Bengaluru: ಪೊಲೀಸ್ ಸಬ್ ಇನ್ಸ್ಪೆಕ್ಟರ್ ನೇಮಕಾತಿಯಲ್ಲಿ ನಡೆದ ಅಕ್ರಮ ಪ್ರಕರಣದಲ್ಲಿ ನೈತಿಕತೆ ಹೊಣೆ ಹೊತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೊದಲು ರಾಜೀನಾಮೆ ಕೊಡಬೇಕು’ ಎಂದು ಪ್ರತಿ ಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದರೆ, ರಾಜ್ಯ ಸರ್ಕಾರವನ್ನೇ ವಜಾಗೊಳಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಒತ್ತಾಯಿಸಿದ್ದಾರೆ.
ಜಂಟಿ ಸುದ್ದಿಗೊಷ್ಟಿಯಲ್ಲಿ ಮಾತನಾಡಿದ ಈ ನಾಯಕರು ದೇಶದಲ್ಲೇ ಅತ್ಯಂತ ಭ್ರಷ್ಟ ಸರ್ಕಾರ ರಾಜ್ಯದಲ್ಲಿದೆ. ಇದರ ವಿರುದ್ಧ ಹೋರಾಟ ಮಾಡುತ್ತೇವೆ. ಕೂಡಲೇ ಸರ್ಕಾರವನ್ನು ರಾಜ್ಯಪಾಲರು ವಜಾಗೊಳಿಸಬೇಕು‘ ಎಂದು ಶಿವಕುಮಾರ್ ಆಗ್ರಹಿಸಿದರು.
ನೇಮಕಾತಿಯಲ್ಲಿ ನಡೆದ ಅಕ್ರಮದಿಂದಾಗಿ ಇಡೀ ಭಾರತದ ಇತಿಹಾಸದಲ್ಲಿ ರಾಜ್ಯಕ್ಕೆ ಕಪ್ಪು ಚುಕ್ಕೆ ಬಂದಿದೆ. ಇದರಿಂದಾಗಿ ಕರ್ನಾಟಕದ ಆಡಳಿತ, ಗೌರವಕ್ಕೆ ಮಸಿ ಬಳಿದಂತಾಗಿದೆ. ನ್ಯಾಯಾಲಯ ಸಾಮಾನ್ಯ ಜನರ ರಕ್ಷಣೆಗೆ ಬಂದಿದೆ. ಆದರೆ, ನ್ಯಾಯಾಂಗಕ್ಕೂ ರಕ್ಷಣೆ ಇಲ್ಲದಂತಾಗಿದೆ. ನ್ಯಾಯಾಧೀಶರ ಸ್ಥಾನಕ್ಕೆ ಕಂಟಕ ಬರುವ ರೀತಿ ನ್ಯಾಯಾಧೀಶರು ಹೇಳಿಕೊಂಡಿದ್ದಾರೆ. ನ್ಯಾಯಾಲಯದ ಆದೇಶದ ಮೇರೆಗೆ ಇಬ್ಬರು ಅಧಿಕಾರಿಗಳ ಬಂಧನವಾಗಿದೆ’ ಎಂದು ಹೇಳಿದರು.
ಉಪ್ಪಿನ ಅಂಗಡಿ ತೆರೆದವರು ಯಾರು? ಸರ್ಕಾರ ಇದರಲ್ಲಿ ಸಂಪೂರ್ಣ ಶಾಮೀಲಾಗಿದೆ. ಉಪ್ಪು ಖರೀದಿಸಿದವರನ್ನು ಮಾತ್ರ ಪೊಲೀಸರು ಬಂಧಿಸಿದ್ದಾರೆ. ದೊಡ್ಡ ದೊಡ್ಡವರನ್ನು ಹಾಗೇ ಬಿಟ್ಟಿದ್ದಾರೆ. ದೊಡ್ಡ ಅಧಿಕಾರಿಯನ್ನು ಬಂಧಿಸಿ ಅರ್ಧ ಗಂಟೆ ಮಾತ್ರ ವಿಚಾರಣೆ ನಡೆಸಿದ್ದಾರೆ. ಇವರಿಗೆ ನಾಚಿಕೆಯಾಗಬೇಕು. ನಮ್ಮನ್ನು ಗಂಟೆಗಟ್ಟಲೆ ಕೂರಿಸಿಕೊಳ್ಳುತ್ತಾರೆ. ಇವರನ್ನು ಯಾಕೆ ಕಡಿಮೆ ಅವಧಿ ವಿಚಾರಣೆ ಮಾಡಿದ್ದಾರೆ?’ ಎಂದು ವಾಗ್ದಾಳಿ ನಡೆಸಿದರು.
