್ತು ವಿಶ್ವನಾಥ್ ಅವರನ್ನು ಭೇಟಿ ಮಾಡಿ ಮಾತುಕತೆ, ಚುನಾವಣೆ ರಣತಂತ್ರದ ಕುರಿತು ಚರ್ಚೆ ನಡೆಸಿದರು.
ಮೊದಲಿಗೆ 50 ಲಕ್ಷ:
ನಂತರ 2022 ರ ಜುಲೈ 7 ರಂದು ಗೋವಿಂದಬಾಬು ಪೂಜಾರಿಯನ್ನು ಚೈತ್ರಾ ಕುಂದಾಪುರ ನಗರದ ಸರ್ಕಾರಿ ಅತಿಥಿ ಗೃಹಕ್ಕೆ ಕರೆಸಿಕೊಂಡು ವಿಶ್ವನಾಥ್ ಜೀ ಅವರ ಜೊತೆ ಮಾತನಾಡುತ್ತಾರೆ. ಈ ವೇಳೆ ವಿಶ್ವನಾಥ್ ಜಿ ನಾನು ಹೇಳಿದರೇ ಮಾತ್ರ ಬಿಜೆಪಿ ಟಿಕೆಟ್ ಅಂತಿಮವಾಗುತ್ತದೆ. ಆದರೆ ಸಾಕಷ್ಟು ಹಣ ನೀಡಿದರೆ ಮಾತ್ರ ಟಿಕೆಟ್ ಸಿಗಬಹುದು ಎಂದು ಹೇಳಿ ಅಂತಿಮವಾಗಿ ಏಳು ಕೋಟಿ ರೂಪಾಯಿಗೆ ವ್ಯವಹಾರ ಕುದುರಿಸುತ್ತಾರೆ.
ಬಳಿಕ ಟಿಕೆಟ್ ಪ್ರಕ್ರಿಯೆ ಆರಂಭಿಸಬೇಕಾದರೆ ಮೂರು ದಿನಗಳಲ್ಲಿ 50 ಲಕ್ಷ ರೂಪಾಯಿ ಹೊಂದಿಸಿ ಅದನ್ನು ಗಗನ್ ಕಡೂರ್ಗೆ ನೀಡಬೇಕು. ಆಯ್ಕೆ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆಯೇ ಇನ್ನುಳಿದ 3 ಕೋಟಿ ರೂ. ನೀಡಬೇಕೆಂದು ವಿಶ್ವನಾಥ್ ಜೀ ಹೇಳುತ್ತಾರೆ.
ಒಂದು ವೇಳೆ ಟಿಕೆಟ್ ಕೊಡಿಸಲು ಸಾಧ್ಯವಾಗದಿದ್ದರೆ ಸಂಪೂರ್ಣ ಮೊತ್ತವನ್ನು ಹಿಂದಿರುಗಿಸಲಾಗುವುದು ಎಂದು ವಿಶ್ವನಾಥ್ ಜೀ ಭರವಸೆ ನೀಡಿದ್ದರು. ಚೈತ್ರಾ ಕುಂದಾಪುರ ಮತ್ತು ಗಗನ್ ಕಡೂರು ಕೂಡಾ ಈ ವಿಚಾರದಲ್ಲಿ ಯಾವುದೇ ಅನುಮಾನ ಬೇಡ ಹಣದ ವಿಷಯದಲ್ಲಿ ತಾವೂ ಜವಾಬ್ದಾರರಾಗಿರುತ್ತೇವೆ ಎಂದು ಭರವಸೆ ನೀಡುತ್ತಾರೆ.
ಅದರಂತೆ ಗೋವಿಂದಬಾಬು ಪೂಜಾರಿ ಅವರು 2022 ಜುಲೈ 7 ರಂದು ಶಿವಮೊಗ್ಗದ ಆರ್ಎಸ್ಎಸ್ ಕಚೇರಿ ಎದುರು 50 ಲಕ್ಷ ರೂ. ಹಣವನ್ನು ಪ್ರಸಾದ್ ಬೈಂದೂರು ಮುಖಾಂತರ ಗಗನ್ ಕಡೂರ್ಗೆ ತಲುಪಿಸುತ್ತಾರೆ.
