ಬೆಂಗಳೂರು,ಫೆ.20-
ಸದಾಶಿವನಗರದಲ್ಲಿ (Sadashivanagara) ರೇಂಜ್ ರೋವರ್ ಕಾರಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧ ದಿವಂಗತ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ (Ricky Rai) ಗೆ ಮತ್ತೆ ಸಂಕಷ್ಟ ಎದುರಾಗಿದೆ. ಬರೋಬ್ಬರಿ ಒಂದು ವರ್ಷ ನಾಲ್ಕು ತಿಂಗಳ ಬಳಿಕ ರಿಕ್ಕಿ ರೈ ಹಾಗೂ ಐವರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲು ಸಿದ್ಧತೆ ಮಾಡಲಾಗಿದೆ. 2021 ಅಕ್ಟೋಬರ್ನಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಶ್ರೀನಿವಾಸ್ ನಾಯ್ಡು (Shrinivas Naidu) ಅವರ 3 ಕೋಟಿ ಮೌಲ್ಯದ ರೇಂಜ್ ರೋವರ್ ಕಾರಿಗೆ ಬೆಂಕಿ ಹಚ್ಚಲಾಗಿತ್ತು. ಹಣಕಾಸು ವ್ಯವಹಾರದ ವೈಶ್ಯಮದ ಹಿನ್ನೆಲೆ, ರಿಕ್ಕಿ ರೈ ಅಣತಿಯಂತೆ ದುಷ್ಕರ್ಮಿಗಳು ಶ್ರೀನಿವಾಸ್ ನಾಯ್ಡು ಕಾರಿಗೆ ಬೆಂಕಿ ಹಚ್ಚಿದ್ದರು. ಸದಾಶಿವನಗರ ಪೊಲೀಸರು ರಿಕ್ಕಿ ರೈ ಸೇರಿದಂತೆ ಆರು ಮಂದಿಯನ್ನು ಬಂಧಿಸಿದ್ದರು.
ಶ್ರೀನಿವಾಸ್, ರಿಕ್ಕಿ ರೈಗೆ ಸೇರಿದ ವೈಟ್ ಫೀಲ್ಡ್ (Whitefield) ಬಳಿಯ ಜಾಗ ಅಭಿವೃದ್ಧಿ ಮಾಡಿದ್ದರು. ಶ್ರೀನಿವಾಸ್ ನಾಯ್ಡು ಜಾಗ ಅಭಿವೃದ್ಧಿ ಕಾರ್ಯಕ್ಕೆ 1.5 ಕೋಟಿ ಹಣ ಕೇಳಿದ್ದರು. ಈ ಹಿನ್ನೆಲೆಯಲ್ಲಿ ಇವರಿಬ್ಬರ ನಡುವೆ ಕಿರಿಕ್ ನಡೆದಿತ್ತು. ಇದೇ ವಿಚಾರಕ್ಕೆ ಸುಪಾರಿ ನೀಡಿ ಕೃತ್ಯ ಎಸಗಿದ್ದಾರೆಂದು ಶ್ರೀನಿವಾಸ್ ನಾಯ್ಡು ಈ ಹಿಂದೆ ದೂರು ಸಲ್ಲಿಸಿದ್ದರು. ನಾರಾಯಣ್ ಎಂಬುವವರ ಮೂಲಕ ಸಂಚು ರೂಪಿಸಿ ಕೃತ್ಯ ಎಸಗಿರುವುದು ತನಿಖೆ ವೇಳೆ ಪತ್ತೆಯಾಗಿತ್ತು. ಬೇರೆ ಬೇರೆ ಅಪರಿಚಿತ ವ್ಯಕ್ತಿಗಳಿಂದ ಕರೆ ಮಾಡಿ ಜೀವ ಬೆದರಿಕೆ ಹಾಕಲಾಗಿತ್ತು. ರಿಕ್ಕಿ ರೈ, ನಾರಾಯಣ ಹಾಗೂ ಬಂಧಿತರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿ ಶ್ರೀನಿವಾಸ್ ದೂರು ದಾಖಲಿಸಿದ್ದರು.
ಕಾರು ಬೆಂಕಿ ಹಚ್ಚಿದ್ದ ಪ್ರಕರಣದ ಸಂಬಂಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಕೇಸಿನ ತನಿಖೆಯ ವೇಳೆ ಐವರು ಆರೋಪಿಗಳನ್ನು ಸದಾಶಿವನಗರ ಪೊಲೀಸರು ಬಂಧಿಸಿದ್ದರು. ಸಂಚು ರೂಪಿಸಿ ತನ್ನ ಮನೆಯ ಕಾರಿಗೆ ಬೆಂಕಿ ಹಾಕಿ ಬೆದರಿಕೆ ಹಾಕಿರುವ ಆರೋಪದ ಹಿನ್ನೆಲೆಯಲ್ಲಿ ರಿಕ್ಕಿ ರೈ ಅವರನ್ನು ಬಂಧಿಸಬೇಕೆಂದು ದೂರು ಸಲ್ಲಿಸಿದ್ದಾರೆ.