ಬೆಂಗಳೂರು,ಸೆ.2 – ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ದೇಶದ ಹಲವು ಕಡೆ ವಿಧ್ವಂಸಕಕ್ಕೆ ಸಂಚು ನಡೆಸಿದ್ದ ಶಂಕಿತ ಉಗ್ರರ ಹಣಕಾಸು ಮೂಲದ ಬೆನ್ನು ಹತ್ತಿರುವ ರಾಷ್ಟ್ರೀಯ ತನಿಖಾ ದಳ (ಎನ್ ಐಎ) ಕರ್ನಾಟಕ ಸೇರಿದಂತೆ ದೇಶದ ನಾಲ್ಕು ರಾಜ್ಯಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದೆ.
ಈ ದಾಳಿಯ ವೇಳೆ ಉಗ್ರ ಸಂಘಟನೆಗಳ ಚಟುವಟಿಕೆಗೆ ಬಳಕೆ ಮಾಡುತ್ತಿದ್ದ ಡಿಜಿಟಲ್ ಉಪಕರಣಗಳು ಹಾಗೂ ಪ್ರಚೋದನಕಾರಿ ವಸ್ತುಗಳನ್ನು ವಶಕ್ಕೆ ಪಡೆದು ಪರಿಶೀಲನೆ ಕೈಗೊಂಡಿದ್ದಾರೆ.
ದೇಶದಲ್ಲಿ ಯುವಕರನ್ನು ನೇಮಿಸಿಕೊಂಡು ಅವರಿಗೆ ಜಿಹಾದ್ ತರಬೇತಿಯ ಮೂಲಕ ಉಗ್ರರನ್ನಾಗಿಸಲು ಅಲ್-ಖೈದಾ (Al Qaeda) (ಎಕ್ಯೂಐಎಸ್) ಹಾಗೂ ತೆಹರಿಕ್-ಇ-ತಾಲಿಬಾನ್ ಪಿತೂರಿ ನಡೆಸಿವೆ ಎಂಬ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಎನ್ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಇತ್ತೀಚಿಗೆ ಎನ್.ಐ.ಎ.ಮತ್ತು ಸ್ಥಳೀಯ ಪೊಲೀಸರು ಕರ್ನಾಟಕ, ಮಹಾರಾಷ್ಟ್ರ, ಗುಜರಾತ್ ಮತ್ತು ತಮಿಳುನಾಡು ಸೇರಿದಂತೆ ನಾಲ್ಕು ರಾಜ್ಯಗಳಲ್ಲಿ ನಡೆದ ಅನೇಕ ದಾಳಿಗಳಲ್ಲಿ ಹಲವನ್ನು ವಶಪಡಿಸಿಕೊಂಡು ಹೆಚ್ಚಿನ ವಿಚಾರಣೆಗೆ ಒಳ ಪಡಿಸಿದ್ದರು.
ಈ ವಿಚಾರಣೆ ಸಮಯದಲ್ಲಿ ಶಂಕಿತರು ನೀಡಿದ ಮಾಹಿತಿ ಆಧರಿಸಿ ನಡೆದ ದಾಳಿಯಲ್ಲಿ ಮಹಾರಾಷ್ಟ್ರದ ಮೂರು ಸ್ಥಳಗಳಲ್ಲಿ ಮತ್ತು ಇತರ ಮೂರು ರಾಜ್ಯಗಳಲ್ಲಿ ತಲಾ ಒಂದು ಸ್ಥಳದಲ್ಲಿ ಹಲವಾರು ಡಿಜಿಟಲ್ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪಿತೂರಿಯಲ್ಲಿ ಭಾಗಿಯಾಗಿರುವವರನ್ನು ಪತ್ತೆಹಚ್ಚಲು ಮತ್ತು ಈ ಎರಡು ಭಯೋತ್ಪಾದಕ ಸಂಘಟನೆಗಳ ಕಾನೂನುಬಾಹಿರ ಹಾಗೂ ದೇಶವನ್ನು ಅಸ್ಥಿರಗೊಳಿಸುವ ಪ್ರಯತ್ನಗಳನ್ನು ತಡೆಯಲು ಸಲುವಾಗಿ ಎನ್ಐಎ ಈ ಸಾಧನಗಳನ್ನು ಪರಿಶೀಲಿಸುತ್ತಿದೆ.
