ಬೆಂಗಳೂರು,ಜು.21: ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದು, ವೈದ್ಯರ ಸೂಚನೆ ಮೇರೆಗೆ ಚಿಕಿತ್ಸೆ ಹಾಗೂ ವಿಶ್ರಾಂತಿಗೆ ಮುಂದಾಗಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿಕೊಂಡಿರುವ ಡಿಕೆ ಶಿವಕುಮಾರ್, ” ನಾಳೆಯಿಂದ ಮೂರು ದಿನಗಳ ಕಾಲ ಯಾರನ್ನೂ ಭೇಟಿ ಆಗಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.
ಇದರಿಂದ ಸಾರ್ವಜನಿಕರು, ಪಕ್ಷದ ಮುಖಂಡರು, ಕಾರ್ಯಕರ್ತರು ಸೇರಿದಂತೆ ಯಾರನ್ನೂ ಭೇಟಿ ಆಗಲು ಸಾಧ್ಯವಾಗುವುದಿಲ್ಲ. ಇದಕ್ಕಾಗಿ ವಿಷಾದಿಸುತ್ತೇನೆ. ಯಾರೂ ತಪ್ಪು ತಿಳಿಯಬಾರದು ” ಎಂದು ಬರೆದುಕೊಂಡಿದ್ದಾರೆ.
ಅಹವಾಲು:
ಈ ನಡುವೆ ಅನಾರೋಗ್ಯದ ನಡುವೆಯೂ ತಮ್ಮ ಕ್ಷೇತ್ರ ಕನಕಪುರದಲ್ಲಿ ಜನರ ಅಹವಾಲು ಸ್ವೀಕರಿಸುವ ಮೂಲಕ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಜನರ ಮನ ಗೆದ್ದರು. ಕಳೆದ ಒಂದು ವಾರದಿಂದ ಡೆಂಗ್ಯೂ ಜ್ವರದಿಂದ ಬಳಲುತ್ತಿರುವ ಶಿವಕುಮಾರ್ ಅವರು ಕೋಡಿಹಳ್ಳಿ ಹೋಬಳಿಯಲ್ಲಿ ಸೋಮವಾರ ‘ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ” ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ವಿಧವಾ ಪಿಂಚಣಿ, ಬಗರ್ ಹುಕುಂ ಸಾಗುವಳಿ ಜಮೀನು, ನಿವೇಶನ, ಮನೆ, ಇ-ಖಾತಾ, ಪಡಿತರ ಕಾರ್ಡ್ ಗಾಗಿ ನೂರಾರು ಜನರು ಮನವಿ ಸಲ್ಲಿಸಿದರು. ಜನರ ಅರ್ಜಿಗಳನ್ನು ಸ್ವೀಕರಿಸಿ, ಸೂಕ್ತ ರೀತಿಯಲ್ಲಿ ಸ್ಪಂದಿಸಿ, ಪರಿಹಾರ ನೀಡುವುದಾಗಿ ಡಿಸಿಎಂ ಅವರು ಭರವಸೆ ನೀಡಿದರು.
ನೂತನವಾಗಿ ರಚನೆಯಾದ ಕಂದಾಯ ಗ್ರಾಮಗಳ ಹಕ್ಕು ಪತ್ರ ಮತ್ತು ಫಲಾನುಭವಿಗಳಿಗೆ ಇ- ಸ್ವತ್ತು ದಾಖಲೆಗಳನ್ನು ವಿತರಿಸಿದರು. ಫಲಾನುಭವಿಗಳಿಗೆ ಮೀನು ಹಿಡಿಯುವ ಸಲಕರಣೆಗಳ ಕಿಟ್, ವಿವಿಧ ಇಲಾಖೆಗಳ ವತಿಯಿಂದ ಸ್ಥಳೀಯ ಫಲಾನುಭವಿಗಳಿಗೆ ಟ್ಯಾಕ್ಸಿ ಹಾಗೂ ವಿಕಲಚೇತನರಿಗೆ ದ್ವಿಚಕ್ರ ವಾಹನ ವಿತರಣೆ ಮಾಡಿದರು.