ನಂತರ ವಿಶ್ವನಾಥ್ ಜಿ, ಗಗನ್ ಕಡೂರ್ ಮತ್ತು ಚೈತ್ರಾ ಕುಂದಾಪುರ ಕಾನ್ಫರೆನ್ಸ್ ಕರೆ ಮಾಡಿ ನಿಮ್ಮ ಹೆಸರು ಆಯ್ಕೆ ಪಟ್ಟಿಯಲ್ಲಿದೆ. ಟಿಕೆಟ್ ನೀಡಲು ಕೇಂದ್ರ ಬಿಜೆಪಿ ನಾಯಕರು ಒಪ್ಪಿದ್ದಾರೆಂದು ಮಾಹಿತಿ ನೀಡಿದ್ದಾರೆ. ಬಳಿಕ 2022ರ ಸೆಪ್ಟೆಂಬರ್ ಮೊದಲ ವಾರದಲ್ಲಿ ಗೋವಿಂದಬಾಬು ಪೂಜಾರಿ ಅವರಿಗೆ ವಿಶ್ವನಾಥ್ ಜಿ ಮತ್ತು ಚೈತ್ರಾ ಕುಂದಾಪುರ ಅವರು ಕಾನ್ಫರೆನ್ಸ್ ಕರೆ ಮಾಡಿ ಟಿಕೆಟ್ ಹಂಚಿಕೆ ಬಗ್ಗೆ ಹೊಸಪೇಟೆಯ ಸಂಸ್ಥಾನ ಮಠ ಹಿರೇಹಡಗಲಿಯ ಅಭಿನವ ಹಾಲ ಸ್ವಾಮೀಜಿಯವರ ಶಿಫಾರಸು ಕೂಡಾ ಮುಖ್ಯವಾಗಿದೆ, ಹಾಗಾಗಿ ಅವರನ್ನು ಭೇಟಿಯಾಗಲು ಸೂಚಿಸಿದ್ದಾರೆ.
ಸ್ವಾಮೀಜಿಯಿಂದ ಟಿಕೆಟ್:
ಅದರಂತೆ ಗೋವಿಂದ ಬಾಬು ಪೂಜಾರಿ ಹಿರೇಹಡಗಲಿಗೆ ತೆರಳಿ ಸ್ವಾಮೀಜಿಯವರನ್ನು ಭೇಟಿಯಾಗಿದ್ದಾರೆ. ಅಲ್ಲಿ ಸ್ವಾಮೀಜಿ ಟಿಕೆಟ್ ಕೊಡಿಸುತ್ತೇನೆ ಎಂದು ಹೇಳಿ ಮುಂದಿನ ಪ್ರಕ್ರಿಯೆಗೆ ರೂ.1.5 ಕೋಟಿ ರೂ. ನೀಡುವಂತೆ ಸೂಚಿಸಿದ್ದಾರೆ. ಅದರಂತೆ ಈ ವರ್ಷ ಜನವರಿ 16 ರಂದು ಬೆಂಗಳೂರಿನ ವಿಜಯನಗರದಲ್ಲಿರುವ ಸ್ವಾಮೀಜಿ ಮನೆಗೆ ತೆರಳಿ ಹಣ ನೀಡಿದ್ದಾರೆ. ಇದಾದ ಬಳಿಕ ು ವಿಶ್ವನಾಥ್ ಜೀ, ಗಗನ್ ಕಡೂರು ಮತ್ತು ಚೈತ್ರಾ ಕುಂದಾಪುರ ಅವರು ಗೋವಿಂದಬಾಬು ಪೂಜಾರಿ ಅವರಿಗೆ ಕಾನ್ಫರೆನ್ಸ್ ಕರೆ ಮಾಡಿ ಬಿಜೆಪಿಯ ಕೇಂದೀಯ ಚುನಾವಣಾ ಸಮಿತಿಯ ಪ್ರಮುಖರು ಬೆಂಗಳೂರಿಗೆ ಆಗಮಿಸಲಿದ್ದು ಅವರನ್ನು ಭೇಟಿ ಆಗಿ ಎಂದು ಹೇಳಿದ್ದಾರೆ.
