ಬೆಂಗಳೂರು:
ಸಂಡೂರು ವಿಧಾನಸಭೆ ಉಪ ಚುನಾವಣೆ ಸೋಲಿನ ಕಾರಣದ ನೆಪದಲ್ಲಿ ಬಹಿರಂಗ ವಾಕ್ಸಮರ ನಡೆಸುತ್ತಿದ್ದ ಮಾಜಿ ಮಂತ್ರಿಗಳಾದ ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಅವರ ಬಾಯಿಗಳಿಗೆ ಬಿಜೆಪಿ ಹೈಕಮಾಂಡ್ ಬೀಗ ಹಾಕಿದೆ.
ರಾಜಕೀಯ ಹಾಗೂ ವೈಯಕ್ತಿಕ ಕಾರಣದಿಂದ ಈ ಇಬ್ಬರ ನಡುವೆ ಬಿಕ್ಕಟ್ಟು ಉಲ್ಬಣಸಿದ್ದು, ಬಹಿರಂಗ ವಾಕ್ಸಮರದ ಮೂಲಕ ರಾಜ್ಯಾದ್ಯಂತ ದೊಡ್ಡ ಸುದ್ದಿಗೆ ಕಾರಣವಾಗಿದ್ದಾರೆ, ಇದರಿಂದ ಪಕ್ಷ ಸಂಘಟನೆಯ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಮಧ್ಯಪ್ರವೇಶಿಸಿದ ಬಿಜೆಪಿ
ಹೈಕಮಾಂಡ್ ಇಬ್ಬರಿಗೂ ಕರೆ ಮಾಡಿ ಸುಮ್ಮನಿರುವಂತೆ ಸೂಚನೆ ನೀಡಿದೆ.
ಬಿಜೆಪಿ ಹೈಕಮಾಂಡ್ ಮಟ್ಟದ ನಾಯಕರು ಮತ್ತು ಸಂಘದ ಪ್ರಮುಖರೊಬ್ಬರು ಇಬ್ಬರಿಗೆ ಸುಮ್ಮನಿರುವಂತೆ ಸೂಚನೆಯನ್ನು ನೀಡಿದ್ದಾರೆ. ಅಲ್ಲದೆ ವಿದ್ಯಮಾನಗಳ ಕುರಿತು ಚರ್ಚೆಗೆ ದೆಹಲಿಗೆ ಬರುವಂತೆ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಬಿಜೆಪಿ ಹೈಕಮಾಂಡ್ ಮಾತ್ರವಲ್ಲದೆ, ಆರ್ ಎಸ್ ಎಸ್ ಪ್ರಮುಖರೊಬ್ಬರಿಂದ ರಾಮುಲು, ಜನಾರ್ದನ ರೆಡ್ಡಿ ಇಬ್ಬರಿಗೂ ಕರೆ ಮಾಡಿ ಎಚ್ಚರಿಕೆ ಪಾಠ ಮಾಡಿದ್ದಾರೆ ಎಂಬ ಮಾಹಿತಿಯೂ ಇದೆ.ಇಬ್ಬರಿಗೂ ಸಂಘ ಪರಿವಾರದ ಪ್ರಮುಖರೊಬ್ಬರಿಂದ ಪ್ರತ್ಯೇಕ ಭೇಟಿಗೂ ಸೂಚನೆ ನೀಡಿದ್ದಾರೆ.
ನಿಮ್ಮ ವೈಯಕ್ತಿಕ ವಿಚಾರ ಪಕ್ಷದವರೆಗೆ ಎಳೆದು ತಂದಿದ್ದೇಕೆ? ನಿಮ್ಮದೇನೇ ಇದ್ರೂ ನೀವೇ ಬಗೆಹರಿಸಿಕೊಳ್ಳಿ, ಪಕ್ಷಕ್ಕೆ ಸಂಬಂಧ ಕಟ್ಬೇಡಿ.. ಪಕ್ಷದವರೆಗೂ ತರಬೇಡಿ ಎಂದು ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

