Bengaluru
‘ಚುನಾವಣಾ ಸಂದರ್ಭದಲ್ಲಿ Congress ನಾಯಕರನ್ನೇ ಟಾರ್ಗೆಟ್ ಮಾಡಿಕೊಂಡು ED, CBI, IT ಯಂತಹ ತನಿಖಾ ಸಂಸ್ಥೆಗಳು ವಿಚಾರಣೆ ನೆಪದಲ್ಲಿ ಕಿರುಕುಳ ನೀಡುತ್ತಿವೆ. ಈ ತನಿಖಾ ಸಂಸ್ಥೆಗಳಿಗೆ ಕಾಂಗ್ರೆಸ್ ಬಿಟ್ಟು ಬಿಜೆಪಿ ನಾಯಕರ ಹಗರಣಗಳು ಕಾಣುವುದಿಲ್ಲವೇ’ ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ (Dinesh Gundu Rao) ಪ್ರಶ್ನಿಸಿದ್ದಾರೆ. ಈ ಸಂಬಂಧ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಅವರು, ‘KPCC ಅಧ್ಯಕ್ಷ ಶಿವಕುಮಾರ್ ಹಾಗೂ ಅವರ ಪುತ್ರಿಗೆ ED ನೋಟಿಸ್ ನೀಡಿರುವುದು ರಾಜಕೀಯ ಪಿತೂರಿ’ ಎಂದು ಆಪಾದಿಸಿದ್ದಾರೆ.
‘ಇತ್ತೀಚೆಗೆ ತೆಲಂಗಾಣದಲ್ಲಿ ಒಬ್ಬೊಬ್ಬ ಶಾಸಕನಿಗೆ 100 ಕೋಟಿ ರೂಪಾಯಿ ಆಮಿಷವೊಡ್ಡಿ ಆಪರೇಷನ್ ಕಮಲಕ್ಕೆ ಬಿಜೆಪಿ ಯತ್ನಿಸಿತ್ತು. ಅದರ ಪ್ರಮುಖ ಆರೋಪಿ ಬಿ.ಎಲ್.ಸಂತೋಷ್ (B L Santhosh). ಆದರೆ ED ಅಧಿಕಾರಿಗಳು ಇಲ್ಲಿಯವರೆಗೂ ಸಂತೋಷ್ ವಿಚಾರಣೆ ಯಾಕೆ ನಡೆಸಿಲ್ಲ? ಒಬ್ಬೊಬ್ಬ ಶಾಸಕನಿಗೆ 100 ಕೋಟಿ ಕೊಡಲು ದುಡ್ಡು ಎಲ್ಲಿಂದ ಬಂತು? ಆ ದುಡ್ಡಿನ ಮೂಲ ಯಾವುದು ಎಂದು ಕೇಳಿದ್ದಾರಾ?’ ಎಂದು ಪ್ರಶ್ನಿಸಿದ್ದಾರೆ.
‘ಕೇವಲ ಕಾಂಗ್ರೆಸ್ ನಾಯಕರನ್ನೇ ಗುರಿಯಾಗಿಸಿಕೊಂಡು ತನಿಖೆ ನಡೆಸುವ ED ಅಧಿಕಾರಿಗಳು ಬಿಜೆಪಿಯ ಏಜೆಂಟ್. ಸಾಂವಿಧಾನಿಕ ಸಂಸ್ಥೆ ಎಂಬ ಗೌರವ ಕಳೆದುಕೊಂಡಿರುವ ED ರಾಜಕೀಯ ಪಕ್ಷವೊಂದರ ಚಾಕರಿ ಮಾಡುತ್ತಿದೆ. ED ತನ್ನ ಕೇಂದ್ರ ಕಚೇರಿ ತೊರೆದು ದೆಹಲಿಯ ದೀನ್ ದಯಾಳ್ ಉಪಾಧ್ಯಾಯ ರಸ್ತೆಯಲ್ಲಿರೋ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಕುಳಿತು ಕಾರ್ಯನಿರ್ವಹಿಸಲಿ’ ಎಂದು ಸಲಹೆ ಮಾಡಿದರು.