ಶ್ರೀಕಾಂತ್ ನಾಯ್ಕ್ ಪ್ರವೇಶ ಈ ಮಾತಿನಂತೆ ಗೋವಿಂದಬಾಬು ಪೂಜಾರಿ ಅವರು ಗಗನ್ ಕಡೂರು ಜೊತೆ ಬೆಂಗಳೂರಿನ ಕುಮಾರ ಕೃಪಾ ಸರ್ಕಾರಿ ಅತಿಥಿ ಗ್ರಹಕ್ಕೆ ಬಂದು ಅಲ್ಲಿ ತಂಗಿದ್ದ ಶ್ರೀಕಾಂತ್ ನಾಯ್ಕ್ ಎಂಬುವರನ್ನು ಭೇಟಿಯಾಗುತ್ತಾರೆ ಈ ವೇಳೆ ಗಗನ್ ಕಡೂರು, ಶ್ರೀಕಾಂತ ನಾಯ್ಕ್ ಅವರನ್ನು ದೆಹಲಿಯ ನಾಯಕ,ಬಿಜೆಪಿ ಕೇಂದ್ರ ಚುನಾವಣಾ ಸಮಿತಿಯ ಸದಸ್ಯ ಎಂದು ಪರಿಚಯಿಸಿದ್ದಾನೆ.
ಇದಾದ ನಂತರ ಶ್ರೀಕಾಂತ ನಾಯ್ಕ್, ಕೇಂದ್ರಿಯ ಚುನಾವಣಾ ಸಮಿತಿ ನಿಮ್ಮ ಹೆಸರು ಅಂತಿಮಗೊಳಿಸಿದೆ ಎಂದು ಗೋವಿಂದಬಾಬು ಪೂಜಾರಿಗೆ ಹೇಳಿದ್ದಾರೆ. ಅಲ್ಲದೆ ಈ ಮೊದಲು ಮಾತನಾಡಿದಂತೆ ಬಾಕಿ ಮೊತ್ತ 3 ಮೂರು ಕೋಟಿ ರೂಪಾಯಿಗಳನ್ನು ಗಗನ್ ಕಡೂರ್ ರವರು ಸೂಚಿಸಿದ ಸ್ಥಳಕ್ಕೆ ತಲುಪಿಸಬೇಕೆಂದು ಸೂಚಿಸಿದರು.
ಶ್ರೀಕಾಂತ್ ನಾಯ್ಕ್ ಮತ್ತು ವಿಶ್ವನಾಥ್ ಜಿ ಸೂಚನೆಯಂತೆ ಗೋವಿಂದ ಬಾಬು ಪೂಜಾರಿ 3 ಕೋಟಿ ರೂಪಾಯಿಗಳನ್ನು ಗಗನ್ ಕಡೂರ್ ಮತ್ತು ಚೈತ್ರಾ ಕುಂದಾಪುರ ತಂಡಕ್ಕೆ 2022ರ ಡಿಸೆಂಬರ್ 29 ರಂದು ಮಂಗಳೂರಿನಲ್ಲಿ ನೀಡಿದ್ದಾರೆ.
