ಬೆಂಗಳೂರು,ಆ.10-ಬನಶಂಕರಿಯಲ್ಲಿ ದಂತ ವೈದ್ಯೆ ಮಗಳನ್ನೇ ಕೊಂದು ಬಳಿಕ ತಾನೂ ನೇಣಿಗೆ ಶರಣಾದ ಕೃತ್ಯಕ್ಕೆ ಕಳೆದ 12 ವರ್ಷಗಳಿಂದ ತವರು ಮನೆಗೆ ಪ್ರವೇಶ ನೀಡಿರಲಿಲ್ಲ ಎಂಬ ಕಾರಣವಾಗಿರುವುದು ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ.
ವಿರಾಜಪೇಟೆ ಮೂಲದ ದಂತವೈದ್ಯೆ ಸೈಮಾ ಪತಿ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ತನ್ನ 9 ವರ್ಷದ ಮಗಳನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಳು. ಪತಿ ನಾರಾಯಣ್ ಕೂಡಾ ದಂತ ವೈದ್ಯನಾಗಿದ್ದು, ಕೆಲಸದ ಸ್ಥಳದಿಂದ ಪತ್ನಿಗೆ ಎಷ್ಟು ಬಾರಿ ಕರೆ ಮಾಡಿದರೂ ಉತ್ತರಿಸುತ್ತಿಲ್ಲವೆಂದು ತನ್ನ ಸಹಾಯಕನನ್ನು ಮನೆಗೆ ಕಳುಹಿಸಿದಾಗ ವಿಚಾರ ಬೆಳಕಿಗೆ ಬಂದಿತ್ತು.
12 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಸೈಮಾ ಹಾಗು ನಾರಾಯಣ್ಗೆ ಅಂದಿನಿಂದಲೂ ತವರಿನಲ್ಲಿ ಪ್ರವೇಶ ನೀಡಿರಲಿಲ್ಲ. ಇದರ ನಡುವೆಯೇ ಸೈಮಾಳ ತಾಯಿಯೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆ ಸಂದರ್ಭದಲ್ಲೂ ಸೈಮಾಗೆ ತವರಿಗೆ ಪ್ರವೇಶ ನೀಡಿರಲಿಲ್ಲ. ಇದರಿಂದ ಕುಗ್ಗಿ ಹೋಗಿದ್ದ ಸೈಮಾ ಪದೇ ಪದೇ ಆತ್ಮಹತ್ಯೆ ಬಗ್ಗೆ ಚರ್ಚಿಸುತ್ತಿದ್ದ ವಿಷಯ ಈಗ ಬೆಳಕಿಗೆ ಬಂದಿದೆ.
1 ತಿಂಗಳ ಹಿಂದೆಯಷ್ಟೇ ಸೈಮಾಗೆ ತವರಿಗೆ ಹೋಗಲು ಸಾಧ್ಯವಾಗಿದ್ದು, 10 ದಿನಗಳ ಕಾಲ ಅಲ್ಲಿಯೇ ಇದ್ದು ಮರಳಿದ್ದಳು. ತವರು ಮನೆಯಿಂದ ಬಂದ ಬಳಿಕ ಆಕೆ ಸಂಪೂರ್ಣವಾಗಿ ಆತ್ಮಹತ್ಯೆ ಬಗ್ಗೆ ಯೋಚನೆ ಮಾಡುತ್ತಿದ್ದಳು. ತಾನೊಬ್ಬಳೇ ಆತ್ಮಹತ್ಯೆ ಮಾಡಿಕೊಂಡರೆ ಮಗು ಅನಾಥವಾಗುತ್ತೆ, ತಾಯಿ ಇಲ್ಲದೇ ತಾನು ಅನುಭವಿಸಿದ ಕಷ್ಟವನ್ನು ಮಗು ಅನುಭವಿಸಬಾರದು ಎಂದು, ಗಂಡನಿಲ್ಲದ ಸಮಯ ನೋಡಿಕೊಂಡು ಸೈಮಾ ಮೊದಲಿಗೆ ಮಗಳನ್ನು ಕುಣಿಕೆಗೆ ಹಾಕಿ, ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಅನುಮಾನ ತನಿಖೆಯಲ್ಲಿ ವ್ಯಕ್ತವಾಗಿದೆ.
Previous Articleಇದು ಯು ಐ ಮ್ಯಾಚು ಕಣೋ…! ಕೂಲಾಗಿ ಕ್ರಿಕೆಟ್ ಆಡಿದ ರಿಯಲ್ ಸ್ಟಾರ್
Next Article ಫ್ರೆಂಡ್ಸ್ ಇದ್ರೇನೆ ಜೀವನ