ಬೆಂಗಳೂರು, ಫೆ.27: ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ನಿರೀಕ್ಷೆಯಂತೆ ಕಾಂಗ್ರೆಸ್ಸಿನ ಮೂವರು ಮತ್ತು ಬಿಜೆಪಿಯ ಓರ್ವ ಅಭ್ಯರ್ಥಿ ಆಯ್ಕೆಯಾಗಿದ್ದಾರೆ. ಪವಾಡದ ನೀರಿಕ್ಷೆಯಲ್ಲಿದ್ದ ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಅವರಿಗೆ ನಿರಾಸೆಯಾಗಿದೆ.
ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ತೆರೆಯಲಾಗಿದ್ದ ಮತಗಟ್ಟೆಗೆ ಎಲ್ಲಾ ಶಾಸಕರು ಅತ್ಯಂತ ಉತ್ಸಾಹದಿಂದ ಆಗಮಿಸಿ ಮತ ಚಲಾಯಿಸಿದರೆ ಬಿಜೆಪಿಯ ಶಾಸಕ ಎಸ್ ಟಿ ಸೋಮಶೇಖರ್ ಅಡ್ಡ ಮತದಾನ ಮಾಡುವ ಮೂಲಕ ಗಮನ ಸೆಳೆದರು. ಮತ್ತೋರ್ವ ಶಾಸಕ ಶಿವರಾಮ ಹೆಬ್ಬಾರ್ ಮತದಾನ ಚಟುವಟಿಕೆಯಿಂದ ದೂರ ಉಳಿಯುವ ಮೂಲಕ ಅಚ್ಚರಿ ಮೂಡಿಸಿದರು.
ಅಡ್ಡ ಮತದಾನದ ಭೀತಿ ಎದುರಿಸುತ್ತಿದ್ದ ಜೆಡಿಎಸ್ ನಲ್ಲಿ ಯಾವುದೇ ವಿದ್ಯಮಾನಗಳು ನಡೆಯಲಿಲ್ಲ ಗುರುಮಠಕಲ್ ಶಾಸಕ ಶರಣ ಗೌಡ ಕುಂದಕೂರ ಸೇರಿದಂತೆ ಎಲ್ಲ ಶಾಸಕರು ನಿಗದಿತ ಸಮಯಕ್ಕೆ ಹಾಜರಾಗಿ ತಮ್ಮ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಪರವಾಗಿ ಮತ ಚಲಾಯಿಸುವ ಮೂಲಕ ಎಲ್ಲರ ಲೆಕ್ಕಾಚಾರಗಳನ್ನು ತಲೆಕೆಳಗು ಮಾಡಿದರು.
ಬಿಜೆಪಿ ಶಾಸಕ ಸುರೇಶ್ಕುಮಾರ್ ಮೊದಲಿಗರಾಗಿ ಬಂದು ಮತ ಹಾಕಿದರು. ನಂತರ ಶಾಸಕರು ಒಬ್ಬೊಬ್ಬರಾಗಿ ಬಂದು ಮತ ಹಾಕಿದರು.ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಐವರು ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಓರ್ವ ಅಭ್ಯರ್ಥಿ ಗೆಲುವು ಸಾಧಿಸಲು 45 ಶಾಸಕರ ಮತಗಳ ಅಗತ್ಯವಿದೆ.
ಅದರಂತೆ ಶಾಸನಸಭೆಯಲ್ಲಿ 138 ಶಾಸಕರನ್ನು ಹೊಂದಿರುವ ಕಾಂಗ್ರೆಸ್ ನಾಲ್ವರು ಪಕ್ಷೇತರ ಶಾಸಕರ ನೆರವಿನೊಂದಿಗೆ ಮೂರು ಸ್ಥಾನ ಗಳಿಸಲು ಯಶಸ್ವಿಯಾಗಿದೆ ಕಾಂಗ್ರೆಸ್ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದ ಅಜಯ್ ಮಾಕೇನ್ ನಾಸೀರ್ ಹುಸೇನ್ ಮತ್ತು ಜಿ ಸಿ ಚಂದ್ರಶೇಖರ್ ತಲಾ 47 ಮತಗಳನ್ನು ಪಡೆದು ಆಯ್ಕೆಯಾದರು.
ಪಕ್ಷೇತರ ಶಾಸಕರಾದ ಲತಾ ಮಲ್ಲಿಕಾರ್ಜುನ ವೆಂಕಟರಮಣಯ್ಯ ಜನಾರ್ಧನ ರೆಡ್ಡಿ ಮತ್ತು ದರ್ಶನ್ ಪುಟ್ಟಣ್ಣಯ್ಯ ಅವರು ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸಿದರು.