ಆಘಾತಕಾರಿ ಸುದ್ದಿ:
ತಮಗೆ ಟಿಕೆಟ್ ಖಾತ್ರಿ ಎಂದು ಗೋವಿಂದ ಬಾಬು ಪೂಜಾರಿ ಪ್ರಚಾರ ಆರಂಭಿಸಿದ್ದಾರೆ.ಬಿಜೆಪಿ ಅಭ್ಯರ್ಥಿಯಾಗಿ ತಮ್ಮ ಸ್ಪರ್ಧೆ ಖಚಿತ ಎಂದು ಕಾರ್ಯಕರ್ತರಿಗೆ ಹೇಳಿ ಪ್ರಚಾರ ಮಾಡುತ್ತಿರುವಾಗ ಚೈತ್ರಾ ಕುಂದಾಪುರ ಮತ್ತು ಗಗನ್ ಕಡೂರು ಮಾಡಿದ ಪೋನ್ ಕರೆ ಗೋವಿಂದ ಬಾಬು ಪೂಜಾರಿ ಅವರನ್ನು ಬೆಚ್ಚಿ ಬೀಳುವಂತೆ ಮಾಡುತ್ತದೆ.
ಗೋವಿಂದಬಾಬು ಪೂಜಾರಿಗೆ ಮಾರ್ಚ್ 3 ರಂದು
ಕರೆ ಮಾಡಿದ ನಂತರ ಗಗನ್ ಕಡೂರ್,ಸಂಘ ಪರಿವಾರದ ನಾಯಕ ವಿಶ್ವನಾಥ್ ಜಿ ಅವರು ಉಸಿರಾಟದ ಸಮಸ್ಯೆಯಿಂದ ಇದೇ ಬೆಳಿಗ್ಗೆ 11.30ರ ಸುಮಾರಿಗೆ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾನೆ.
ಈ ಸುದ್ದಿ ಕೇಳಿದ ಗೋವಿಂದ ಬಾಬು ಪೂಜಾರಿ ಆಘಾತದಿಂದ ತತ್ತರಿಸಿ ಹೋಗಿದ್ದಾರೆ. ವಿಶ್ವನಾಥ್ ಜೀ ಹೋದ ಮೇಲೆ ನನ್ನ ಟಿಕೆಟ್ ಗತಿ ಏನು ಎಂದು ತಿಳಿಯದೆ ಕಂಗಾಲಾಗುತ್ತಾರೆ.
ಡ್ರಾಮಾ ಪರದೆ ತೆರೆಯಿತು:
ಇದಾದ ಎರಡು ದಿನದ ಬಳಿಕ ಸಾವರಿಸಿಕೊಂಡು ವಿಶ್ವನಾಥ್ ಜೀ ಸಾವಿನ ಸುದ್ದಿ ಬಗ್ಗೆ ತಿಳಿಯಲು ಕಾಶ್ಮೀರದಲ್ಲಿರುವ ತಮ್ಮ ಪರಿಚಿತರಾದ ನಿವೃತ್ತ ಸೇನಾಧಿಕಾರಿ ಯೋಗೇಶ್ ಎಂಬುವವರನ್ನು ಸಂಪರ್ಕಿಸುತ್ತಾರೆ.ಸಂಘ ಪರಿವಾರದ ಜೊತೆ ಹೆಚ್ಚಿನ ಒಡನಾಟ ಹೊಂದಿದ್ದ ಅವರು ಗೋವಿಂದ ಬಾಬು ಪೂಜಾರಿ ಅವರಿಗೆ ಸಂಘದಲ್ಲಿ ವಿಶ್ವನಾಥ್ ಜೀ ಹೆಸರಿನ ಹಿರಿಯ ಪ್ರಚಾರಕರು ಯಾರೂ ಇಲ್ಲ, ಅಲ್ಲದೆ ಅಷ್ಟು ದೊಡ್ಡ ವ್ಯಕ್ತಿ ಮೃತಪಟ್ಟರೆ ಎಲ್ಲರಿಗೂ ತಿಳಿಯುತಿತ್ತು.ಹೀಗಾಗಿ ತಮಗೆ ತಿಳಿದಿರುವಂತೆ ಇಂತಹ ಹೆಸರಿನವರು ಯಾರೂ ಇಲ್ಲ ಎಂದಿದ್ದಾರೆ.
