ಬೆಂಗಳೂರು, ಮಾ.18- ರಾಜ್ಯದಲ್ಲಿ ತೀವ್ರ ಸ್ವರೂಪವಾದ ಬರಗಾಲ ಕಾಣಿಸಿಕೊಂಡಿದ್ದರೂ, ಪರಿಹಾರಕ್ಕಾಗಿ ಅಗತ್ಯ ನೆರವು ನೀಡದ ಪ್ರಧಾನಿ ನರೇಂದ್ರ ಮೋದಿ ಇದೀಗ ರಾಜಕೀಯ ಕಾರಣಕ್ಕಾಗಿ ಕರ್ನಾಟಕ ಪ್ರವಾಸ ಕೈಗೊಂಡಿದ್ದು ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಪಾದಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯದ ಬಗ್ಗೆ ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ಮುಂದುವರೆದಿದೆ ರಾಜ್ಯದ ನ್ಯಾಯಯುತ ತೆರಿಗೆ ಪಾಲು ನೀಡುತ್ತಿಲ್ಲ ಎಲ್ಲದರಲ್ಲೂ ರಾಜಕಾರಣ ಮಾಡಲಾಗುತ್ತಿದೆ ಬರ ಪರಿಹಾರಕ್ಕೆ ನೆರವು ಕೋರಿದರು ಬಿಡಿಗಾಸು ಕೊಟ್ಟಿಲ್ಲ ಎಂದು ದೂರಿದರು.
ರಾಜ್ಯದಲ್ಲಿ ಸಂಗ್ರಹವಾಗುತ್ತಿರುವ ಒಟ್ಟು ತೆರಿಗೆಯ ಶೇ.13ರಷ್ಟನ್ನು ಮಾತ್ರ ಕರ್ನಾಟಕಕ್ಕೆ ನಿಗದಿಪಡಿಸಲಾಗಿದೆ. ಹೀಗಾಗಿ ನಾವು ನೆರವಿಗೆ ಕೇಂದ್ರದ ಮುಂದೆ ನಿಲ್ಲುವಂತಾಗಿದೆ ಕೇಂದ್ರ ಸರ್ಕಾರ ನಮಗೆ ನೆರವು ನೀಡುವುದು ಬೇಡ ನಮ್ಮ ಪಾಲಿನ ತೆರಿಗೆ ಸಂಪೂರ್ಣ ಕೊಟ್ಟುಬಿಟ್ಟರೆ ನಾವೇ ಎಲ್ಲ ಯೋಜನೆಗಳನ್ನು ಕೈಗೊಳ್ಳುತ್ತೇವೆ ಇವರ ಮುಂದೆ ಕೈ ಚಾಚುವುದಿಲ್ಲ ಎಂದು ಹೇಳಿದರು.
ತಮ್ಮ ಸರ್ಕಾರದ ವಿರುದ್ಧ ಆರೋಪ ಮಾಡುತ್ತಿರುವ ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿ ನಾಯಕರು ದೂರುಗಳನ್ನು ನ್ಯಾಯಮೂರ್ತಿ ನಾಗಮೋಹನದಾಸ್ ಆಯೋಗಕ್ಕೆ ಸಲ್ಲಿಸಲಿ ಎಂದು ಸವಾಲು ಹಾಕಿದ ಅವರು ಈ ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಶೇಕಡ 40ರಷ್ಟು ಕಮಿಷನ್ ಆರೋಪ ಕೇಳಿ ಬಂದಿದ್ದು ಅದಕ್ಕೆ ಪ್ರಧಾನಿಗಳು ಉತ್ತರ ನೀಡಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಪ್ರಧಾನಿ ಮೋದಿ ಮತ್ತು ರಾಮನ ಹೆಸರಿನಲ್ಲಿ ಮತ ಕೇಳಲಿ ನಾವು ಸೀತಾರಾಮನ ಹೆಸರಿನಲ್ಲಿ ಮತ ಕೇಳುತ್ತೇವೆ ಸೀತಾರಾಮ ಯಾರೊಬ್ಬರ ಆಸ್ತಿಯೂ ಅಲ್ಲ ಅವನು ನಮಗೂ ಕೂಡ ದೇವರು ಎಂದರು.
ಈ ಬಾರಿ ಕರ್ನಾಟಕದಲ್ಲಿ ಕಾಂಗ್ರೆಸ್ ಕನಿಷ್ಠ 20 ಸ್ಥಾನಗಳಲ್ಲಿ ಜಯಗಳಿಸಲಿದೆ ಇದಕ್ಕೆ ಪ್ರಮುಖ ಕಾರಣ ನಾವು ನುಡಿದಂತೆ ನಡೆದಿದ್ದೇವೆ ಜನ ಕಾಂಗ್ರೆಸ್ ಪಕ್ಷದ ಮೇಲೆ ವಿಶ್ವಾಸ ಇಟ್ಟಿದ್ದಾರೆ ಬಿಜೆಪಿ ಅವರಂತೆ ಸುಳ್ಳು ಹೇಳಿಲ್ಲ ಹೀಗಾಗಿ ಜನ ತಮಗೆ ಬೆಂಬಲ ನೀಡುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತಾವು ಕೇವಲ ಮೈಸೂರಿಗೆ ಮಾತ್ರ ಸೀಮಿತವಲ್ಲ ಇಡೀ ಕರ್ನಾಟಕಕ್ಕೆ ನಾನು ಸೇರಿದವನು ರಾಜ್ಯದ ಎಲ್ಲಾ ಕ್ಷೇತ್ರಗಳು ನನ್ನ ತವರು ಕ್ಷೇತ್ರಗಳೇ ಎಲ್ಲಾ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲ್ಲಬೇಕು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.