ಕೋಟೆ ಕೊತ್ತಲಗಳ ನಾಡು ಎಂದೇ ಖ್ಯಾತಿ ಹೊಂದಿರುವ ಚಿತ್ರದುರ್ಗ ಜಿಲ್ಲೆಯ ಐತಿಹಾಸಿಕವಾಗಿ ಎಷ್ಟು ಪ್ರಾಮುಖ್ಯತೆ ಪಡೆದಿದೆಯೋ, ಅಷ್ಟೇ ಪ್ರಮಾಣದಲ್ಲಿ ರಾಜಕೀಯವಾಗಿಯೂ ಪ್ರಾಮುಖ್ಯತೆ ಪಡೆದಿದೆ.
ಇಲ್ಲಿ ನಡೆದಿರುವ ಅನೇಕ ಚುನಾವಣೆಗಳಲ್ಲಿ ಅಚ್ಚರಿಯ ಫಲಿತಾಂಶಗಳ ಮೂಲಕ ಚಿತ್ರದುರ್ಗ (Chitradurga) ಲೋಕಸಭೆ ಕ್ಷೇತ್ರ ದೇಶದ ಗಮನ ಸೆಳೆದಿದೆ ಸಾಮಾನ್ಯರಿಗೆ ಮೀಸಲಾದ ಈ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಯೊಬ್ಬರು ಆಯ್ಕೆಯಾಗುವ ಮೂಲಕ ದಾಖಲೆ ಮಾಡಿದ್ದಾರೆ.
ಮಾಜಿ ಮುಖ್ಯಮಂತ್ರಿ ಎಸ್ ನಿಜಲಿಂಗಪ್ಪ ಕಾಂಗ್ರೆಸ್ ಹಿರಿಯ ನಾಯಕ ಕೊಂಡಜ್ಜಿ ಬಸಪ್ಪ ಸೇರಿದಂತೆ ಹಲವಾರು ಘಟಾನುಘಟಿ ರಾಜಕೀಯ ನಾಯಕರು ಪ್ರತಿನಿಧಿಸಿದ ಈ ಕ್ಷೇತ್ರ ಇದೀಗ ಪರಿಶಿಷ್ಟ ಜಾತಿಗೆ ಮೀಸಲಿಟ್ಟಿರುವ ಕ್ಷೇತ್ರವಾಗಿ ಪರಿಣಮಿಸಿದೆ.
ಇಂತಹ ಚಿತ್ರದುರ್ಗ ಜಿಲ್ಲೆಯಲ್ಲಿ 1952 ರಿಂದ 2019 ವರೆಗಿನ ಲೋಕಸಭಾ ಚುನಾವಣಾ ಇತಿಹಾಸವನ್ನು ಗಮನಿಸಿದಾಗ ಚುನಾವಣೆಯಿಂದ ಚುನಾವಣೆಗೆ ಜಿದ್ದಾ ಜಿದ್ದಿನ ಸ್ಪರ್ಧೆ ನಡೆದಿರುವುದು ವಿಶೇಷ.
ಚಿತ್ರದುರ್ಗ ಲೋಕಸಭಾ ಕ್ಷೇತ್ರವು ಸದ್ಯ ಮೊಳಕಾಲ್ಮೂರು, ಚಳ್ಳಕೆರೆ, ಚಿತ್ರದುರ್ಗ, ಹಿರಿಯೂರು, ಹೊಸದುರ್ಗ, ಹೊಳಲ್ಕೆರೆ ವಿಧಾನಸಭಾ ಕ್ಷೇತ್ರಗಳು ಅಲ್ಲದೆ, ನೆರೆಯ ತುಮಕೂರು ಜಿಲ್ಲೆಯ ಸಿರಾ ಹಾಗೂ ಪಾವಗಡ ಸೇರಿದಂತೆ ಒಟ್ಟು 08 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸದ್ಯ ಪುರುಷ- 919064, ಮಹಿಳೆ-922769, ಇತರೆ-104 ಸೇರಿದಂತೆ ಒಟ್ಟು 18,41,937 ಮತದಾರರಿದ್ದಾರೆ.