ಆಗ ಗೋವಿಂದ ಬಾಬು ಪೂಜಾರಿ ಅವರಿಗೆ ತಾವು ವಂಚನೆಯ ಜಾಲದಲ್ಲಿ ಸಿಲುಕಿರುವುದು ಮನದಟ್ಟಾಗುತ್ತದೆ.ತಡ ಮಾಡದ ಅವರು, ಚೈತ್ರಾ ಕುಂದಾಪರ ಹಾಗೂ ಗಗನ್ ಕಡೂರುಗೆ ಕರೆ ಮಾಡಿ ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿರುವ ತಮ್ಮ ಕಚೇರಿಗೆ ಬರುವಂತೆ ತಾಕೀತು ಮಾಡುತ್ತಾರೆ
ಇಬ್ಬರನ್ನೂ ತಮ್ಮ ಕಚೇರಿಗೆ ಕರೆಸಿಕೊಂಡು ಚರ್ಚಿಸಿ, ನನಗೆ ಯಾವ ಟಿಕೆಟ್ ಕೂಡ ಬೇಡ ನಾನು ಕೊಟ್ಟಿರುವ ಹಣ ವಾಪಸ್ ಕೊಡಿ ಎಂದಿದ್ದಾರೆ. ಅದಕ್ಕೆ ಗಗನ್ ತಾವು ಪಡೆದ ಹಣ ವಿಶ್ವನಾಥ ಜೀ ಬಳಿ ಇದ್ದು, ಅವರೀಗ ವಿಧಿವಶರಾಗಿದ್ದಾರೆ ಎಂದು ಹೇಳಿದ್ದಾರೆ.
ವಿಷದ ಬಾಟಲಿ ಡ್ರಾಮ:
ಇದನ್ನು ನಂಬದ ಗೋವಿಂದಬಾಬು ಅವರು ಎಲ್ಲ ನಾಟಕ ನನಗೆ ಗೊತ್ತಾಗಿದೆ, ಹಣವನ್ನು ವಾಪಸ್ ನೀಡಿ, ಇಲ್ಲ ದೂರು ನೀಡುತ್ತೇನೆ ಎಂದಿದ್ದಾರೆ. ಆಗ ಸ್ವಲ್ಪ ಮೆತ್ತಗಾದ ಚೈತ್ರಾ ಕುಂದಾಪುರ ತಾವು ಈಗಿಂದೀಗಲೆ ಹಣ ಕೇಳಿದರೆ ಕೊಡುವುದು ಎಲ್ಲಿಂದ ಅದಕ್ಕೆ ಸ್ವಲ್ಪ ಸಮಯ ಕೊಡಿ ಇಲ್ಲವಾದರೆ ತಮಗೆ ಆತ್ಮಹತ್ಯೆ ಒಂದೇ ದಾರಿ ಎಂದು ವಿಷದ ಬಾಟಲೆ ತೋರಿಸಿದ್ದಾರೆ.
ಇದಕ್ಕೆ ಸಮ್ಮತಿಸಿದ ಅವರು ಸ್ವಲ್ಪ ಕಾಲಾವಕಾಶ ನೀಡಿದ್ದಾರೆ. ಅನಂತರ ಇಬ್ಬರೂ ಫೋನ್ ಕರೆ ಸ್ವೀಕರಿಸದೆ ತಲೆ ಮರೆಸಿಕೊಂಡಿದ್ದರು.
ಇದಾದ ಬಳಿಕ ಗೋವಿಂದಬಾಬು ಅಭಿನವ ಪಾಲಶ್ರೀ ಸ್ವಾಮೀಜಿ ಅವರನ್ನು ಭೇಟಿಯಾಗಿ 1.5 ಕೋಟಿ ರೂ. ಹಣ ನೀಡುವಂತೆ ಹೇಳಿದ್ದಾರೆ. ಆಗ ಸ್ವಾಮೀಜಿ ಒಂದು ತಿಂಗಳೊಳಗೆ ವಾಪಸ್ ನೀಡುತ್ತೇನೆ ಈ ವಿಚಾರದಲ್ಲಿ ನನ್ನನ್ನು ಬಿಟ್ಟು ಬಿಡಿ ಎಂದು ಹೇಳಿದ್ದಾರೆ.
