ಬೆಂಗಳೂರು, ಸೆ.12 – ರಿವಾರ್ಡ್ ಪಾಯಿಂಟ್ ವೆಬ್ ಸೈಟ್ ನ್ನು ಹ್ಯಾಕ್ ಮಾಡಿ ಕೋಟ್ಯಂತರ ರೂ ಮೊತ್ತದ ಚಿನ್ನ ಬೆಳ್ಳಿಯನ್ನು ಖರೀದಿಸಿದ ಅಂಧ್ರದ ಚಿತ್ತೂರು ಮೂಲಕ ಖತರ್ನಾಕ್ ಬಿಟೆಕ್ ಪದವೀಧರರನ್ನು ಬಂಧಿಸಿ ಭರ್ಜರಿ ಬೇಟೆಯಾಡಿರುವ ಆಗ್ನೇಯ ವೀಭಾಗದ ಸಿಇಎನ್ ಪೊಲೀಸರು 4 ಕೋಟಿ 16 ಲಕ್ಷ 63 ಸಾವಿರ ಮೌಲ್ಯದ ಮಾಲುಗಳನ್ನು ಜಪ್ತಿ ಮಾಡಿದ್ದಾರೆ.
ಆಂಧ್ರಪ್ರದೇಶದ ಐಐಐಟಿ ಓಂಗೋಲ್ ನಲ್ಲಿ ಬಿಟೆಕ್ ಪದವಿ ಪಡೆದಿದ್ದ ಲಕ್ಷ್ಮೀಪತಿ ಬಂಧಿತ ಆರೋಪಿಯಾಗಿದ್ದು, ಆತನಿಂದ 11.13ಲಕ್ಷ ನಗದು,3.40ಕೋಟಿ ಮೌಲ್ಯದ 5.269 ಕೆಜಿ ಚಿನ್ನ,21.80 ಲಕ್ಷ ಮೌಲ್ಯದ 27.250ಕೆಜಿ ಬೆಳ್ಳಿ,7 ಬೈಕ್ ಗಳು,ಫ್ರೀಜ್ ಆದ 26 ಲಕ್ಷ ಸೇರಿ 4 ಕೋಟಿ 16 ಲಕ್ಷ 63 ಸಾವಿರ ಮೌಲ್ಯದ ಮಾಲುಗಳನ್ನು ಜಪ್ತಿ ಮಾಡಲಾಗಿದೆ.
ಓದಿದ್ದು, ಬಿಟೆಕ್ (B-Tech) ಆಗಿದ್ದರೂ ಸೈಬರ್ ಹ್ಯಾಕ್ ಕೆಲಸ ಮಾಡಿ ಕೋಟಿಗಟ್ಟಲೇ ಗಳಿಸಿದ್ದ ಬಂಧಿತ ಆರೋಪಿಯನ್ನು ಹೆಚ್ಚಿನ ತನಿಖೆಗೆ ಒಳಪಡಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ರಿವಾರ್ಡ್ ಪಾಯಿಂಟ್ ವೆಬ್ ಸೈಟ್ ಹ್ಯಾಕ್ ಮಾಡುತ್ತಿದ್ದ ಆರೋಪಿಯು, ವಿವಿಧ ಕಂಪನಿಗಳಿಂದ ತಮ್ಮ ಗ್ರಾಹಕರಿಗೆ ಕೊಡುವ ಗಿಫ್ಟ್ ವೋಚರ್ಗಳನ್ನ ಹ್ಯಾಕ್ ಮಾಡಿ, ಅದರ ಲಾಭವನ್ನು ತನ್ನ ಖಾತೆಗೆ ವರ್ಗಾವಣೆ ಮಾಡಿಕೊಳ್ಳುತ್ತಿದ್ದ.
ಆರೋಪಿಯು ಇಲ್ಲಿಯವರೆಗೆ ರಿವಾರ್ಡ್ಸ್ 360 ವೆಬ್ ಸೈಟ್ ಹ್ಯಾಕ್ ಮಾಡಿ, ಗ್ರಾಹಕರಿಗೆ ಕೊಡುತ್ತಿದ್ದ ರಿವಾರ್ಡ್ ಗಿಫ್ಟ್ ಓಚರ್ಗಳನ್ನು ತನ್ನ ಖಾತೆಗೆ ವರ್ಗಾವಣೆ ಮಾಡಿಕೊಳ್ಳುತ್ತಿದ್ದನು.
ಈ ಬಗ್ಗೆ ರಿವಾರ್ಡ್ 360 ಕಂಪನಿ ನಿರ್ದೇಶಕರಿಂದ ಆಗ್ನೇಯ ವೀಭಾಗದ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು.ದೂರನ್ನು ಗಂಭೀರವಾಗಿ ಪರಿಗಣಿಸಿದ ಡಿಸಿಪಿ ಚಂದ್ರಶೇಖರ ಬಾಬಾ ಅವರು ರಚಿಸಿದ್ದ ವಿಶೇಷ ತಂಡ ಕಾರ್ಯಾಚರಣೆ ಕೈಗೊಂಡಾಗ ಆಂಧ್ರ ಮೂಲದ ವ್ಯಕ್ತಿಯಿಂದ ಕೃತ್ಯ ನಡೆಸಿದ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿದೆ.
ಇದರ ಬೆನ್ನಲ್ಲೇ ಆರೋಪಿ ಲಕ್ಷ್ಮೀಪತಿಯನ್ನು ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಇನ್ನು ಹ್ಯಾಕ್ ಮಾಡಿ ಬಂದಿದ್ದ ಎಲ್ಲ ಚಿನ್ನ, ಬೆಳ್ಳಿ, ಹಣವನ್ನ ಎಲ್ಲಿಯೂ ಖರ್ಚು ಮಾಡದೇ ಹಾಗೂ ಬೇರೆಯವರಿಗೂ ಹಂಚಿಕೊಳ್ಳದೇ ಎಲ್ಲವನ್ನು ತನ್ನ ಮನೆಯಲ್ಲೆ ಇಟ್ಟುಕೊಂಡಿದ್ದನು.
ಆರೋಪಿಯ ಸೈಬರ್ ವಂಚನೆಯ ಬಗ್ಗೆ ಆಗ್ನೇಯ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲು ಆದ ಬೆನ್ನಲ್ಲಿಯೇ ಸೈಬರ್ ಹ್ಯಾಕ್ ಮೂಲಕ ತಾನು ಪಡೆದುಕೊಂಡಿದ್ದ ಎಲ್ಲ ಚಿನ್ನ, ಬೆಳ್ಳಿ ಹಾಗೂ ನಗದು ಹಣವನ್ನು ವಶಕ್ಕೆ ಪಡೆಯಲಾಗಿದೆ. ಇನ್ನು ಆರೋಪಿ ಲಕ್ಷ್ಮೀಪತಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ಹೆಚ್ಚಿನ ತನಿಖೆಯನ್ನು ಮುಂದುವರೆಸಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತ ರಮಣ್ ಗುಪ್ತ ಡಿಸಿಪಿ ಚಂದ್ರಶೇಖರ ಬಾಬಾ ಅವರಿದ್ದರು.