‘ನಮ್ಮ ನಾಯಕ ರಾಹುಲ್ ಗಾಂಧಿ ಅವರನ್ನು ಈ ಹಿಂದೆ ಇಡಿ ಅಧಿಕಾರಿಗಳು 50 ಗಂಟೆ ವಿಚಾರಣೆ ನಡೆಸಿದ್ದರು. ಆದರೆ, ಈಗ ಬಂಧಿಸಿರುವ ಅಧಿಕಾರಿ ವಿಚಾರವಾಗಿ ಯಾಕೆ ಹೀಗೆ? ಹಾದಿ ತಪ್ಪಿಸಲು, ಕಣ್ಣೊರೆಸಲು ಏನೇನೋ ಮಾಡುತ್ತಿದ್ದಾರೆ. ಎಷ್ಟೋ ಜನ ಕೆಲಸಕ್ಕಾಗಿ ಲಕ್ಷಾಂತರ ಹಣ ಕಳೆದುಕೊಂಡಿದ್ದಾರೆ. ಸಮಗ್ರ ವಿಚಾರಣೆ ನಡೆಸದೆ ವೈದ್ಯ ಪರೀಕ್ಷೆಗೆ ಕಳುಹಿಸಿದ್ದು ಗೊತ್ತಿಲ್ಲವೇ‘ ಎಂದೂ ಹೇಳಿದರು.
ರಾಜೀನಾಮೆ ಕೊಡಿ:
‘ಈ ಹಗರಣದಲ್ಲಿ ಲಕ್ಷಾಂತರ ರೂಪಾಯಿ ವ್ಯವಹಾರ ನಡೆದಿದೆ. ಇದರ ಬಗ್ಗೆ ನಾಡಿನ ಜನರಿಗೆ ಗೊತ್ತಾಗಬೇಕಲ್ಲವೇ? ಇವರನ್ನೆಲ್ಲಾ ರಕ್ಷಣೆ ಮಾಡುತ್ತಿರುವವರು ಯಾರು? ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಕ್ಷಿಸುತ್ತಿದ್ದಾರೆ’ ಎಂದು ಸಿದ್ದರಾಮಯ್ಯ ಆರೋಪಿಸಿದರು.
ವರ್ಗಾವಣೆ ಮಾಡುವುದಾಗಿ ನ್ಯಾಯಾಧೀಶರನ್ನೇ ಹೆದರಿಸಿದ್ದಾರೆ. ನ್ಯಾಯಾಧೀಶರಿಗೇ ರಕ್ಷಣೆ ಇಲ್ಲದಂತಾಗಿದೆ. ರಾಜ್ಯದಲ್ಲಿ ಲಂಚಾವತಾರ ಮುಗಿಲು ಮುಟ್ಟಿದೆ. ಎಸಿಬಿ ಆ್ಯಂಟಿ ಕರೆಪ್ಷನ್ ಬ್ಯೂರೋ ಅಲ್ಲ, ಕಲೆಕ್ಷನ್ ಬ್ಯೂರೋ. ಅದನ್ನು ಹುಟ್ಟು ಹಾಕಿದ್ದೇ ತಪ್ಪಾ? ಭ್ರಷ್ಟಾಚಾರದ ನಿಯಂತ್ರಣಕ್ಕೆ ಹುಟ್ಟು ಹಾಕಿದ್ದು. ಹಾಗಂತ ವ್ಯವಸ್ಥೆಯೇ ಭ್ರಷ್ಟಾಚಾರದ ರೂಪ ಪಡೆದರೆ ಹೇಗೆ? ಎಸಿಬಿ ಹುಟ್ಟು ಹಾಕಿದ್ದು ನಾವೇ? ಇದು ನಮ್ಮ ಕೂಸು. ಅವರ ಕೂಸು ಎಂದು ಅಲ್ಲ. ಇದನ್ನು ಹುಟ್ಟು ಹಾಕಿರುವುದು ಭ್ರಷ್ಟಾಚಾರ ಕಡಿಮೆ ಮಾಡಲಿ. ಭ್ರಷ್ಟರಿಗೆ ಶಿಕ್ಷೆಯಾಗಲಿ ಎಂಬ ಕಾರಣಕ್ಕೆ’ ಎಂದರು.
‘ಈ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಪುತ್ರ ವಿಜಯೇಂದ್ರ ಇದ್ದಾರೆ ಎಂಬ ಮಾಹಿತಿ ನನಗೆ ಬಂದಿದೆ. ಅವರ ಮೇಲೂ ಆರೋಪಗಳು ಕೇಳಿಬಂದಿವೆ. ಇನ್ನೂ ಬಹಳ ಜನರು ಇದ್ದಾರೆ. ಅಶ್ವತ್ಥ ನಾರಾಯಣ್, ಅಧಿಕಾರಿಗಳೂ ಇದಾರೆ. ಅವರು ಅಧಿಕಾರದಲ್ಲಿ ಮುಂದುವರೆಯಲು ಸಾಧ್ಯವಿಲ್ಲ. ಈ ಪ್ರಕರಣದಲ್ಲಿ ಅವರ ಕಾಲ, ಇವರ ಕಾಲ ಎಂದು ಸಮರ್ಥಿಸಿಕೊಳ್ಳುವುದು ಸರಿಯಲ್ಲ’ಕೂಡಲೆ ಮುಖ್ಯಮಂತ್ರಿಗಳು ರಾಜೀನಾಮೆ ನೀಡಬೇಕಾದ ಎಂದು ಆಗ್ರಹಿಸಿದರು.
Previous Articleಡೆಲಿವರಿ ಬಾಯ್ ಆಗಿ ಸತೀಶ್ ನೀನಾಸಂ!
Next Article ಚಂದ್ರಶೇಖರ್ ಗುರೂಜಿ ಕೊಲೆ ಆರೋಪಿಗಳಿಬ್ಬರ ಬಂಧನ