ಬೆಂಗಳೂರು, ಅ.13 – ರಾಜ್ಯದಲ್ಲಿ ಈ ಬಾರಿ ಮಳೆ ಕೈಕೊಟ್ಟ ಪರಿಣಾಮ ಬರಗಾಲ ಆವರಿಸಿದ್ದು, ವಿದ್ಯುತ್ ಉತ್ಪಾದನೆ ಕುಂಠಿತವಾಗಿದೆ.ಜೊತೆಗೆ ಬೇಡಿಕೆ ಹೆಚ್ಚಿದ್ದು,ಅದನ್ನು ಪೂರೈಸಲು ಎಲ್ಲಾ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ (KJ George) ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಆಡಳಿತದಲ್ಲಿದ್ದಾಗ ವಿದ್ಯುತ್ ಉತ್ಪಾದನೆಗೆ ಯಾವುದೇ ಕ್ರಮ ಕೈಗೊಳ್ಳದೆ ಇದ್ದರಿಂದ ಈಗ ರಾಜ್ಯದ ಜನ ಹಾಗೂ ರೈತರು ಸಮಸ್ಯೆ ಅನುಭವಿಸುವಂತಾಗಿದೆ ಎಂದು ಆರೋಪಿಸಿದರು.
ರಾಜ್ಯವನ್ನು ಕತ್ತಲೆಗೆ ತಳ್ಳಿರುವುದು ನಾವಲ್ಲ,ಬದಲಿಗೆ ಬಿಜೆಪಿಯವರು. ಹಿಂದೆ ನಾಲ್ಕು ವರ್ಷಗಳ ಕಾಲ ವಿದ್ಯುತ್ ಉತ್ಪಾದನೆಗೆ ಬಿಜೆಪಿಯವರು ಯಾವುದೇ ಕೆಲಸ ಮಾಡಲಿಲ್ಲ. ಅವರ ವೈಪಲ್ಯದಿಂದ ರಾಜ್ಯದ ಜನ ಅನುಭವಿಸುವಂತಾಗಿದೆ ಎಂದರು.
ಸಿದ್ದರಾಮಯ್ಯ ಅವರು ಮೊದಲ ಹಂತದಲ್ಲಿ ಮುಖ್ಯಮಂತ್ರಿಯಾಗಿದ್ದಾಗ, ಹಲವು ಯೋಜನೆಗಳೊಂದಿಗೆ ಕೇಂದ್ರ ವಿದ್ಯುತ್ ಗ್ರಿಡ್ಗೆ ಸಾಕಷ್ಟು ವಿದ್ಯುತ್ ಸೇರ್ಪಡೆ ಮಾಡಲಾಗಿತ್ತು. ಬಿಜೆಪಿಯವರು ನಾಲ್ಕು ವರ್ಷ ಏನನ್ನೂ ಮಾಡಲಿಲ್ಲ. ವಿಜಯಾಪುರದ ಕೂಡಗಿಯಲ್ಲಿನ 250 ಮೆಗಾವ್ಯಾಟ್ ವಿದ್ಯುತ್ ಮಂಜೂರಾತಿಯನ್ನು ಬಳಸಿಕೊಳ್ಳದೆ ದೆಹಲಿಗೆ ಬಿಟ್ಟುಕೊಟ್ಟರು ಎಂದು ದೂರಿದರು.
ಕೋವಿಡ್ ಸಾಂಕ್ರಾಮಿಕದ ನಂತರ ಉತ್ಪಾದನಾ ಚಟುವಟಿಕೆಗಳು ಹೆಚ್ಚಳಗೊಂಡಿವೆ ಹಾಗೂ ಬರಗಾಲದಿಂದಾಗಿ ವಿದ್ಯುತ್ ಬಳಕೆ ದುಪಟ್ಟಾಗಿದೆ. ಕಳೆದ ವರ್ಷ ಮಾರ್ಚ್, ಜೂನ್ನಲ್ಲಿ 16 ಸಾವಿರ ಮೇಗಾವ್ಯಾಟ್ ಬೇಡಿಕೆ ಇತ್ತು, ಈಗ ಸೆಪ್ಟಂಬರ್ನಲ್ಲೇ ಅಷ್ಟು ಬೇಡಿಕೆ ಬಂದಿದೆ.ಅದಕ್ಕಾಗಿ ತೊಂದರೆಯಾಗಿದೆ ಎಂದು ತಿಳಿಸಿದರು
ಸದ್ಯ ರಾಜ್ಯದಲ್ಲಿ 1500 ಮೆಗಾವ್ಯಾಟ್ ಕೊರತೆ ಇದೆ. ಅಷ್ಟನ್ನು ಖರೀದಿ ಮಾಡುತ್ತಿದ್ದೇವೆ. ಬಿಜೆಪಿಯವರು ಹೇಳಿದಂತೆ ವಿದ್ಯುತ್ ಕಡಿತ ಮಾಡುತ್ತಿಲ್ಲ. ಎಲ್ಲವನ್ನೂ ನಿರ್ವಹಣೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಸರಿ ಹೋಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ನಾನು ಕಾಣೆಯಾಗಿದ್ದೇನೆ ಎಂದು ಬಿಜೆಪಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ ವೇಳೆಯಲ್ಲೇ ನಾನು ಕೇಂದ್ರ ಇಂಧನ ಸಚಿವರನ್ನು ಭೇಟಿಯಾಗಿರುವ ಪೋಟೋವನ್ನು ಹಂಚಿಕೊಂಡಿದ್ದೇನೆ. ರಾಜ್ಯಕ್ಕೆ ಅಗತ್ಯ ಇರುವ ಹೆಚ್ಚಿನ ವಿದ್ಯುತ್ ಪಡೆದುಕೊಳ್ಳಲು ಕೇಂದ್ರ ಸಚಿವರು, ಕೇಂದ್ರ ಇಂಧನ ಇಲಾಖೆ ಕಾರ್ಯದರ್ಶಿ ಸೇರಿದಂತೆ ಹಲವು ಅಧಿಕಾರಿಗಳನ್ನು ಭೇಟಿ ಮಾಡಿ ಸಮಾಲೋಚನೆ ನಡೆಸುತ್ತಿದ್ದೆ. ನಾನು ದೆಹಲಿಯಲ್ಲಿ ರಾಜ್ಯದ ಪರವಾಗಿ ಕೆಲಸ ಮಾಡಿದ್ದೆ ಎಂದು ಹೇಳಿದರು.