ಬೆಂಗಳೂರು,ಅ.22-
ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗಾಗಿ ರಾಜ್ಯರಸ್ತೆ ಸಾರಿಗೆ ಸಂಸ್ಥೆ ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿದ್ದ ಏಳು ತಿಂಗಳ ಗರ್ಭಿಣಿ ಬಸ್ ನಲ್ಲೇ ಅವಳಿ ಮಕ್ಕಳಿಗೆ ಜನ್ಮ ನೀಡಿದ ಘಟನೆ ಕನಕಪುರದ ಬಳಿ ನಡೆದಿದೆ.
ಕನಕಪುರದ ಹುಣಸನಹಳ್ಳಿಯ ಮಹಿಳೆ ರಜಿಯಾ ಭಾನು ಬಸ್ಸಿನಲ್ಲಿ ಪ್ರಯಾಣ ಮಾಡುವಾಗ ಒಂದು ಗಂಡು, ಒಂದು ಹೆಣ್ಣು ಸೇರಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾಳೆ.
ಅವಧಿಗೆ ಮುನ್ನ ಜನಸಿದ ಎರಡು ಮಕ್ಕಳು ತೂಕ ಕಡಿಮೆ ಇರುವುದರಿಂದ ತಾಯಿ ಮತ್ತು ಮಕ್ಕಳನ್ನು ವಾಣಿವಿಲಾಸ ಆಸ್ಪತ್ರೆಗೆ ದಾಖಲಿಸಿ ಶಿಶುಗಳಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಹುಣಸನಹಳ್ಳಿ ಮೂಲದ ರಜಿಯಾ ಬಾನು ಮಹಿಳೆಗೆ 6 ಮತ್ತು 3 ವರ್ಷದ ಎರಡು ಹೆಣ್ಣು ಮಕ್ಕಳಿದ್ದು, ಈ ಎರಡೂ ಮಕ್ಕಳು ಸಹ ಏಳು ತಿಂಗಳಿಗೆ ಜನಿಸಿವೆ, ಒಂದು ಮಗು ಮನೆಯಲ್ಲಿ ಮತ್ತೊಂದು ಮಗು ಆಸ್ಪತ್ರೆಯಲ್ಲಿ ಏಳು ತಿಂಗಳಿಗೆ ಜನನವಾಗಿತ್ತು, ಮೂರನೇ ಬಾರಿಗೆ ಗರ್ಭಿಣಿಯಾಗಿದ್ದ ಮಹಿಳೆ ಆರು ತಿಂಗಳು ತುಂಬಿ ಏಳನೇ ತಿಂಗಳಿಗೆ ಮೂರು ದಿನ ಕಡಿಮೆ ಇರುವಾಗಲೇ ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತನ್ನ ಪತಿಯ ತಾಯಿಯೊಂದಿಗೆ ಬಸ್ಸಿನಲ್ಲಿ ತಾಲೂಕು ಹೆರಿಗೆ ಆಸ್ಪತ್ರೆಗೆ ಹೊರಟಿದ್ದರು ಎಂದು ತಿಳಿದು ಬಂದಿದೆ.
ಮಧ್ಯಾಹ್ನ ಎರಡು ಗಂಟೆ ಸಮಯದಲ್ಲಿ ಮಾರ್ಗ ಮಧ್ಯೆ ದೊಡ್ಡ ಕಬ್ಬಳ್ಳಿ ಗ್ರಾಮದ ಬಳಿ ಬರುವಾಗ ಹೊಟ್ಟೆ ನೋವು ಹೆಚ್ಚಾಗಿ ಬಸ್ಸಿನಲ್ಲೇ ಮಹಿಳೆ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾಳೆ, ಮಹಿಳೆಯನ್ನು ಸಾರಿಗೆ ಬಸ್ನಲ್ಲಿ ಆಸ್ಪತ್ರೆಗೆ ಕರೆತಂದ ನಂತರ ಆಸ್ಪತ್ರೆ ಸಿಬ್ಬಂದಿ ಮಕ್ಕಳಿಗೆ ಆರೈಕೆ ಮಾಡಿದ್ದಾರೆ.
ಮಕ್ಕಳು ಮತ್ತು ತಾಯಿಯನ್ನು ಪರೀಕ್ಷಿಸಿದ ವೈದ್ಯರು ಅವಧಿಗೆ ಮುಂಚೆ ಮಕ್ಕಳು ಜನಿಸಿವೆ. ಹಾಗಾಗಿ ಮಕ್ಕಳ ತೂಕ ಕಡಿಮೆ ಇದೆ, ಮಕ್ಕಳನ್ನು ಐಸಿಯುನಲ್ಲಿ ಇರಿಸಿ ಚಿಕಿತ್ಸೆ ನೀಡಬೇಕು, ಹೀಗಾಗಿ ವಾಣಿವಿಲಾಸ ಆಸ್ಪತ್ರೆಗೆ ಕರೆದೊಯ್ಯುವಂತೆ ಸಲಹೆ ನೀಡಿದ್ದು, ತಕ್ಷಣ ಆ್ಯಂಬ್ಯುಲೆನ್ಸ್ ನಲ್ಲಿ ವಾಣಿ ವಿಲಾಸ ಆಸ್ಪತ್ರೆಗೆ ದಾಖಲಿಸಿ ಮಕ್ಕಳಿಗೆ ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ತಾಯಿ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ಮತ್ತು ಪೋಷಕರು ಮಾಹಿತಿ ನೀಡಿದ್ದಾರೆ.