ಬೆಂಗಳೂರು, ಫೆ.15- ರಾಜ್ಯದಲ್ಲಿ ಹೊಸ ಪಡಿತರ ಚೀಟಿಗಾಗಿ ಚಾತಕ ಪಕ್ಷಿಗಳಂತೆ ಕಾಯುತ್ತಿರುವ ಜನತೆಗೆ ರಾಜ್ಯ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ.
ಹೊಸ ಷಪಡಿತರ ಚೀಟಿ ಕೋರಿ ಸಲ್ಲಿಸಿರುವ ಅರ್ಜಿಗಳಲ್ಲಿ ವಿಲೇವಾರಿಗೆ ಬಾಕಿ ಇರುವ ಅರ್ಜಿಗಳನ್ನು ಮಾರ್ಚ್ 31 ರೊಳಗಾಗಿ ಇತ್ಯರ್ಥಗೊಳಿಸಿ ಎಲ್ಲಾ ಅರ್ಹರಿಗೂ ಕಾರ್ಡ್ ವಿತರಿಸಲಾಗುವುದು ಎಂದು ಆಹಾರ ಸಚಿವ ಕೆಎಚ್ ಮುನಿಯಪ್ಪ ವಿಧಾನಸಭೆಗೆ ತಿಳಿಸಿದ್ದಾರೆ.
ಕಾಂಗ್ರೆಸ್ಸಿನ ನಯನ ಮುತ್ತಮ್ಮ ಅವರ ಪ್ರಶ್ನೆಗೆ ಉತ್ತರಿಸಿದ ಅವರು ಹೊಸದಾಗಿ ಪಡಿತರ ಚೀಟಿಗಾಗಿ ಸಾಕಷ್ಟು ಬೇಡಿಕೆ ಇದೆ ರಾಜ್ಯದ ಎಲ್ಲಾ ಕಡೆಯಿಂದ ಇದಕ್ಕಾಗಿ ಆಗ್ರಹಗಳು ಕೇಳಿ ಬರುತ್ತಿವೆ ಹೀಗಾಗಿ ಬರುವ ಏಪ್ರಿಲ್ 1 ರಿಂದ ಬಿಪಿಎಲ್, ಎಪಿಎಲ್ ಕಾರ್ಡ್ಗಳಿಗೆ ಹೊಸದಾಗಿ ಅರ್ಜಿಗಳನ್ನು ಸ್ವೀಕರಿಸಲಾಗುವುದು ಎಂದು ಪ್ರಕಟಿಸಿದರು.
ಹಿಂದಿನ ಸರ್ಕಾರದ ಅವಧಿಯಲ್ಲಿ 2.95 ಲಕ್ಷ ಅರ್ಜಿಗಳನ್ನು ಎಪಿಎಲ್ ಹಾಗೂ ಬಿಪಿಎಲ್ಗಾಗಿ ಸ್ವೀಕರಿಸಲಾಗಿತ್ತು. ಚುನಾವಣಾ ಕಾರಣಕ್ಕೆ ಹೊಸಕಾರ್ಡ್ ನೀಡುವುದನ್ನು ಸ್ಥಗಿತಗೊಳಿಸಿದ್ದರಿಂದ ಅರ್ಜಿಗಳು ಬಾಕಿ ಉಳಿದಿದ್ದವು. ಈವರೆಗೂ ಅವುಗಳ ಪೈಕಿ 57 ಸಾವಿರ ಅರ್ಜಿಗಳಿಗೆ ಕಾರ್ಡ್ ನೀಡಲಾಗಿದೆ. ಬಾಕಿ ಇರುವ ಅರ್ಜಿಗಳನ್ನು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಜಂಟಿ ಆಯುಕ್ತರು ಮತ್ತು ಉಪನಿರ್ದೇಶಕರು ಸ್ಥಳ ಪರಿಶೀಲನೆ ನಡೆಸಿ ಮಾರ್ಚ್ 31ರೊಳಗೆ ಇತ್ಯರ್ಥಪಡಿಸಲು ಗಡುವು ನೀಡಲಾಗಿದೆ ಎಂದು ತಿಳಿಸಿದರು.
ಹೊಸ ಕಾರ್ಡ್ಗಳಿಗೆ ಎಲ್ಲಾ ಶಾಸಕರ ಬೇಡಿಕೆಯಂತೆ ಏಪ್ರಿಲ್ 1 ರಿಂದಲೇ ಅರ್ಜಿ ಸ್ವೀಕರಿಸಲಾಗುವುದು. ಸ್ವೀಕೃತಗೊಂಡ ಅರ್ಜಿಗಳನ್ನು 1 ತಿಂಗಳೊಳಗಾಗಿ ಇತ್ಯರ್ಥಪಡಿಸಲಾಗುವುದು ಎಂದು ಭರವಸೆ ನೀಡಿದರು. ವೈದ್ಯಕೀಯ ಅಗತ್ಯಕ್ಕನುಗುಣವಾಗಿ ಸ್ವೀಕರಿಸಲಾದ 744 ಅರ್ಜಿಗಳಿಗೂ ಪಡಿತರ ಚೀಟಿಗಳನ್ನು ನೀಡಲಾಗಿದೆ. ಇಂತಹ ಅರ್ಜಿಗಳನ್ನು ವಾರದೊಳಗಾಗಿ ಇತ್ಯರ್ಥಪಡಿಸಲು ಸೂಚಿಸಲಾಗಿದೆ ಎಂದು ಹೇಳಿದರು.
ಅನ್ನಭಾಗ್ಯ ಯೋಜನೆಯಡಿ ನಗದು ಜಮಾವಣೆಗೊಳ್ಳುತ್ತಿದ್ದು, ಶೇ.95 ರಷ್ಟು ಜನರಿಗೆ ಸೌಲಭ್ಯ ಸಿಕ್ಕಿದೆ. ತಾಂತ್ರಿಕ ಕಾರಣದಿಂದ ಶೇ.5 ರಷ್ಟು ಮಾತ್ರ ವ್ಯತ್ಯಾಸವಾಗಿದೆ. ಈ ಹಿಂದೆ ಮೂಡಿಗೆರೆ ಕ್ಷೇತ್ರದಲ್ಲಿ 599 ಜನ 4 ಚಕ್ರದ ವಾಹನ ಹೊಂದಿದ್ದಾರೆ ಎಂಬ ಕಾರಣಕ್ಕೆ ಬಿಪಿಎಲ್ನಿಂದ ಕೈಬಿಡಲಾಗಿತ್ತು. ಅವರಿಗೆ ಮತ್ತೆ ಬಡತನ ರೇಖೆಯ ಒಳಗಿನ ಕಾರ್ಡ್ ನೀಡಲು ಕ್ರಮ ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದರು.