ಬೆಂಗಳೂರು – ಕಳೆದ ವಿಧಾನಸಭೆ Election ಸಮಯದಲ್ಲಿ ಕೇಳಿಬಂದಿದ್ದ ಮಾಜಿ ಸಚಿವ ದಿವಂಗತ ಕೃಷ್ಣಪ್ಪ ಅವರ ಪುತ್ತಿ ಹಾಗೂ ಬಿಜೆಪಿ ನಾಯಕಿ ಪೂರ್ಣಿಮಾ ಶ್ರೀನಿವಾಸ್ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಸುದ್ದಿ ಇದೀಗ ಮತ್ತೊಮ್ಮೆ ರಾಜ್ಯ ರಾಜಕೀಯದ ಅಂಗಳದಲ್ಲಿ ಕೇಳಿಬಂದಿದೆ.
ಈ ಸುದ್ದಿಗೆ ಪೂರಕವೆಂಬಂತೆ, ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕೃಷ್ಣ ಜನ್ಮಾಷ್ಟಮಿ ಹಿನ್ನೆಲೆಯಲ್ಲಿ ಪೂರ್ಣಿಮಾ ಶ್ರೀನಿವಾಸ್ (Poornima Srinivas) ಮನೆಗೆ ತೆರಳಿ ಸುದೀರ್ಘ ಮಾತುಕತೆ ನಡೆಸಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆ ಸಮಯದಲ್ಲಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಬಿಜೆಪಿ ಶಾಸಕರಾಗಿದ್ದ ಪೂರ್ಣಿಮಾ ಅವರು ಬಿಜೆಪಿಗೆ ಗುಡ್ ಬೈ ಹೇಳಿ ಕಾಂಗ್ರೆಸ್ ಸೇರಲಿದ್ದಾರೆ ಎನ್ನಲಾಗಿತ್ತು. ನಂತರ ಅವರು ಬೆಂಗಳೂರಿನ ಕೆ.ಆರ್. ಪುರಂ ವಿಧಾನಸಭೆ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎನ್ನಲಾಗಿತ್ತು.
ಆದರೆ, ನಂತರದಲ್ಲಿ ನಡೆದ ವಿದ್ಯಮಾನಗಳು ಇಂತಹ ಬೆಳವಣಿಗೆಗಳಿಗೆ ಪೂರ್ಣ ವಿರಾಮ ಹಾಕಿದ್ದವು. ಹಿರಿಯೂರು ಕ್ಷೇತ್ರದಿಂದ ಮತ್ತೆ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದ ಅವರು ಸೋಲು ಅನುಭವಿಸಿದ್ದರು. ಇದಾದ ಬಳಿಕ ಮತ್ತೆ ಅವರು ಕಾಂಗ್ರೆಸ್ ಸೇರುವ ಸುದ್ದಿಗಳಿಗೆ ಚಾಲನೆ ಸಿಕ್ಕಿದೆ.
ಬಿಬಿಎಂಪಿ ಸದಸ್ಯರಾಗಿ,ಶಾಸಕರಾಗಿ ತಮ್ಮದೆ ಪ್ರಭಾವ ಹೊಂದಿರುವ ಪೂರ್ಣಿಮಾ ಶ್ರೀನಿವಾಸ್ ಅವರನ್ನು ಬಿಜೆಪಿ ನಾಯಕರು ಕಡೆಗಣಿಸಿದ್ದಾರೆ.ಪಕ್ಷ ಸಂಘಟನೆ ಸೇರಿದಂತೆ ಯಾವುದೇ ವಿಷಯದಲ್ಲೂ ಅವರನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎಂಬ ಅಸಮಾಧಾನದಲ್ಲಿರುವ ಅವರನ್ನು ಪಕ್ಷ ತೊರೆಯುವಂತೆ ಅವರ ಬೆಂಬಲಿಗರು ಸಲಹೆ ಮಾಡುತ್ತಿದ್ದಾರೆ ಎನ್ನಲಾಗಿದೆ.
ಇನ್ನೂ ಅವರ ತಂದೆ ಕೃಷ್ಣಪ್ಪ ಅವರು ಕಾಂಗ್ರೆಸ್ ನ ಪ್ರಭಾವಿ ನಾಯಕರಾಗಿದ್ದರು. ಕೆ.ಆರ್.ಪುರಂ ವಿಧಾನಸಭೆ ಕ್ಷೇತ್ರದ ಟಿಕೆಟ್ ವಿಚಾರವಾಗಿ ಬೇಸರಗೊಂಡಿದ್ದ ಅವರು ಕಾಂಗ್ರೆಸ್ ತೊರೆದು ಜೆಡಿ ಎಸ್ ಸೇರಿ ಆ ಪಕ್ಷದ ರಾಜ್ಯಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.ಈ ವಿಷಯವಾಗಿ ಮೂಲ ಕಾಂಗ್ರೆಸ್ ನಾಯಕರು ತಮ್ಮ ನಾಯಕರಾಗಿದ್ದ ಕೃಷ್ಣಪ್ಪ ಅವರಿಗೆ ಅನ್ಯಾಯವಾಗಿದೆ.ಈ ಹಿನ್ನೆಲೆಯಲ್ಲಿ ಅವರ ಮಗಳನ್ನು ಪಕ್ಷಕ್ಕೆ ಕರೆತಂದು ಅವರಿಗೆ ಸ್ಥಾನಮಾನ ನೀಡಬೇಕು ಎಂಬ ಅಭಿಪ್ರಾಯ ಹೊಂದಿದ್ದಾರೆ. ಅಷ್ಟೇ ಅಲ್ಲ ಹಲವರು ಪೂರ್ಣಿಮಾ ಅವರನ್ನು ಸಂಪರ್ಕಿಸಿ ಕಾಂಗ್ರೆಸ್ ಸೇರಲು ಆಹ್ವಾನ ನೀಡುತ್ತಿದ್ದಾರೆ. ಈ ವಿಷಯವಾಗಿ ಮಾತುಕತೆಗಳು ನಡೆಯುತ್ತಿವೆ. ಇದರ ನಡುವೆ ಪೂರ್ಣಿಮಾ ಅವರ ಪತಿ ಶ್ರೀನಿವಾಸ್ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದು,ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎನ್ನಲಾಗಿದೆ.
ಈ ಎಲ್ಲಾ ಸುದ್ದಿಗಳ ನಡುವೆ ಪೂರ್ಣಿಮಾ ಶ್ರೀನಿವಾಸ್ ಅವರ ನಿವಾಸಕ್ಕೆ ತೆರಳಿ ಹಬ್ಬ ಆಚರಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್ ಸುದ್ದಿಗಾರರೊಂದಿಗೆ ಮಾತನಾಡಿ,ಮಾಧ್ಯಮಗಳು ಆಪರೇಷನ್ ಹಸ್ತದ ಬಗ್ಗೆ ಮಾತನಾಡುತ್ತಿದ್ದೀರಿ. ನಾನು ಯಾವುದೇ ಕಾರಣಕ್ಕೂ ಆಪರೇಷನ್ ಹಸ್ತ ಮಾಡುವುದಿಲ್ಲ. ನಮ್ಮದು ಕೇವಲ ಕೋಆಪರೇಷನ್ ಮಾತ್ರ” ಎಂದು ತಿಳಿಸಿದರು.
ನಾವು ಕೇವಲ ಚುನಾವಣಾ ಸಮಯದಲ್ಲಿ ರಾಜಕಾರಣ ಮಾಡುತ್ತೇವೆ. ಈಗ ರಾಜಕಾರಣ ಮಾಡುವುದಿಲ್ಲ. ಮಾಜಿ ಸಚಿವ ಕೃಷ್ಣಪ್ಪ ಅವರು ನಮ್ಮ ನಾಯಕರು. ಅವರ ಸುಪುತ್ರಿ ಪೂರ್ಣಿಮಾ ಅವರು ನನಗೆ ಸಹೋದರಿ ಇದ್ದಂತೆ. ಅವರ ಅಳಿಯ ನನ್ನ ಸ್ನೇಹಿತರು. ಇಂದು ಅವರು ಕೃಷ್ಣಜನ್ಮಾಷ್ಟಮಿ ಕಾರ್ಯಕ್ರಮ ಮಾಡಿ ಆಹ್ವಾನ ನೀಡಿದ್ದರು, ಹೀಗಾಗಿ ನಾನು ಇಲ್ಲಿಗೆ ಬಂದು ಭಗವಂತನ ಆಶೀರ್ವಾದ ಪಡೆದು ಊಟ ಮಾಡಿದ್ದೇನೆ” ಎಂದು ತಿಳಿಸಿದರು