ಬೆಂಗಳೂರು ಸೆ.9 – ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ (BK Hariprasad) ನಡುವಿನ ಮುಸುಕಿನ ಗುದ್ದಾಟ ಮತ್ತೊಮ್ಮೆ ಬಹಿರಂಗಗೊಂಡಿದೆ.ಸಿದ್ದರಾಮಯ್ಯ ಅವರ ಹೆಸರು ಪ್ರಸ್ತಾಪಿಸದೆ ವಾಗ್ದಾಳಿ ನಡೆಸಿರುವ ಹರಿಪ್ರಸಾದ್ ಗೃಹ ಮಂತ್ರಿ ಪರಮೇಶ್ವರ್ ಅವರಿಗೆ ಉನ್ನತ ಹುದ್ದೆ ಸಿಗಬೇಕಿತ್ತು ಎಂದು ಹೇಳಿದ್ದಾರೆ.
ಅತಿ ಹಿಂದುಳಿದ ಜಾತಿಗಳ ಜಾಗೃತಿ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸುರವರ ಕಾರಿನಲ್ಲಿ ಕುಳಿತರೆ ನೀವು ದೇವರಾಜು ಅರಸು ಆಗುವುದಿಲ್ಲ. ಅವರ ಚಿಂತನೆಗಳನ್ನು ಅನುಷ್ಠಾನಕ್ಕೆ ತರಬೇಕು ಎಂದು ಹೇಳಿದರು.
ಈ ಹಿಂದೆ ಕಾಂಗ್ರೆಸ್ನ ಸಭೆಯಲ್ಲಿ ತಾವು ಅರಸು ಮೊಮ್ಮಗ ಸೂರಜ್ ಹೆಗಡೆಯನ್ನು ವಿಧಾನಪರಿಷತ್ ಸದಸ್ಯರನ್ನಾಗಿ ಮಾಡುವಂತೆ ಸಲಹೆ ನೀಡಿದ್ದೆ. ಆದರೆ ಮುಖ್ಯಮಂತ್ರಿ ಇದನ್ನು ಮಾಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೈಗೆ ಹ್ಯೂಬ್ಲೋಟ್ ವಾಚ್ ಕಟ್ಟಿಕೊಂಡು, ಪಂಚೆ ಉಟ್ಟುಕೊಂಡು ಒಳಗೆ ಖಾಕಿ ಚಡ್ಡಿ ಹಾಕಿಕೊಂಡು ಸಮಾಜವಾದಿ ಎಂದು ಹೇಳಿದರೆ ಆಗುವುದಿಲ್ಲ.
ಸಮಾಜವಾದಿ ಕಾಗೋಡು ತಿಮ್ಮಪ್ಪ ಅವರಿಗೆ ಈಗಲೂ ಕಾರಿಲ್ಲ ಎಂದು ಹೇಳಿದರು ಮಾತು ಮಾತಿಗೆ ದೇವರಾಜ ಅರಸು ಎಂದು ಹೇಳಿದರೆ ಆಗುವುದಿಲ್ಲ. ಅರಸು ಅವರ ರೀತಿ ಸಣ್ಣ ಸಮುದಾಯಗಳ ಕೈ ಹಿಡಿಯುವ ಕೆಲಸ ಮಾಡಬೇಕು. ಅರಸು ಅವರ ಚಿಂತನೆಗಳನ್ನು, ವಿಚಾರಗಳನ್ನು ಅಳವಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ನಾನು ಅಧಿಕಾರಕ್ಕಾಗಿ ಯಾರ ಬಳಿಯೂ ಭಿಕ್ಷೆ ಬೇಡಿಲ್ಲ. ಸ್ವಾಭಿಮಾನ ಬಿಟ್ಟಿಲ್ಲ. ಶಿಕ್ಷಣ ಮಾಫಿಯಾ ನಡೆಸಿದವರು ಹೆಂಡ, ಸಾರಾಯಿ ಮಾರುವವರ ಬಗ್ಗೆ ಮಾತನಾಡುತ್ತಾರೆ. ನಾನು ಅಧಿಕಾರ ಸಿಕ್ಕಿಲ್ಲ ಎಂದು ಅಡ್ವಾಣಿ ಅವರನ್ನು ಭೇಟಿ ಮಾಡಿ, ಅವರ ಮನೆಯಲ್ಲಿ ಉಪಾಹಾರ ಸ್ವೀಕರಿಸಿ ಬಿಜೆಪಿ ಸೇರಲು ಹೋಗಿರಲಿಲ್ಲ. ಯಾರು ಹೋಗಿದ್ದರು ಎಂಬುದಕ್ಕೆ ಸಾಕ್ಷಿಯಾಗಿ ವೆಂಕಯ್ಯ ನಾಯ್ಡು, ಅರವಿಂದ ಲಿಂಬಾವಳಿ ಈಗಲೂ ಇದ್ದಾರೆ’ ಎಂದು ಹೇಳಿದರು.
