Bengaluru
‘ಚುನಾವಣೆ ಸಮೀಪಿಸುತ್ತಿರುವಂತೆ CBI ಮತ್ತು ED ಅಧಿಕಾರಿಗಳನ್ನು ಬಳಸಿಕೊಂಡು ತಮ್ಮನ್ನು ಕಟ್ಟಿ ಹಾಕಲು ಸಂಚು ರೂಪಿಸಲಾಗಿದೆ’ ಎಂದು ಆರೋಪಿಸಿರುವ KPCC ಅಧ್ಯಕ್ಷ DK Shivakumar ‘ನನ್ನ ಮಗಳಿಗೆ ಸಿಬಿಐಯವರು ನೋಟಿಸ್ ಕಳಿಸಿದ್ದಾರೆ. ಕಾಲೇಜು ಫೀಸ್ ಕಟ್ಟಿದ್ದೆಲ್ಲ ಕೇಳುತ್ತಿದ್ದಾರೆ’ ಎಂದು ಬೇಸರ ಹೊರಹಾಕಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಫೆಬ್ರವರಿ 24ಕ್ಕೆ ವಿಚಾರಣೆಗೆ ಬರುವಂತೆ ED ಅಧಿಕಾರಿಗಳು ಕರೆದಿದ್ದಾರೆ. ನಾನು ಪ್ರಜಾಧ್ವನಿ ಯಾತ್ರೆ ಮಾಡೋದಾ? ಅಥವಾ ED ಯವರ ಬಳಿ ಹೋಗೋದಾ?’ ಎಂದರು. ‘ಪ್ರತಿಪಕ್ಷ ಮುಖಂಡರಾದ ಕೇವಲ ನಮಗೆ ಮಾತ್ರ ED ಯವರು ಇರೋದು. ಆಡಳಿತ ಪಕ್ಷದವರಿಗೆ ED, CBI ನವರು ಯಾರೂ ಇಲ್ಲ. ಇರಲಿ ನೋಡೋಣ ಏನಾಗುತ್ತೋ ಅಂತಾ’ ಎಂದರು.
ಮತ್ತೊಂದೆಡೆ ತೆರಿಗೆ ವಂಚನೆ ಮತ್ತು ಹವಾಲಾ ವಹಿವಾಟಿನ ಆರೋಪಕ್ಕೆ ಸಂಬಂಧಿಸಿದಂತೆ KPCC ಅಧ್ಯಕ್ಷ DK Shivakumar ಬೆನ್ನು ಹತ್ತಿರುವ ED ಅಧಿಕಾರಿಗಳು ಮಾಹಿತಿ ಸಂಗ್ರಹಣೆಯಲ್ಲಿ ತೊಡಗಿದ್ದಾರೆ. ಶಿವಕುಮಾರ್ ಅವರ ಎಲ್ಲಾ ವ್ಯವಹಾರಗಳ ಮೇಲೆ ತೀವ್ರ ನಿಗಾ ಇಟ್ಟಿರುವ ED ತಂಡ ಅವರ ಎಲ್ಲಾ ಹಣಕಾಸಿನ ವಹಿವಾಟುಗಳ ವಿವರಗಳನ್ನು ಸಂಗ್ರಹಿಸತೊಡಗಿದೆ. ಅಕ್ರಮ ಆಸ್ತಿ ಸಂಬಂಧ ಚಾರ್ಜ್ಶೀಟ್ ಸಲ್ಲಿಸಲು CBI ತಯಾರಿ ಮಾಡಿಕೊಂಡಿದ್ದು, ಮಾರ್ಚ್ ತಿಂಗಳಲ್ಲಿ ಸಲ್ಲಿಕೆಯಾಗಲಿದೆ ಎಂದು ಹೇಳಲಾಗುತ್ತಿದೆ.