ಬೆಂಗಳೂರು, ಏ.2: ರಾಜ್ಯದಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆ ಅಖಾಡಕ್ಕೆ ಬಿಸಿಲೇರಿದಂತೆ ಭರ್ಜರಿ ರಂಗು ಬರತೊಡಗಿದೆ. ಮೊದಲ ಹಂತದ ಚುನಾವಣೆ ನಡೆಯುತ್ತಿರುವ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಭರಾಟೆಯಿಂದ ನಾಮಪತ್ರ ಸಲ್ಲಿಸುತ್ತಿದ್ದರೆ, ಕಾರ್ಯಕರ್ತರು ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ.
ಮೂರು ಪಕ್ಷಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಕಸರತ್ತು ಪೂರ್ಣಗೊಂಡಿದೆ. ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಯಲ್ಲಿ ಉಂಟಾಗಿದ್ದ ಗೊಂದಲದಿಂದ ಹಲವೆಡೆ ಬಂಡಾಯದ ಅಪಸ್ವರ ಕಾಣಿಸಿಕೊಂಡಿದ್ದು ಅದನ್ನು ಶಮನ ಮಾಡುವಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಹೈಕಮಾಂಡ್ ಬಹುತೇಕ ಯಶಸ್ವಿಯಾಗಿವೆ.
ಇದೀಗ ಕ್ಷೇತ್ರವಾರು ಮತಗಳ ವಿವರ, ಜಾತಿವಾರು ಲೆಕ್ಕಾಚಾರ ಕಾರ್ಯಕರ್ತರು ಮತ್ತು ಮುಖಂಡರು ಹೊಂದಿರುವ ಪ್ರಭಾವಗಳ ಪಟ್ಟಿಯನ್ನು ಹಿಡಿದುಕೊಂಡು ರಾಜಕೀಯ ನಾಯಕರು ಸೋಲು ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ ಯಾವ ಪ್ರದೇಶದಲ್ಲಿ ತಮಗೆ ಹೆಚ್ಚಿನ ಮತ ಬರಬಹುದು ಎಲ್ಲಿ ತಮ್ಮ ಅಭ್ಯರ್ಥಿ ಹಿನ್ನಡೆ ಅನುಭವಿಸುತ್ತಿದ್ದಾರೆ ಎಂಬ ವರದಿಗಳನ್ನು ಇಟ್ಟುಕೊಂಡು ಲೋಪಗಳನ್ನು ಸರಿಪಡಿಸುವ ಕೆಲಸದಲ್ಲಿ ತೊಡಗಿದ್ದಾರೆ.
ಈ ನಡುವೆ ಗುಪ್ತದಳ ರಾಜಕೀಯ ಎಲ್ಲಾ ಕ್ಷೇತ್ರಗಳಲ್ಲಿ ಸಂಚರಿಸಿ ತನ್ನ ಬಾತ್ಮಿದಾರರು ನೀಡಿರುವ ಮಾಹಿತಿಯನ್ನು ಆಧರಿಸಿ ಚುನಾವಣೆಯಲ್ಲಿ ಯಾರು ಗೆಲ್ಲಬಹುದು ಎಂಬ ಕುರಿತಂತೆ ಸರ್ಕಾರಕ್ಕೆ ವರದಿಯನ್ನು ರವಾನಿಸಿದೆ.
ಗುಪ್ತದಳ ಸರ್ಕಾರಕ್ಕೆ ರವಾನಿಸಿರುವ ವರದಿಯಲ್ಲಿ ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಅತ್ಯಧಿಕ ಸ್ಥಾನಗಳನ್ನು ಗಳಿಸಲಿದೆ. ರಾಜ್ಯದಲ್ಲಿ ಬಿಜೆಪಿ ಪ್ರಧಾನಿ ಮೋದಿ ಮತ್ತು ರಾಮ ಮಂದಿರ ಪರವಾದ ಅಲೆಯನ್ನು ಎಬ್ಬಿಸಲು ದೊಡ್ಡ ಪ್ರಯತ್ನ ಮಾಡುತ್ತಿದ್ದರೂ ಅದು ನಿರೀಕ್ಷಿತ ಫಲಿತಾಂಶ ಸಿಗುತ್ತಿಲ್ಲ. ಪ್ರಮುಖವಾಗಿ ನಾಯಕರ ನಡುವಿನ ಆಂತರಿಕ ಭಿನ್ನಮತ ದೊಡ್ಡ ಪರಿಣಾಮ ಬೀರುತ್ತದೆ ಅದರಲ್ಲೂ ಉತ್ತರ ಕರ್ನಾಟಕದ ಹಲವು ಕ್ಷೇತ್ರಗಳಲ್ಲಿ ಬಿಜೆಪಿಗೆ ದೊಡ್ಡ ಹಿನ್ನಡೆ ಉಂಟಾಗುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿರುವುದಾಗಿ ಗೊತ್ತಾಗಿದೆ.
