ಬೆಂಗಳೂರು,ಜೂ.3:
ಕನ್ನಡ ಭಾಷೆಯ ಕುರಿತು ಹೇಳಿಕೆ ನೀಡಿ ವಿವಾದಕ್ಕೆ ಕಾರಣವಾಗಿರುವ ಬಹುಭಾಷಾ ನಟಿ ಕಮಲ ಹಾಸನ್ ಅವರಿಗೆ ರಾಜ್ಯ ಹೈಕೋರ್ಟ್ ತಪರಾಕಿ ನೀಡಿದೆ.
ಕನ್ನಡ ಭಾಷೆಯ ಕುರಿತು ಹೇಳಿಕೆ ನೀಡಿರುವ ಕಮಲಹಾಸನ್ ಅವರು ಭಾಷಾ ತಜ್ಞರೆ ಅಥವಾ ಇತಿಹಾಸಕಾರರೇ ಎಂದು ಖಾರವಾಗಿ ಪ್ರಶ್ನಿಸಿದೆ.
ಕಮಲಹಾಸನ್ ಅಭಿನಯದ ಥಗ್ ಲೈಫ್ ಸಿನಿಮಾ ಬಿಡುಗಡೆಗೆ ಕರ್ನಾಟಕದಲ್ಲಿ ಅವಕಾಶ ಕೊಡಿಸಬೇಕು ಎಂದು ಕೋರಿ ಅವರ ಪರ ವಕೀಲರು ಸಲ್ಲಿಸಿರುವ ಆರ್ಜಿಯನ್ನು ನ್ಯಾಯಮೂರ್ತಿ ನಾಗ ಪ್ರಸನ್ನ ವಿಚಾರಣೆ ನಡೆಸಿದರು.
ಈ ವೇಳೆ ಅರ್ಜಿದಾರರನ್ನು ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳು ನೆಲ, ಭಾಷೆಯ ಜೊತೆ ಜನರ ಭಾವನೆ ಇರುತ್ತದೆ. ಜನರ ಭಾವನೆಗೆ ಯಾರೂ ಧಕ್ಕೆ ತರಬಾರದು. ಜನರು ಕ್ಷಮೆ ಕೇಳುವಂತೆ ಒತ್ತಾಯಿಸುತ್ತಿದ್ದಾರೆ. ಕಮಲ್ ಹಾಸನ್ ಕ್ಷಮೆ ಕೇಳಿದ್ದಾರಾ ಎಂದು ಪ್ರಶ್ನಿಸಿದರು.
ಭಾಷೆ ಹುಟ್ಟಿದರ ಬಗ್ಗೆ ನೀವು ಮಾತನಾಡುವುದಕ್ಕೆ ನೀವು ಭಾಷಾ ತಜ್ಞರೇ ಅಥವಾ ಇತಿಹಾಸಕಾರರೇ? ಒಂದೇ ಒಂದು ಕ್ಷಮೆ ಕೇಳೋದಕ್ಕೆ ಯಾಕೆ ಇಷ್ಟೊಂದು ಹಾವ ಭಾವ? ಈ ಹಿಂದೆ ರಾಜಗೋಪಾಲಾಚಾರಿ ವಿವಾದಾತ್ಮಕ ಹೇಳಿಕೆ ನೀಡಿದ ಬಳಿಕ ಕ್ಷಮೆಯಾಚನೆ ಮಾಡಿದ್ದು ನಿಮಗೆ ಗೊತ್ತಿಲ್ಲವೆ ಎಂದು ಪ್ರಶ್ನಿಸಿದರು.
350 ಕೋಟಿ ರೂ. ಸಿನಿಮಾಗೆ ಹಾಕಿದ್ದೀರಿ ಎನ್ನುತ್ತೀರಿ. ಭಾವನೆಗೆ ಧಕ್ಕೆ ಮಾಡಿ ಇಲ್ಲಿ ಸಂಪಾದನೆ ಮಾಡಬೇಕಾ? ಎಲ್ಲವೂ ಸರಾಗವಾಗಿ ಆಗಬೇಕು ಅಂದರೆ ಕ್ಷಮೆಯನ್ನು ಕೋರಿ. ಅಭಿವ್ಯಕ್ತಿ ಸ್ವಾತಂತ್ರ್ಯದಿಂದ ಭಾವನೆ ಧಕ್ಕೆ ಆಗಬಾರದು. ಕೋಟ್ಯಂತರ ರೂಪಾಯಿ ಹಾಕಿದ್ದೀರಿ. ಕರ್ನಾಟಕದಲ್ಲಿ ಯಾಕೆ ಸಿನಿಮಾ ಬಿಡುಗಡೆಮಾಡುತ್ತೀರಿ? ಕರ್ನಾಟಕವನ್ನು ಬಿಟ್ಟು ಬಿಡಿ ಎಂದು ಖಾರವಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಸಿನಿಮಾ ನೋಡುವುದು ಎಲ್ಲರ ಮೂಲಭೂತ ಹಕ್ಕು. ಹೀಗಾಗಿ ಭದ್ರತೆಗೆ ನೀಡಲು ಮನವಿ ಮಾಡುತ್ತಿದ್ದೇವೆ. ಏನೋ ಹೇಳಲು ಹೋಗಿ ಏನೋ ಆಗಿದೆ ಎಂದು ಕಮಲ್ ಪರ ವಕೀಲರು ಮನವಿ ಮಾಡಿಕೊಂಡರು.
ಇದಕ್ಕೆ ನಾಲಿಗೆ ತಪ್ಪಾಗಿ ಹೇಳಿದರೆ ಇಷ್ಟು ಹೊತ್ತಿಗೆ ಕ್ಷಮೆ ಕೇಳಬಹುದಿತ್ತು. ಚಿತ್ರ ಮಂದಿರಕ್ಕೆ ಭದ್ರತೆ ಬೇಕಾ? ಬೇಡ್ವಾ ಎಂದು ಆದೇಶ ಮಾಡುವ ಮೊದಲು ಕ್ಷಮೆ ಕೇಳಲಿ. ಒಂದು ವೇಳೆ ಇತಿಹಾಸಕಾರ ದಾಖಲೆ ಸಮೇತ ಹೇಳಿದರೆ ಚರ್ಚೆ ವಿಷಯ ಆಗುತ್ತಿತ್ತು. ಕ್ಷಮೆ ಕೇಳದ ಹೊರತು ಹೇಳಿಕೆ ಹಿಂಪಡೆಯಲು ಸಾಧ್ಯವಿಲ್ಲ ಎಂದು ಸೂಚಿಸಿದರು.
Previous Articleಕರಾವಳಿಯಲ್ಲಿ ಕೋಮು ಗಲಭೆಗೆ ಇವರೆ ಕಾರಣವಂತೆ ನೋಡಿ !
Next Article ಗೌರವ ಡಾಕ್ಟರೇಟ್ ಬೇಡ ಎಂದ ಮಂತ್ರಿ.