ಈ ಚುನಾವಣೆಯಲ್ಲಿ ಆಯ್ಕೆ ಬಯಸಿ ಕಣಕ್ಕಿಳಿದಿರುವ ನಾಯಕರು ಜಿಲ್ಲೆಗೆ ಸೇರಿದವರಲ್ಲ ಎನ್ನುವುದು ವಿಶೇಷ ಕ್ಷೇತ್ರ ಪುನರ್ ವಿಂಗಡಣೆಯಾದ ನಂತರ ನಡೆದ ಎಲ್ಲ ಚುನಾವಣೆಗಳಲ್ಲಿ ಇಲ್ಲಿ ವಲಸಿಗರದ್ದೇ ಪ್ರಾಬಲ್ಯ.
ಕಾಂಗ್ರೆಸ್ನಿಂದ ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಅವರನ್ನು ಕಣಕ್ಕೆ ಇಳಿಯುವ ಮೂಲಕ ಮೂರನೆಯ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಬಿಜೆಪಿಯು ಹಾಲಿ ಸಂಸದ, ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಬದಲಿಗೆ ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರಿಗೆ ಟಿಕೆಟ್ ನೀಡಿದೆ. ಹೊರಗಿನವರು ಬೇಡ ಎಂದರೂ ಎರಡೂ ಪಕ್ಷಗಳು ಹೊರಗಿನವರನ್ನೇ ಅಭ್ಯರ್ಥಿಯನ್ನಾಗಿ ಘೋಷಿಸಿವೆ. ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ನಡುವೆ ನೇರ ಹಣಾಹಣಿಗೆ ವೇದಿಕೆ ಸಜ್ಜಾಗಿದೆ.
ಚಿತ್ರದುರ್ಗ ಜಿಲ್ಲೆಯ ಆರು ಹಾಗೂ ತುಮಕೂರು ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳು ಈ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿವೆ. ಈ ಎಂಟೂ ಕ್ಷೇತ್ರಗಳ ಪೈಕಿ ಹೊಳಲ್ಕೆರೆ ವಿಧಾನಸಭಾ ಕ್ಷೇತ್ರ ಹೊರತುಪಡಿಸಿ ಉಳಿದ ಎಲ್ಲಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರು ಇದ್ದಾರೆ ಹೊಳಲ್ಕೆರೆಯಲ್ಲಿ ಮಾತ್ರ ಬಿಜೆಪಿ ಶಾಸಕ ಇದ್ದಾರೆ.
ಕ್ಷೇತ್ರದಲ್ಲಿ ನಡೆದ ಪ್ರಥಮ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಎಸ್. ನಿಜಲಿಂಗಪ್ಪ ಅವರು ಕಿಸಾನ್ ಮಜ್ದೂರ್ ಪ್ರಜಾ ಪಾರ್ಟಿ (ಕೆಎಂಪಿಪಿ) ಅಭ್ಯರ್ಥಿ ಜಿ. ಮರುಳಪ್ಪ ಅವರನ್ನು 79152 ಮತಗಳ ಅಂತರದಿಂದ ಸೋಲಿಸಿ ಆಯ್ಕೆಯಾಗಿದ್ದರು.
