ಬೆಂಗಳೂರು, ನ.21- ತಮ್ಮ ಒಡೆತನದಲ್ಲಿದ್ದ ಸಿನಿಮಾ ಮಂದಿರದಲ್ಲಿ ಬ್ಲೂಫಿಲಂ ತೋರಿಸಲಾಗುತಿತ್ತು ಎಂದುಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ (HD Kumaraswamy) ಮಾಡಿದ ಆರೋಪ ಸಾಬೀತು ಪಡಿಸಿದರೆ ನಾನು ರಾಜಕೀಯದಿಂದ ನಿವೃತ್ತನಾಗುತ್ತೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸವಾಲು ಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರವಿಲ್ಲದೆ ಕುಮಾರಸ್ವಾಮಿ ಹತಾಶರಾಗಿದ್ದಾರೆ. ಬಾಯಿಗೆ ಬಂದಂತೆ ಮಾತನಾಡಿ ಜನರ ನಡುವೆ ನಗೆ ಪಾಟಲಿಗೆ ಈಡಾಗುತ್ತಿದ್ದಾರೆ ಎಂದರು. ರಾಜಕಾರಣದಲ್ಲಿ ನಾನು ಅಂತ ಕೆಲಸ ಮಾಡಿಲ್ಲ, ಮಾಡಿದ್ದನ್ನು ಸಾಬೀತು ಪಡಿಸಿ ಇಂದೇ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ. ಈ ಹಿಂದೆ ಅವರ ತಂದೆ ತಮ್ಮ ವಿರುದ್ಧ ಚುನಾವಣೆಗೆ ನಿಂತು ಸೋಲು ಕಂಡಿದ್ದರು. ಆಗ ಏಕೆ ಈ ವಿಚಾರ ಪ್ರಸ್ತಾಪ ಮಾಡಲಿಲ್ಲ. ಮಾಜಿ ಮುಖ್ಯಮಂತ್ರಿ ಎಂದರೆ ಒಂದು ಘನತೆ, ಗೌರವ ಇರಬೇಕು. ಕುಮಾರಸ್ವಾಮಿ ಹತಾಶರಾಗಿ ನೀಡುತ್ತಿರುವ ಹೇಳಿಕೆಗಳು ಅವರನ್ನು ನಾಚಿಕೆಗೀಡು ಮಾಡುತ್ತಿವೆ ಎಂದು ಹೇಳಿದರು.
ಕುಮಾರಸ್ವಾಮಿಯವರು (HD Kumaraswamy) ಕನಕಪುರಕ್ಕೆ ಹೋಗಲಿ ನಮ್ಮ ಪಕ್ಷದ ಕಾರ್ಯಕರ್ತರು ಬೇಡ, ಅವರ ಪಕ್ಷ ಕಾರ್ಯಕರ್ತರನ್ನೇ ಕೇಳಿ ನನ್ನ ಬಗ್ಗೆ ತಿಳಿದುಕೊಳ್ಳಲಿ. ಕನಕಪುರದ ಜನ ನಾನು ಚುನಾವಣೆಯಲ್ಲಿ ಕ್ಷೇತ್ರಕ್ಕೆ ಭೇಟಿ ನೀಡದೆ ಇದ್ದರೂ 1.23,000 ಮತಗಳ ಅಂತರದಿಂದ ಗೆಲ್ಲಿಸಿದ್ದಾರೆ. ಈವರೆಗೂ ಸಾಕಿ ಸಲಹಿದ್ದಾರೆ ಎಂದರು
ಕುಮಾರಸ್ವಾಮಿಯವರ ವರ್ತನೆ ಸರಿಯಲ್ಲ. ಕುಮಾರಸ್ವಾಮಿ ವಿರುದ್ಧ ನಡೆದಿರುವ ಪೋಸ್ಟರ್ ವಾರ್ ಬಗ್ಗೆಯೂ ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು. ಯಾರೇ ಇಂತಹ ಕೆಲಸ ಮಾಡಿದ್ದರೂ ಅದು ತಪ್ಪು. ಅಂತ ಕೀಳು ರಾಜಕಾರಣಕ್ಕೆ ನಾನು ಪ್ರೋತ್ಸಾಹ ಕೊಡುವುದಿಲ್ಲ ಎಂದರು.