ಗುಪ್ತ ನಿಧಿ ಆಸೆಯಲ್ಲಿ ಇರುವವರು ಜ್ಯೋತಿಷಿಗಳ ಮಾತು ನಂಬಿ ದೇವಾಲಯಗಳು ಪುರಾತನ ಕಟ್ಟಡ ಕೋಟೆ ಕೊತ್ತಲಗಳ ಬಳಿ ಅಗೆಯುವುದನ್ನು ಕೇಳಿದ್ದೇವೆ ಆದರೆ ಮಹಾನಗರ ಬೆಂಗಳೂರಿನಲ್ಲಿ ಜ್ಯೋತಿಷಿಯ ಮಾತು ಕೇಳಿ ನಿಧಿ ಇದೆ ಎಂದು ಅಪಾರ್ಟ್ ಮೆಂಟ್ ಪಾಯವೊಂದನ್ನೇ ಅಗೆದಿದ್ದಾರೆ.
ನೂರಾರು ಮಂದಿ ವಾಸವಾಗಿರುವ ಅಪಾರ್ಟ್ ಮೆಂಟ್ ನ ತಳಪಾಯದ ಸಮೀಪ ಆಳವಾದ ಗುಂಡಿ ತೋಡಿರುವ ನಿಧಿಕಳ್ಳರ ಕೆಲಸದಿಂದಾಗಿ ಈಗ ಅಪಾರ್ಟ್ ಮೆಂಟ್ ಭದ್ರತೆಗೆ ಅಪಾಯ ಎದುರಾಗಿದೆ.
ಹೆಚ್ ಎಸ್ ಆರ್ ಲೇಔಟ್ ನ ಎಳ್ಳುಕುಂಟೆ ಬಳಿ ಅಪಾರ್ಟ್ಮೆಂಟ್ ಜಾಗದಲ್ಲಿ ಚಿನ್ನದ ನಿಧಿ ಇದೆ ಎಂದು ಕಿಡಿಗೇಡಿಗಳು ದೊಡ್ಡ ಪ್ರಮಾಣದಲ್ಲಿ ಭೂಮಿ ಅಗೆದಿರುವುದು ಪತ್ತೆಯಾಗಿದೆ.
ಎಳ್ಳುಕುಂಟೆ ಬಳಿ ಹಲವು ವರ್ಷಗಳ ಇತಿಹಾಸ ಹೊಂದಿರುವ ದೇವಸ್ಥಾನವಿದ್ದು, ಇಲ್ಲಿ ಪ್ರತಿ ವರ್ಷ ಬಸವೇಶ್ವರ ಜಾತ್ರೆ ಮಹೋತ್ಸವ ಮಾಡುತ್ತಾರೆ. ದೇವಸ್ಥಾನಕ್ಕೆ ಹೊಂದಿಕೊಂಡಂತಿರುವ ಅಪಾರ್ಟ್ ಮೆಂಟ್ ಕೆಳಗಡೆ ನಿಧಿ ಅಡಗಿದೆ ಎನ್ನುವ ನಂಬಿಕೆಯಿಂದ ಭೂಮಿ ಅಗೆಯಲಾಗಿದೆ.
ಈಗಲೂ ಇಲ್ಲಿನ ಹಳೆಯ ಶಿಲೆಗಳನ್ನು ಸ್ಥಳೀಯ ನಿವಾಸಿಗಳು ಪೂಜೆ ಮಾಡುತ್ತಾರೆ. ಪೂಜೆ ಮಾಡುವ ಸ್ಥಳಕ್ಕೆ ಹೊಂದಿಕೊಂಡಂತೆ ಅಪಾರ್ಟ್ಮೆಂಟ್ ನಿರ್ಮಾಣ ಮಾಡಲಾಗಿದೆ.ಕೆಲ ಕಿಡಿಗೇಡಿಗಳು ನಿಧಿಯಾಸೆಗೆ 900 ವರ್ಷದ ದೇವಸ್ಥಾನದ ಕೆಳಗೆ ಅಗೆದಿದ್ದಾರೆ.ಮೂರ್ನಾಲ್ಕು ದಿನಗಳ ಹಿಂದೆ ಈ ಜಾಗದಲ್ಲಿ 5 ಅಡಿಗೂ ಹೆಚ್ಚು ಅಗೆದು ಪೂಜೆ ಮಾಡಿರುವುದು ಪತ್ತೆಯಾಗಿದೆ.
ಅಪಾರ್ಟ್ ಮೆಂಟ್ ಗೆ ಹೊಂದಿಕೊಂಡಂತೆ ಇರುವ ಖಾಲಿ ಸ್ಥಳದಲ್ಲಿ ಪೂಜೆ-ಹೋಮ ಹವನ ಮಾಡಿದ್ದಾರೆ. ಅಪಾರ್ಟ್ ಮೆಂಟ್ ನಿವಾಸಿಗಳು ನೆನ್ನೆ ಹುಣ್ಣಿಮೆ ಹಾಗೂ ಗ್ರಹಣ ಇದ್ದ ಹಿನ್ನೆಲೆಯಲ್ಲಿ ಯಾವುದೋ ದೇವರ ಪೂಜೆ ಮಾಡುತ್ತಿದ್ದಾರೆ ಎಂದು ಭಾವಿಸಿ ಆ ಬಗ್ಗೆ ಯಾರು ಪ್ರಶ್ನೆ ಮಾಡಿಲ್ಲ. ಈ ಪೂಜೆಯಲ್ಲ ಮುಗಿದ ನಂತರ ರಾತ್ರಿ ಅದೇ ಜಾಗದ ಸಮೀಪ ದಲ್ಲಿ ಅಗೆದಿದ್ದಾರೆ. ದೇವರ ಸ್ಥಾನದ ಹಿಂಭಾಗದಿಂದ ಅಗೆದಿರುವ ಕಿಡಿಗೇಡಿಗಳು ಅಪಾರ್ಟ್ ಮೆಂಟ್ ನ ನೆಲಮಹಡಿಯ ಪಾರ್ಕಿಂಗ್ ಬಳಿ ಅಗೆದಿರುವುದು ಪತ್ತೆಯಾಗಿದೆ. ಯಾರಿಗೂ ಗೊತ್ತಾಗಬಾರದು ಎಂದು ಸುತ್ತಲೂ ತಾತ್ಕಾಲಿಕ ಶೆಡ್ ಹಾಕಿ ಅಗೆದು ಪೂಜೆ ಮಾಡಿದ್ದಾರೆ.
ಇದೀಗ ಅಪಾರ್ಟ್ ಮೆಂಟ್ ನ ನಿವಾಸಿಗಳು ಪೊಲೀಸರಿಗೆ ದೂರು ನೀಡಿದ್ದಾರೆ.ಈ ಸಂಬಂಧ ಹೆಚ್ ಎಸ್ ಆರ್ ಲೇಔಟ್ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.