ನಾನು ಕಾಂಗ್ರೆಸ್ನಲ್ಲಿ ವಿದ್ಯಾರ್ಥಿ ದೆಸೆಯಿಂದಲೂ ಇದ್ದೇನೆ. ಹಲವು ಸರ್ಕಾರಗಳ ರಚನೆಗೆ ಪಾತ್ರ ವಹಿಸಿದ್ದೇನೆ. ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ನನಗೆ ಯಾವುದೇ ಭಯವಿಲ್ಲ. ಸೈಟು ಕಳ್ಳತನ ಮಾಡಿ ಮಾರಾಟ ಮಾಡುವವನು ನನ್ನ ಬಗ್ಗೆ ಮಾತನಾಡುತ್ತಾನೆ. ನಾನು ಎಂದಿಗೂ ಸ್ವಾಭಿಮಾನ ಬಿಟ್ಟು ಸಹನೆ ಕಳೆದುಕೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೀರ್ಘ ಕಾಲ ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಾ.ಜಿ. ಪರಮೇಶ್ವರ್ ಹಿಂದೆ ಕಾಂಗ್ರೆಸ್ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಆಗಿದ್ದರು. ಮುಖ್ಯಮಂತ್ರಿಯಾಗುವ ಎಲ್ಲ ಅರ್ಹತೆ ಅವರಿಗಿದೆ. ಆದರೆ, ಈ ಬಾರಿ ಮುಖ್ಯಮಂತ್ರಿ ಸ್ಥಾನ ಬಿಡಿ, ಉಪಮುಖ್ಯಮಂತ್ರಿ ಸ್ಥಾನವನ್ನೂ ನೀಡದೇ ಹಿಂಬಡ್ತಿ ನೀಡಿರುವುದು ತಲೆ ತಗ್ಗಿಸುವ ವಿಚಾರ. ಆದಿವಾಸಿ ಸಮುದಾಯದ ಸತೀಶ್ ಜಾರಕಿಹೊಳಿಯನ್ನು ಉಪಮುಖ್ಯಮಂತ್ರಿ ಮಾಡಬಹುದಿತ್ತು. ಅಲ್ಪಸಂಖ್ಯಾತರನ್ನು ಉಪಮುಖ್ಯಮಂತ್ರಿ ಮಾಡಬಹುದಿತ್ತು, ಮಾಡಿಲ್ಲ. ಅರ್ಹತೆ ಇರುವವರಿಗೆ ಅಧಿಕಾರ ನೀಡುತ್ತಿಲ್ಲ’ ಎಂದು ಟೀಕಿಸಿದರು.
‘ನನಗೆ ಅಧಿಕಾರ ಸಿಕ್ಕಿದೆ. ಇಷ್ಟ ಬಂದ ಹಾಗೇ ಮಾಡ್ತೀನಿ ಅಂದ್ರೆ ಜನ ಪಾಠ ಕಲಿಸುತ್ತಾರೆ. ದುರಹಂಕಾರದಿಂದ ಆಡಳಿತ ನಡೆಸಿದರೆ ಏನಾಗುತ್ತದೆ ಎಂಬುದಕ್ಕೆ ಈ ಬಾರಿಯ ವಿಧಾನಸಭೆ ಚುನಾವಣೆಯೇ ಸಾಕ್ಷಿಯಾಗಿದೆ. ದಲಿತರನ್ನು ಅವಹೇಳನ ಮಾಡುತ್ತಿದ್ದ, ಅಲ್ಪಸಂಖ್ಯಾತರಿಗೆ ಅನ್ಯಾಯ ಮಾಡುತ್ತಿದ್ದ ಸರ್ಕಾರಕ್ಕೆ ದಲಿತರು ಮತ್ತು ಅಲ್ಪಸಂಖ್ಯಾರತು ಸರಿಯಾಗಿ ಪಾಠ ಕಲಿಸಿದ್ದಾರೆ. ಇಂಥ ಶಕ್ತಿ ಅತಿ ಹಿಂದುಳಿದ ವರ್ಗಗಳ ಸಮುದಾಯಗಳಿಗೂ ಇದೆ’ ಎಂದು ತಿಳಿಸಿದರು.
ಹೆಂಡ, ಸಾರಾಯಿ ಮಾರುವವರು ಎಂದಿಗೂ ಸರ್ಕಾರಕ್ಕೆ ಮೋಸ ಮಾಡಿಲ್ಲ. 36,000 ಕೋಟಿ ರೂ. ತೆರಿಗೆ ಕಟ್ಟುತ್ತಿದ್ದಾರೆ. ಬಿಲ್ಲವ, ಈಡಿಗ ಸಮುದಾಯದವರು ದೇಶದ ವಿವಿಧ ರಾಜ್ಯಗಳಲ್ಲಿ ಜನಸಂಖ್ಯೆ ಹೊಂದಿದೆ. ಸಮುದಾಯಕ್ಕೆ ಅಧಿಕಾರ ನೀಡದೇ ವಂಚಿಸಿರುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ನನ್ನನ್ನ ಮಂತ್ರಿ ಮಾಡದೇ ಇರುವುದಕ್ಕೆ ಮುಖ್ಯಮಂತ್ರಿಯವರಿಗೆ ಧನ್ಯವಾದ ಸಲ್ಲಿಸುತ್ತೇನೆ. ಒಂದು ವೇಳೆ ಸಚಿವನಾಗಿದ್ದರೆ ನಿಮ್ಮನ್ನೆಲ್ಲಾ ಭೇಟಿ ಮಾಡಲು ಆಗುತ್ತಿರಲಿಲ್ಲ. ಮುಂದಿನ ದಿನಗಳಲ್ಲೂ ನಾನು ಸಚಿವನಾಗುತ್ತೇನೆ ಎಂದು ಯಾರೂ ಭಾವಿಸಿಕೊಳ್ಳಬೇಡಿ. ಮತ ಹಾಕಲು, ಹಣ ನೀಡಲು ನೀವು ಬೇಕು. ಅಧಿಕಾರ ಅನುಭವಿಸಲು ನೀವು ಬೇಕು ಎಂಬಂತಾಗಿದೆ ಎಂದು ಕಿಡಿಕಾರಿದರು.