ಯಾರು ಈ ವಿಶ್ವನಾಥ್ ಜಿ:
ಬಳಿಕ ಗೋವಿಂದಬಾಬು, ವಿಶ್ವನಾಥ್ ಜೀ ಬಗ್ಗೆ ಚಿಕ್ಕಮಗಳೂರು ಹಿಂದೂ ಸಂಘಟನೆ ಕಾರ್ಯಕರ್ತ ಮಂಜು ಬಳಿ ಹೇಳಿದಾಗ ಮಂಜು ತಾನು ಕೆಲ ದಿನಗಳ ಹಿಂದೆ ಸಲೂನ್ ಒಂದಕ್ಕೆ ಭೇಟಿ ನೀಡಿದ ವೇಳೆ ನಡೆದ ಅಲ್ಲಿಯ ಆತ ನೀಡಿದ ಮಾಹಿತಿಗೂ ಈ
ಸನ್ನಿವೇಶಕ್ಕೂ ಇದಕ್ಕೂ ಸಾಮ್ಯತೆ ಎಂದು ಹೇಳಿದ್ದಾರೆ.
ಆಗ ಇದರ ಹಿಂದೆ ಬಿದ್ದ ಗೋವಿಂದ ಬಾಬು ಪೂಜಾರಿ ತನ್ನ ಸ್ನೇಹಿತರ ಮೂಲಕ ವಿಚಾರಣೆ ಆರಂಭಿಸಿದರು. ಆಗ ಇವರಿಗೆ ತಿಳಿದು ಬಂದ ಮಾಹಿತಿ ಹೀಗಿದೆ.
ಕಡೂರಿನ ಸಲೂನ್ಗೆ ವ್ಯಕ್ತಿಯೊಬ್ಬರನ್ನು ಕರೆದುಕೊಂಡು ಬಂದಿದ್ದ ಸ್ಥಳೀಯನೊಬ್ಬ ಆ ವ್ಯಕ್ತಿಯನ್ನು ಆರ್ಎಸ್ಎಸ್ ಪ್ರಚಾರಕರ ರೀತಿ ಮೇಕಪ್ ಮಾಡಿಸಿದ್ದನು.
ಈ ಬಗ್ಗೆ ವಿಚಾರಿಸಿದಾಗ ಮೇಕಪ್ ಮಾಡಲು ಬಂದಿದ್ದವರು ಧನರಾಜ್ ಹಾಗೂ ರಮೇಶ್ ಎಂಬ ವ್ಯಕ್ತಿಗಳೆಂದು ತಿಳಿಯಿತು. ಅವರನ್ನು ಪತ್ತೆ ಮಾಡಿದಾಗ ರಮೇಶ ಎಂಬಾತನೇ ಆರ್ಎಸ್ಎಸ್ ಪ್ರಚಾರಕ ವಿಶ್ವನಾಥ್ ಜಿ. ಹೆಸರಲಿ ನಟಿಸಿರುವ ಸಂಗತಿ ಗೋವಿಂದಬಾಬುಗೆ ತಿಳಿದಿದೆ. ಆರ್ಎಸ್ಎಸ್ ಪ್ರಚಾರಕರಂತೆ ನಟಿಸಲು ಗಗನ್ ಕಡೂರ್ ಮತ್ತು ಚೈತ್ರಾ ಕುಂದಾಪುರ ಆತನಿಗೆ ತರಬೇತಿ ನೀಡಿ 1.20 ಲಕ್ಷ ರೂ. ಕೊಟ್ಟಿದ್ದಾರೆ. ಈ ನಾಟಕವಾಡುವಾಗ ಆರ್ ಎಸ್. ಎಸ್ ನ ವಾಹನವಾಗಿ ಬಳಸಲು 2.5 ಲಕ್ಷ ರೂ. ನೀಡಿದ್ದಾರೆ ಎಂದು ಧನರಾಜ್ ಹೇಳಿದ್ದಾರೆ.