ರಾಜ್ಯದಲ್ಲಿ ಕಾಣಿಸಿಕೊಂಡಿರುವ ತೀವ್ರ ಸ್ವರೂಪದ ಬರ, ಹಾಗೂ ಕುಡಿಯುವ ನೀರಿನ ಸಮಸ್ಯೆ, ನಿರುದ್ಯೋಗ ಚುನಾವಣೆಯಲ್ಲಿ ಸಾಕಷ್ಟು ಪ್ರಮಾಣದ ಚರ್ಚೆಗೆ ಗ್ರಾಸ ಒದಗಿಸಿದೆ ಇದರ ನಡುವೆಯೇ ರಾಜ್ಯ ಸರ್ಕಾರ ನೀಡಿರುವ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು ಕಾಂಗ್ರೆಸ್ ಪರ ಮಾತನಾಡುತ್ತಿದ್ದಾರೆ ಪ್ರಮುಖವಾಗಿ ಮಹಿಳಾ ಮತದಾರರನ್ನು ಕಾಂಗ್ರೆಸ್ ಪರ ಒಲವು ಹೊಂದಿದ್ದಾರೆ ಎಂಬ ಅಂಶವನ್ನು ಗುಪ್ತದಳ ತನ್ನ ವರದಿಯಲ್ಲಿ ಉಲ್ಲೇಖಿಸಿರುವದಾಗಿ ಗೊತ್ತಾಗಿದೆ.
ಇದಕ್ಕೆ ಪ್ರತಿಯಾಗಿ ಕರಾವಳಿ ಮತ್ತು ದಕ್ಷಿಣ ಕರ್ನಾಟಕದಲ್ಲಿ ಬಿಜೆಪಿಗೆ ಉತ್ತಮ ಅವಕಾಶಗಳನ್ನು ಕಲ್ಪಿಸಿದೆ ಪ್ರಮುಖವಾಗಿ ಜಾತ್ಯಾತೀತ ಜನತಾದಳದೊಂದಿಗಿನ ಮೈತ್ರಿ ಬಿಜೆಪಿಯ ಮತ ಬ್ಯಾಂಕ್ ಹಿಗ್ಗುವಂತೆ ಮಾಡಿದೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕಣಕ್ಕಿಳಿದಿರುವುದು ಬಿಜೆಪಿಯ ಶೇಕಡಾವಾರು ಮತಗಳ ಗಳಿಕೆ ಪ್ರಮಾಣ ಹೆಚ್ಚಾಗುವಂತೆ ಮಾಡುವ ಸಾಧ್ಯತೆ ಇದೆ ಎಂದು ತನ್ನ ವರದಿಯಲ್ಲಿ ವಿವರಿಸಿರುವುದಾಗಿ ತಿಳಿದು ಬಂದಿದೆ.
ಸದ್ಯಕ್ಕೆ ಬಂದಿರುವ ಮಾಹಿತಿಯ ಪ್ರಕಾರ ರಾಜ್ಯದಲ್ಲಿ ಕಾಂಗ್ರೆಸ್ 14 ರಿಂದ 16 ಬಿಜೆಪಿ 10 ರಿಂದ 12 ಮತ್ತು ಜೆಡಿಎಸ್ ಒಂದರಿಂದ ಎರಡು ಸ್ಥಾನ ಗೆಲ್ಲುವ ಸಾಧ್ಯತೆ ಇದೆ ಎಂದು ತಿಳಿಸಿರುವುದಾಗಿ ಗೊತ್ತಾಗಿದೆ.