ಬೆಂಗಳೂರು,ಜು.7- ಯುವತಿಯ ವಿಚಾರಕ್ಕೆ ಯುವಕನ ಬಟ್ಟೆ ಬಿಚ್ಚಿ ಮರ್ಮಾಂಗ ತುಳಿದು ಚಿತ್ರದುರ್ಗದ ರೇಣುಕಾಸ್ವಾಮಿ ಪ್ರಕರಣದಂತೆ
ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಸೋಲದೇವನಹಳ್ಳಿಯಲ್ಲಿ ನಡೆದೆ.
ಹಲ್ಲೆಗೊಳಗಾದ ಯುವಕ ಕುಶಾಲ್ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು,ಆತನ ಸ್ಥಿತಿ ಗಂಭೀರವಾಗಿದೆ.
ಪ್ರಕರಣ ಸಂಬಂಧ ಹೇಮಂತ್, ಯಶವಂತ್, ಶಿವಶಂಕರ್, ಶಶಾಂಕ್ ಗೌಡ ಸೇರಿ 10 ಮಂದಿ ಆರೋಪಿಗಳನ್ನು ಸೋಲದೇವನಹಳ್ಳಿ ಪೊಲೀಸರು ಬಂಧಿಸಿ ಪ್ರಕರಣದ ಸೂತ್ರಧಾರಿ 17 ವರ್ಷದ ಬಾಲಕಿಯನ್ನು ವಶಕ್ಕೆ ಪಡೆದು ಕಾನೂನು ಸಂಘರ್ಷ ಸಾಂತ್ವನ ಕೇಂದ್ರದಲ್ಲಿ ಇರಿಸಿ ತೀವ್ರ ವಿಚಾರಣೆ ನಡೆಸಿದ್ದಾರೆ.
17 ವರ್ಷದ ಹುಡಗಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವಾಗಲೇ ಯುವಕ ಕುಶಾಲ್ನ ಪರಿಚಯವಾಗಿ ಪರಿಚಯ ಪ್ರೇಮಕ್ಕೆ ತಿರುಗಿ ಶಾಲೆ ಮುಗಿಸಿಕೊಂಡು ಕಾಲೇಜು ಮೆಟ್ಟಿಲು ಹತ್ತಿದ ಮೇಲೆ ಪ್ರೇಮಿಗಳ ನಡುವೆ ಬಿರುಕು ಮೂಡಿದೆ.
ಎರಡು ವರ್ಷದ ಪ್ರೀತಿ ಕೆಲ ದಿನಗಳ ಹಿಂದೆಯಷ್ಟೇ ಬ್ರೇಕ್ ಅಪ್ ಆಗಿದೆ. ಬಳಿಕ ಯುವಕ ಕುಶಾಲ್ ಖಾಸಗಿ ಕ್ಷಣದ ಫೋಟೋಗಳನ್ನು ವೈರಲ್ ಮಾಡುವುದಾಗಿ ಬಾಲಕಿಗೆ ಬ್ಲ್ಯಾಕ್ ಮೇಲ್ ಮಾಡಿದ್ದಾನೆ.
ಸಂಚು ರೂಪಿಸಿದ ಬಾಲಕಿ:
ಈ ವಿಚಾರವನ್ನು ಬಾಲಕಿ ತನ್ನ ಸ್ನೇಹಿತರ ಮುಂದೆ ನೋವಿನಿಂದಕೊಂಡು ಹೇಳಿಕೊಂಡು ಕುಶಾಲ್ನನ್ನು ಅಪಹರಿಸಿ ಬುದ್ಧಿ ಕಲಿಸುವಂತೆ ವಿನಂತಿಸಿದ್ದಾಳೆ. ಅದರಂತೆ ಅಕೆಯ ಸ್ನೇಹಿತರು, ಕುಶಾಲ್ನನ್ನು ಸಂಪರ್ಕಿಸಿ ಮಾತುಕತೆ ಮೂಲಕ ಬಗೆಹರಿಸಿಕೊಳ್ಳೋಣ ಬಾ ಅಂತ ಬಾಗಲಗುಂಟೆಯ ಎಜಿಪಿ ಲೇಔಟ್ಗೆ ಕರೆಸಿಕೊಂಡಿದ್ದಾರೆ.
