ಬೆಂಗಳೂರು,ಮೇ.30:
ರಾಜ್ಯ ರಾಜಕಾರಣದಲ್ಲಿ ಬಾರಿ ಕೋಲಾಹಲವನ್ನೇ ಸೃಷ್ಟಿಸಿದ್ದ ಸಹಕಾರ ಮಂತ್ರಿ ಕೆ ಎನ್ ರಾಜಣ್ಣ ಸೇರಿದಂತೆ ಪ್ರಭಾವಿ ನಾಯಕರ ವಿರುದ್ಧದ ಹನಿ ಟ್ರ್ಯಾಪ್ ಪ್ರಕರಣ ಇದೀಗ ಠುಸ್ಸೆಂದಿದೆ.
ಆಡಳಿತರೂಢ ಕಾಂಗ್ರೆಸ್ ಪಾಳಯದಲ್ಲಿ ಸಂಚಲನ ಮೂಡಿಸಿದ ಈ ಪ್ರಕರಣ ಹೈಕಮಾಂಡ್ ಮಟ್ಟದಲ್ಲೂ ದೊಡ್ಡ ರೀತಿಯಲ್ಲಿ ಸದ್ದು ಮಾಡಿತ್ತು. ಪ್ರತಿಪಕ್ಷ ಬಿಜೆಪಿ ಈ ಪ್ರಕರಣವನ್ನು ಬಳಸಿಕೊಂಡು ಆಡಳಿತ ರೂಢ ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಮತ ತಲೆದೂರಿದೆ ಎಂದು ಬಿಂಬಿಸುವ ಪ್ರಯತ್ನ ನಡೆಸಿತ್ತು.
ಪ್ರಮುಖವಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧ ಸಮರ ಸಾರಿದ್ದ ಸಹಕಾರ ಮಂತ್ರಿ ಕೆಎನ್ ರಾಜಣ್ಣ ಅವರನ್ನು ಈ ಜಾಲದಲ್ಲಿ ಸಿಲುಕಿಸುವ ಪ್ರಯತ್ನ ನಡೆಸಲಾಗಿದೆ ಎಂದು ಆರೋಪಿಸಲಾಗಿತ್ತು. ಸ್ವತಃ ಮಂತ್ರಿ ರಾಜಣ್ಣ ಅವರೇ ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಮಂತ್ರಿ ಪರಮೇಶ್ವರ್ ಅವರನ್ನು ಭೇಟಿ ಮಾಡಿ ದೂರು ನೀಡಿದ್ದರು.
ಜೀನ್ಸ್ ಪ್ಯಾಂಟ್ ತೊಟ್ಟು ನೀಲಿ ಬಣ್ಣದ ಟಾಪ್ ಹಾಕಿಕೊಂಡ ಯುವತಿಯೋರ್ವಳು ವಕೀಲನೊಬ್ಬರ ಮೂಲಕ ತಮ್ಮ ಸರ್ಕಾರಿ ನಿವಾಸಕ್ಕೆ ಬಂದು ಈ ಜಾಲದಲ್ಲಿ ಬೀಳಿಸುವ ಪ್ರಯತ್ನ ಮಾಡಿದ್ದರು ಅವರನ್ನು ನೋಡಿದರೆ ನಾನು ಗುರುತು ಹಿಡಿಯುತ್ತೇನೆ ಎಂದು ಹೇಳಿದ ರಾಜಣ್ಣ ಪ್ರಕರಣದ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿದ್ದರು.
ರಾಜಕೀಯವಾಗಿ ತೀವ್ರ ವಿವಾದಕ್ಕೆ ಕಾರಣವಾಗಿದ್ದ ಈ ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಟಿ ತನಿಖೆಗೆ ವಹಿಸಿತ್ತು. ಇದೀಗ ಸಿಐಡಿ ತನಿಖೆಯನ್ನು ಪೂರ್ಣಗೊಳಿಸಿದ್ದು ಹನಿ ಟ್ರ್ಯಾಪ್ ನಲ್ಲಿ ಬೀಳಿಸುವ ಪ್ರಯತ್ನ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಯಾವುದೇ ಸೂಕ್ತ ಸಾಕ್ಷಾಧಾರಗಳು ಲಭ್ಯವಿಲ್ಲ ಎಂದು ತೀರ್ಮಾನಕ್ಕೆ ಬಂದಿದೆ.
ಇಂತಹ ಆರೋಪ ಮಾಡಿ ತನಿಖೆಗೆ ಆಗ್ರಹಿಸಿದ್ದ ಮಂತ್ರಿ ರಾಜಣ್ಣ ಅವರು ಕೂಡ ತನಿಖೆಗೆ ಪೂರಕವಾದಂತ ಯಾವುದೇ ಸಾಕ್ಷಿಗಳನ್ನು ನೀಡಲು ವಿಫಲವಾಗಿದ್ದಾರೆ ಹೀಗಾಗಿ ಪ್ರಕರಣದ ತನಿಖೆಗೆ ಯಾವುದೇ ದಾಖಲೆಗಳು ಸಿಗದ ಹಿನ್ನೆಲೆಯಲ್ಲಿ ತನಿಖೆಯಲ್ಲಿ ಯಾವುದೇ ಪ್ರಗತಿ ಸಾಧಿಸಲಾಗಿಲ್ಲ ಎಂದು ಸಿಐಡಿ ತಂಡ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ವರದಿ ಸಲ್ಲಿಸಿದೆ.
Previous Articleಜನಾರ್ದನ ರೆಡ್ಡಿ ಕೇಸ್ ವಿಚಾರಣೆಗೆ ಜಡ್ಜ್ ಯಾರೂ ರೆಡಿ ಇಲ್ಲ.
Next Article HMT ಭೂಮಿ ಕಬಳಿಸಲು ಕುಮ್ಮಕ್ಕು ನೀಡಿದ ಅಧಿಕಾರಿಗಳು !