1957 ರಲ್ಲಿ ನಡೆದ ಎರಡನೆ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಪ್ರಜಾ ಸೋಶಿಯಲಿಸ್ಟ್ ಪಕ್ಷ (ಪಿಎಸ್ಪಿ) ದಿಂದ ಸ್ಪರ್ಧಿಸಿದ್ದ ಜೆ.ಎಂ. ಮಹ್ಮದ್ ಇಮಾಮ್ ಅವರು ಆಯ್ಕೆಯಾದರೆ1967 ರ ಚುನಾವಣೆಯಲ್ಲಿ ಸ್ವತಂತ್ರ ಪಾರ್ಟಿ ಅಭ್ಯರ್ಥಿಯಾಗಿ ಪುನಃ ಸ್ಪರ್ಧಿಸಿದ ಜೆ.ಎಂ. ಮಹ್ಮದ್ ಇಮಾಮ್ ಆಯ್ಕೆಯಾಗಿದ್ದರು 1971 ರ ಚುನಾವಣೆಯಲ್ಲಿ ಎನ್.ಪಿ.ಜೆ. ಪಕ್ಷದಿಂದ ಸ್ಪರ್ಧಿಸಿದ ಕೊಂಡಜ್ಜಿ ಬಸಪ್ಪ ಆಯ್ಕೆಯಾದರು.
1977 ರ ಲೋಕಸಭಾ ಚುನಾವಣೆಯಲ್ಲಿ ತುಮಕೂರಿನ ಕೆ. ಮಲ್ಲಣ್ಣ ಅವರು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಮೊದಲ ಬಾರಿಗೆ ಆಯ್ಕೆಯಾದರು.1984 ರಲ್ಲಿ ನಡೆದ ಚುನಾವಣೆಯಲ್ಲಿ ಕೆ.ಹೆಚ್. ರಂಗನಾಥ್ ಅವರು ಆಯ್ಕೆ ಆಗುವ ಮೂಲಕ ಸಾಮಾನ್ಯ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಯೊಬ್ಬರು ಆಯ್ಕೆಯಾಗುವ ಮೂಲಕ ದಾಖಲೆ ಮಾಡಿದರು.
ಇಂತಹ ಆಶ್ಚರ್ಯಕರ ಫಲಿತಾಂಶಗಳಿಗೆ ಕಾರಣ ವಾಗಿರೋ ಈ ಕ್ಷೇತ್ರದಲ್ಲಿ ಯಾವುದೇ ಅಭ್ಯರ್ಥಿಯ ಸೋಲು ಗೆಲುವಿಗೆ ಪರಿಶಿಷ್ಟ ಜಾತಿಯಲ್ಲಿ ಬರುವ ಎಡಗೈ ಸಮುದಾಯವೇ ನಿರ್ಣಾಯಕ. ಕ್ಷೇತ್ರದಲ್ಲಿ ಜಾತಿವಾರು ಮತಗಳ ಲೆಕ್ಕಾಚಾರವನ್ನು ಗಮನಿಸಿದಾಗ,ಪರಿಶಿಷ್ಟ ಜಾತಿ : 4 ಲಕ್ಷ ,ಪರಿಶಿಷ್ಟ ಪಂಗಡ : 3.80 ಲಕ್ಷ ಲಿಂಗಾಯತ : 2.50 ಲಕ್ಷ,ಕುಂಚಿಟಿಗ ಒಕ್ಕಲಿಗ : 2.50 ಲಕ್ಷ, ಕುರುಬರು : 2ಲಕ್ಷ, ಯಾದವರು: 2ಲಕ್ಷ ಮತ್ತು ಅಲ್ಪಸಂಖ್ಯಾತರು ಸೇರಿದಂತೆ ಇತರರು : 3.08 ಲಕ್ಷ ಮತದಾರರು ಇದ್ದಾರೆ.
ಚುನಾವಣೆಯಲ್ಲಿ ಪ್ರಮುಖವಾಗಿ ಒಳ ಮೀಸಲಾತಿ ವಿಷಯ ಚರ್ಚೆಗೆ ಬರುತ್ತಿದೆ ಜೊತೆಗೆ ಭದ್ರಾ ಮೇಲ್ದಂಡೆ ಯೋಜನೆ ಕುರಿತಾಗಿಯೂ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.ಬಿಜೆಪಿಯಲ್ಲಿನ ಸಂವಿಧಾನ ವಿರೋಧಿ ಹೇಳಿಕೆ ಮತ್ತು ಒಳ ಮೀಸಲಾತಿಯಂತಹ ವಿಷಯದಲ್ಲಿನ ನಿಲುವುಗಳನ್ನು ವರ್ಗಕ್ಕೆ ಸೇರಿದ ದಲಿತ ಸಮುದಾಯ ಪ್ರಶ್ನೆ ಮಾಡತೊಡಗಿದೆ.