ಸ್ಥಳಕ್ಕೆ ಬಂದ ಕುಶಾಲ್ನನ್ನು ಅಪಹರಿಸಿ ಕಾರಿನಲ್ಲಿ ಕೂರಿಸಿಕೊಂಡು ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾರೆ. ಕಾರಿನಲ್ಲಿ ಬಾಲಕಿಯೂ ಇದ್ದಳು. ಕಾರ್ನಲ್ಲಿ ಆಕೆಯ ಮುಂದೆಯೇ ಆರೋಪಿಗಳು ಕುಶಾಲ್ ಮೇಲೆ ಹಲ್ಲೆ ಮಾಡಿ ಹಾಡು ಹೇಳುವಂತೆ ಒತ್ತಾಯಿಸಿದ್ದಾರೆ.
ರೇಣುಕಾಸ್ವಾಮಿಯಂತೆ ಹಲ್ಲೆ:
ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋದ ಮೇಲೆ ಆರೋಪಿಗಳು ಆಕೆಯ ಮುಂದೆಯೇ ಯುವಕ ಕುಶಾಲ್ನ ಬಟ್ಟೆ ಬಿಚ್ಚಿಸಿ ಬೆತ್ತಲಗೊಳಿಸಿ ವಿಕೃತಿ ಮೆರೆದು ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ.
ಪ್ರಕರಣ ಸಂಬಂಧ ಬಾಲಕಿಯನ್ನು ವಶಕ್ಕೆ ಪಡೆದು ಇತರ ಜನರನ್ನು ಸೋಲದೇವನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಇವರಲ್ಲಿ 8 ಜನ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಆರೋಪಿಗಳಾದ ಶಶಾಂಕ್ ಗೌಡ, ಸಲ್ಮಾನ್, ಯಶ್ವಂತ್, ವಿದ್ಯಾರ್ಥಿಗಳಾದ ತೇಜಸ್, ರಾಕೇಶ್, ರಾಹುಲ್ ಮತ್ತು ಹೇಮಂತ್ ಬಿಡುಗಡೆಯಾದವರು. ಆರೋಪಿ ಹೇಮಂತ ಈ ಹಿಂದೆ ಹಲವು ಬಾರಿ ಹಲ್ಲೆ ಪ್ರಕರಣದಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿ ಬಂದಿದ್ದಾನೆ.
ಪ್ರೇರಣೆ ಗೊತ್ತಿಲ್ಲ: ಪರಂ
ಪ್ರಕರಣ ಸಂಬಂಧ ಗೃಹ ಸಚಿವ ಜಿ. ಪರಮೇಶ್ವರ್ ಮಾತನಾಡಿ, ಪ್ರಕರಣ ಸಂಬಂಧ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಮಾತನಾಡುತ್ತೇನೆ. ರೇಣುಕಾಸ್ವಾಮಿ ಪ್ರಕರಣ ಪ್ರೇರಣೆ ಆಗುತ್ತಿದೆಯಾ ಎನ್ನುವುದು ಗೊತ್ತಿಲ್ಲ. ಆ ಬಗ್ಗೆ ಮನಶ್ಶಾಸ್ತ್ರಜ್ಞರು ಅಧ್ಯಯನ ಮಾಡಿ ಹೇಳಬೇಕಾಗುತ್ತದೆ ಎಂದು ಹೇಳಿದರು. ಪ್ರಕರಣ ಸಂಬಂಧ ಸೋಲದೇವನಹಳ್ಳಿ ಠಾಣೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