ಕಬಾಬ್ ವ್ಯಾಪಾರಿ:
ಇದೇ ವೇಳೆ ಬಿಜೆಪಿ ಕೇಂದ್ರ ಚುನಾವಣಾ ಸಮಿತಿಯ ಸದಸ್ಯರೆಂದು ಹೇಳಿಕೊಂಡ ಶ್ರೀಕಾಂತ್ ನಾಯ್ಕ್ ಎಂಬ ವ್ಯಕ್ತಿ ಬಗೆ ಧನರಾಜ್ ಬಳಿ ವಿಚಾರಿಸಿದಾಗ ಇವರು ಬೆಂಗಳೂರಿನ ಕೆ.ಆರ್ ಪುರಂನಲ್ಲಿ ಚಿಕನ್ ಕಬಾಬ್ ತಯಾರಿಸುವ ಬೀದಿ ವ್ಯಾಪಾರಿ ಎಂಬುದು ಗೊತ್ತಾಗಿದೆ. ಶ್ರೀಕಾಂತ್ ನಾಯ್ಕ್ರನ್ನು ಭೇಟಿಯಾಗಿ ವಿಚಾರಿಸಿದಾಗ ಬಿಜೆಪಿ ನಾಯಕನಾಗಿ ಪಾತ್ರ ಮಾಡಲು ತನಗೆ ಗಗನ್ ಕಡೂರು 93 ಸಾವಿರ ರೂ. ನೀಡಿದ್ದಾರೆ. ಅಲ್ಲದೇ ಈ ವಿಚಾರಗಳನ್ನು ಬಹಿರಂಗಪಡಿಸಿದರೆ ಕೊಲೆ ಮಾಡಿಸುವುದಾಗಿ ಚೈತ್ರ ಕುಂದಾಪುರ ತನಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಶ್ರೀಕಾಂತ್ ಹೇಳಿದ್ದಾನೆ
ಈ ಎಲ್ಲಾ ಮಾಹಿತಿ ಸಂಗ್ರಹಿಸಿದ ಬಳಿಕ ಗೋವಿಂದ ಬಾಬು ಪೂಜಾರಿ ವಂಚನೆಯ ದೂರು ಹಿಡಿದು ಬೆಂಗಳೂರಿನ ಬಂಡೇಪಾಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಈ ಸಂಬಂಧ ದಾಖಲಾಗಿದ್ದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಬಂಡೆಪಾಳ್ಯ ಠಾಣೆಯಿಂದ ಸಿಸಿಬಿಗೆ ವರ್ಗಾವಣೆ ಮಾಡಿದ್ದು, ತನಿಖೆಯನ್ನು ತೀವ್ರಗೊಳಿಸಿದ ಸಿಸಿಬಿ ಪೊಲೀಸರು ಪ್ರಸಾದ್, ಗಗನ್ ಹಾಗೂ ಪ್ರಜ್ವಲ್ ಶೆಟ್ಟಿಯನ್ನು ಬಂಧಿಸಿ ವಿಚಾರಣೆ ಕೈಗೊಂಡು ಅವರು ನೀಡಿದ ಮಾಹಿತಿಯನ್ನು ಆಧರಿಸಿ ತಲೆ ಮರೆಸಿಕೊಂಡಿದ್ದ ಚೈತ್ರಾ ಕುಂದಾಪುರ ಅವರನ್ನು ಬಂಧಿಸಿದ್ದಾರೆ.
ಅಲ್ಲದೇ ಗೆಳಯ ಶ್ರೀಕಾಂತ್ ನಾಯಕ್ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ.


1 ಟಿಪ್ಪಣಿ
mgm bet sports betmgm-play betmgm Nebraska