ಈ ನಿಷೇಧಿತ ಸಂಘಟನೆಗಳಿಂದ ಈ ಹಿಂದೆ ನೇಮಕಗೊಂಡ ಇಬ್ಬರು ಆರೋಪಿಗಳ ವಿರುದ್ಧ 2023ರ ಏಪ್ರಿಲ್ನಲ್ಲಿ ದಾಖಲಾದ ಪ್ರಕರಣದ ಎನ್ಐಎ ತನಿಖೆಯ ಭಾಗವಾಗಿ ಈ ದಾಳಿಗಳು ನಡೆದಿವೆ.
ಅಫ್ಘಾನಿಸ್ತಾನದಲ್ಲಿ ಭೂಮಿ ಖರೀದಿಸಲು ವಿದೇಶಕ್ಕೆ ಹಣ ವರ್ಗಾವಣೆ ಸೇರಿದಂತೆ ಭಯೋತ್ಪಾದಕ ಸಂಬಂಧಿತ ಸರಣಿ ಚಟುವಟಿಕೆಗಳಲ್ಲಿ ಆ ಇಬ್ಬರೂ ಭಾಗಿಯಾಗಿದ್ದರು.ಅವರಿಬ್ಬರು ಭಾರತದಲ್ಲಿ ಸಕ್ರಿಯವಾಗಿರುವ ತಮ್ಮ ಭಯೋತ್ಪಾದಕ ರಂಗಗಳ ಚಟುವಟಿಕೆಗಳನ್ನು ಮುಂದುವರಿಸಲು ಯುವಕರನ್ನು ಈ ಎರಡು ಸಂಘಟನೆಗಳಿಗೆ ನೇಮಕಾತಿ ಮಾಡುವಲ್ಲಿ ಭಾಗಿಯಾಗಿದ್ದರು ಎಂದು ಎನ್ಐಎ ತನಿಖೆಯಿಂದ ತಿಳಿದುಬಂದಿತ್ತು.
ಆ ಪಿತೂರಿಯು ಭಾರತದಲ್ಲಿ ಭಯೋತ್ಪಾದನೆ ಹರಡುವ, ಶಾಂತಿ ಮತ್ತು ಕೋಮು ಸೌಹಾರ್ದತೆ ಭಂಗಗೊಳಿಸುವ ಗುರಿ ಹೊಂದಿತ್ತು.
ಎಕ್ಯೂಐಎಸ್ ಭಾರತೀಯ ಉಪಖಂಡದಲ್ಲಿ ಇಸ್ಲಾಮಿಕ್ ರಾಜ್ಯ ಮತ್ತು ಇಸ್ಲಾಮಿಕ್ ಕ್ಯಾಲಿಫೇಟ್ ಸ್ಥಾಪಿಸಲು ಶ್ರಮಿಸುತ್ತಿರುವ ಉಗ್ರಗಾಮಿ ಸಂಘಟನೆಯಾಗಿದ್ದರೆ, ತೆಹರಿಕ್-ಇ-ತಾಲಿಬಾನ್ ಅಫ್ಘಾನ್-ಪಾಕಿಸ್ತಾನ ಗಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಇಸ್ಲಾಮಿಕ್ ಸಶಸ್ತ್ರ ಉಗ್ರಗಾಮಿ ಗುಂಪುಗಳನ್ನು ಒಳಗೊಂಡ ಸಂಘಟನೆಯಾಗಿದೆ.