ಮಂಗಳೂರು,ಮಾ.24- ಸುಬ್ರಹ್ಮಣ್ಯೇಶ್ವರನ ಆರಾಧನಾ ತಾಣ ಕುಕ್ಕೆ ಸುಬ್ರಹ್ಮಣ್ಯ ಪ್ರದೇಶದಲ್ಲಿ ಇದೀಗ ಆತಂಕದ ವಾತಾವರಣ ನಿರ್ಮಾಣವಾಗಿದೆ. ಕುಕ್ಕೆ ಸುಬ್ರಮಣ್ಯ ಸಮೀಪದ ದಟ್ಟ ಕಾನನದಲ್ಲಿ ಶಸ್ತ್ರ ಸಜ್ಜಿತ ನಕ್ಸಲ್ ಚಟುವಟಿಕೆ ಹೆಚ್ಚಾಗಿದೆ. ಕಾಡಂಚಿನಲ್ಲಿ ಕೋವಿ ಹಿಡಿದು ಸುತ್ತಾಡುತ್ತಿರುವ ನಕ್ಸಲಿಯರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಈ ನಡುವೆ,ಕಡಬ ತಾಲೂಕಿನ ಸುಬ್ರಹ್ಮಣ್ಯ ಸಮೀಪದ ಐನೆಕಿದು ಗ್ರಾಮದ ಅರಣ್ಯದಂಚಿನ ಮನೆಯೊಂದಕ್ಕೆ ಶಂಕಿತ ನಕ್ಸಲರು ಭೇಟಿ ನೀಡಿದ್ದರು ಎಂಬ ಮಾಹಿತಿ ಹೊರಬಿದ್ದಿದ್ದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.
ನಿನ್ನೆ ಸಂಜೆ 6 ಗಂಟೆ ಸುಮಾರಿಗೆ ಸಣ್ಣದಾಗಿ ಮಳೆಯಾಗುತ್ತಿದ್ದ ವೇಳೆ ಮೂವರಿದ್ದ ನಕ್ಸಲರ ತಂಡ ಐನೆಕಿದು ಗ್ರಾಮದ ಅಶೋಕ್ ಎಂಬವರ ಮನೆಗೆ ಭೇಟಿ ನೀಡಿದ್ದಾರೆ ಎಂಬುದಾಗಿ ವರದಿಯಾಗಿದೆ. ಮನೆಯವರ ಜತೆ ಸುಮಾರು ಒಂದು ತಾಸಿಗೂ ಅಧಿಕ ಕಾಲ ಮಾತುಕತೆ ನಡೆಸಿ ಅವರು ವಾಪಸ್ ತೆರಳಿದ್ದಾರೆ ಎಂದು ಹೇಳುತ್ತಿದ್ದಾರೆ.
ಮಳೆ ಬರುತ್ತಿದ್ದ ವೇಳೆ ಅಶೋಕ್ ಅವರ ಮನೆಗೆ ಬಂದ ಶಂಕಿತ ನಕ್ಸಲರು ಮೊಬೈಲ್ ಚಾರ್ಜ್ ಮಾಡಿ ಅಲ್ಲಿಂದ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ. ಬಂದ ಮೂವರ ಬಳಿಯೂ ಶಸ್ತ್ರಾಸ್ತ್ರಗಳಿದ್ದವು ಎಂದು ಹೇಳುತ್ತಿದ್ದಾರೆ.
ವಾರದ ಹಿಂದೆ ದಕ್ಷಿಣ ಕನ್ನಡ- ಕೊಡಗು ಗಡಿ ಭಾಗದ ಕೂಜಿಮಲೆಯ ಎಸ್ಟೇಟ್ ಅಂಗಡಿಗೆ ಶಂಕಿತ ನಕ್ಸಲರು ಬಂದಿದ್ದರು. ಅವರೇ ಮತ್ತೆ ಅಶೋಕ್ ಅವರ ಮನೆಗೆ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಕೂಜಿಮಲೆ ಮತ್ತು ಐನೆಕಿದು ನಡುವೆ ಸುಮಾರು 25 ಕಿ.ಮೀ. ಅಂತರವಿದೆ. ಹೀಗಾಗಿ ಅವರು ಮಳೆ ಬಂದ ಕಾರಣ ಅಶೋಕ್ ಅವರ ಮನೆಗೆ ಬಂದಿದ್ದಾರೆ ಎನ್ನಲಾಗಿದೆ.
ಸುಬ್ರಹ್ಮಣ್ಯ ಭಾಗದಲ್ಲಿ ನಕ್ಸಲ್ ನಿಗ್ರಹ ದಳ ನಿರಂತರ ಶೋಧ ಕಾರ್ಯ ನಡೆಸುತ್ತಿದೆ. ಅವರಿಗೆ ಇದುವರೆಗೆ ಯಾವುದೇ ಸುಳಿವು ಲಭಿಸಿಲ್ಲ. ನಕ್ಸಲರು ಭೇಟಿ ನೀಡಿದ ಪ್ರದೇಶ ಕುಮಾರಪರ್ವತ ಸಾಲಿನ ಪಾಟಿ ಕುಮೇರಿ ದಟ್ಟ ಕಾಡಿಗೆ ಹತ್ತಿರವಿದೆ.
ಅಲ್ಲಿಂದ ಒಂದು ದಾರಿ ಸೋಮವಾರಪೇಟೆಗೆ ಹೋಗುತ್ತದೆ ಹಾಗೂ ಇನ್ನೊಂದು ದಾರಿ ಗಾಳಿಬೀಡು ಪ್ರದೇಶಕ್ಕೆ ಸಂಪರ್ಕ ಕಲ್ಪಿಸುತ್ತದೆ. ಅದೂ ಅಲ್ಲದೆ, ಸಂಪಾಜೆ ಮೂಲಕ ಕೇರಳದ ಅರಣ್ಯದೊಳಗೆ ಪ್ರವೇಶ ಮಾಡಲು ಅವರಿಗೆ ಅವಕಾಶವಿದೆ.