ಒಳ ಮೀಸಲಾತಿ ವಿಚಾರದಲ್ಲಿ ಕೇಂದ್ರ ಸಚಿವ ನಾರಾಯಣ ಸ್ವಾಮಿ ಅವರು ಗಟ್ಟಿಯಾದ ಧ್ವನಿಯಲ್ಲಿ ಮಾತನಾಡಲಿಲ್ಲ ಹಾಗೂ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ ಎಂಬ ಅಪಸ್ವರದ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ಅವರಿಗೆ ಈ ಬಾರಿ ಟಿಕೆಟ್ ನಿರಾಕರಿಸಿದೆ.
ಇವರ ಬದಲಿಗೆ ಬಿಜೆಪಿಯ ಹಿರಿಯ ನಾಯಕ ಹಾಗೂ ಬಾಗಲಕೋಟೆಯ ಪ್ರಭಾವಿ ಮುಖಂಡ ಗೋವಿಂದ ಕಾರಜೋಳ ಅವರನ್ನು ಕಣಕ್ಕಿಳಿಸಿದೆ. ಇವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಸ್ಥಳೀಯ ನಾಯಕರು ವಿರೋಧ ವ್ಯಕ್ತಪಡಿಸಿದ್ದರು ಅದರಲ್ಲೂ ಒಳಗೆ ಹೊಳಲ್ಕೆರೆ ಕ್ಷೇತ್ರದ ಶಾಸಕ ಚಂದ್ರಪ್ಪ ಅವರು ತಮ್ಮ ಪುತ್ರ ರಘು ಚಂದನ್ ಅವರಿಗೆ ಟಿಕೆಟ್ ನೀಡುವಂತೆ ಪಟ್ಟು ಹಿಡಿಯುವ ಮೂಲಕ ಬಿಜೆಪಿ ನಾಯಕತ್ವಕ್ಕೆ ಸವಾಲೊಡ್ಡಿದ್ದರು.
ಅದೇ ರೀತಿಯಲ್ಲಿ ಕಾಂಗ್ರೆಸ್ ನಲ್ಲೂ ಕೂಡ ವಿದ್ಯಮಾನಗಳು ನಡೆದು ಮಾಜಿ ಸಂಸದ ಚಂದ್ರಪ್ಪ ಅವರಿಗೆ ಟಿಕೆಟ್ ನೀಡಬಾರದು ಎಂದು ಅನೇಕರು ವರಿಷ್ಠರ ಮೇಲೆ ಒತ್ತಡ ಹೇರಿದ್ದರು ಆದರೆ ಅಂತಿಮವಾಗಿ ಎರಡು ಪಕ್ಷಗಳ ನಾಯಕರು ಸ್ಥಳೀಯರ ಬೇಡಿಕೆಯನ್ನು ಧಿಕ್ಕರಿಸಿ ತಾವು ಬಯಸಿದವರಿಗೆ ಟಿಕೆಟ್ ನೀಡಿವೆ.
ಇದಾದ ಬಳಿಕ ಉಭಯ ಪಕ್ಷಗಳಲ್ಲಿ ಉಂಟಾಗಿದ್ದ ಗೊಂದಲವನ್ನು ಎರಡು ಪಕ್ಷಗಳ ನಾಯಕರು ಬಗೆಹರಿಸಿದ್ದು ಜಿದ್ದಾಜಿದ್ದಿನ ಪೈಪೋಟಿ ನಡೆದಿದೆ.
ಬಿಜೆಪಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಪರವಾದ ಅಲೆ, ರಾಮ ಮಂದಿರ, ಲಿಂಗಾಯತ ಸಮುದಾಯದ ಬೆಂಬಲ ಮತ್ತು ಸಂಘ ಪರಿವಾರದ ಬೇರುಗಳು ದೊಡ್ಡ ಪ್ರಮಾಣದಲ್ಲಿ ಲಾಭ ತಂದು ಕೊಡಲಿದೆ ಎಂಬ ಲೆಕ್ಕಾಚಾರಗಳು ಕೇಳಿ ಬರುತ್ತಿದೆ.
ಇದರ ಜೊತೆಯಲ್ಲಿ ಮಾಜಿ ಶಾಸಕ ತಿಪ್ಪಾರೆಡ್ಡಿ ಗೂಳಿಹಟ್ಟಿ ಶೇಖರ್ ಪಕ್ಷದ ನಾಯಕತ್ವದ ಬಗ್ಗೆ ಹೊಂದಿರುವ ಅಪಸ್ವರ ಪಕ್ಷ ತೊರೆದಿರುವ ಪೂರ್ಣಿಮಾ ಶ್ರೀನಿವಾಸ್ ಅವರುಗಳ ಪಾತ್ರ ದೊಡ್ಡ ಪ್ರಮಾಣದಲ್ಲಿ ಹಿನ್ನಡೆ ಉಂಟುಮಾಡುತ್ತದೆ ಎಂದು ಹೇಳಲಾಗುತ್ತಿದೆ.
ಕಾಂಗ್ರೆಸ್ಸಿಗೆ ಗ್ಯಾರಂಟಿಗಳು ಕೈಹಿಡಿಯಲಿವೆ ಎಂಬ ಪ್ರಬಲ ವಿಶ್ವಾಸವಿದೆ ಜೊತೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಕೆಲಸ ಮಾಡಿದ್ದ ಚಂದ್ರಪ್ಪ ಅವರ ಎಲ್ಲರನ್ನೂ ಹೊಂದಿಕೊಂಡು ಹೋಗುವ ಮನೋಭಾವ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಾಯಕತ್ವ ಅಲ್ಪಸಂಖ್ಯಾತ, ಯಾದವ ಮತ್ತು ಇತರೆ ಹಿಂದುಳಿದ ಸಮುದಾಯದ ಮತಗಳು ದೊಡ್ಡ ಪ್ರಮಾಣದಲ್ಲಿ ಕಾಂಗ್ರೆಸ್ ಪರವಾಗಿ ಚಲಾವಣೆಯಾಗಲಿವೆ ಎಂಬ ಲೆಕ್ಕಾಚಾರ ಹಾಕಲಾಗಿದೆ.
ಸ್ಥಳೀಯವಾಗಿ ಕಾಂಗ್ರೆಸ್ ನಾಯಕರಲ್ಲಿನ ಗೊಂದಲಗಳು, ಒಂದು ಅವಧಿಗೆ ಸಂಸದರಾಗಿ ಕೆಲಸ ಮಾಡಿದ ಚಂದ್ರಪ್ಪ ಅವರು ಅಂತ ಹೇಳಿಕೊಳ್ಳುವ ಯಾವುದೇ ಸಾಧನೆ ಮಾಡಿಲ್ಲ ಒಳ ಮೀಸಲಾತಿ ವಿಚಾರವಾಗಿ ಇವರ ನಿಲುವು ಅಸ್ಪಷ್ಟತೆಯಿಂದ ಕೂಡಿದೆ ಎಂಬ ಆರೋಪಗಳು ಕಾಂಗ್ರೆಸ್ಸಿಗೆ ಹಿನ್ನಡೆ ಉಂಟುಮಾಡುವ ಸಾಧ್ಯತೆ ಇದೆ.