ಬೆಂಗಳೂರು,ಜು.27-ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಭೀಕರ ಕೊಲೆಯನ್ನು ಖಂಡಿಸಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಕೊಲೆಗಡುಕರನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಹೇಳಿದರು. ರಾಜ್ಯದಲ್ಲಿ ಒಬ್ಬ ಅಮಾಯಕನ ಕೊಲೆಯಾದಾಗ ಆಕ್ರೋಶ ಇರಲಿದೆ.
ಕೇರಳ ಗಡಿ ದಾಟಿ ಕೊಲೆಗಾರರ ಹಿಡಿಯಲು ಗೃಹಸಚಿವರು, ಪೊಲೀಸರಿಗೆ ಸೂಚನೆ ನೀಡಿದ್ದೇನೆ ಎಂದು ಸುದ್ದಿಗಾರರಿಗೆ ತಿಳಿಸಿದರು. ಅಂಗಡಿ ಬಾಗಿಲು ಮುಚ್ಚುವ ವೇಳೆ ಯಾರೂ ಇಲ್ಲದಿರುವಾಗ ಕೊಲೆ ನಡೆದಿದೆ. ಹಿಂದಿನಿಂದ ಬಂದು ಕೊಲೆ ಮಾಡಿದ್ದಾರೆ. ಕೊಲೆಗಡುಕರ ದಸ್ತಗಿರಿ ಮಾಡಿ ಕ್ರಮ ತೆಗೆದುಕೊಳ್ಳುತ್ತೇವೆ. ಇದು ಒಂದು ವ್ಯವಸ್ಥಿತ ಸಂಚು. ಕ್ಷೋಬೆ ಉಂಟು ಮಾಡುವ ವರ್ಗದಿಂದ ಕೊಲೆ ಮಾಡಲಾಗಿದೆ. ಆ ವರ್ಗವನ್ನು ಸದೆ ಬಡಿಯುವ ಕೆಲಸ ಮಾಡ್ತೇವೆ ಎಂದು ಸ್ಪಷ್ಟಪಡಿಸಿದರು.
ಅಲ್ಲಿನ ಜನರಲ್ಲಿ ಆಕ್ರೋಶ ಇದೆ. ಶಾಂತಿ ಕಾಪಾಡಲು ಮನವಿ ಮಾಡಿಕೊಳ್ಳುತ್ತೇವೆ. ಸಾಮಾಜಿಕ ಜಾಲತಾಣದಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ಕಾರುತ್ತಿಲ್ಲ. ಆ ಘಟನೆ ನಡೆಯಬಾರದಿತ್ತು ಎನ್ನುವ ಆಕ್ರೋಶ ಅವರದ್ದು ಎಂದು ಹೇಳುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗ್ತಿರುವ ಆಕ್ರೋಶಕ್ಕೆ ಅವರು ಸ್ಪಷ್ಟನೆ ನೀಡಿದರು.
ದುರದೃಷ್ಟಕರ ಘಟನೆ:
ಸೈದ್ಧಾಂತಿಕವಾಗಿ ವಿಚಾರ ಮಂಡಿಸಲಿ. ಆದರೆ ಹತ್ಯೆ ಮಾಡುವುದು, ರಕ್ತ ಹರಿಸುವುದು ಸರಿಯಲ್ಲ. ಇಂಥ ಶಕ್ತಿಗಳನ್ನು ಮಟ್ಟ ಹಾಕುತ್ತೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇದೊಂದು ದುರಾದೃಷ್ಟಕರ ಸಂಗತಿ. ಒಬ್ಬ ಅಮಾಯಕ ಯುವಕ ತನ್ನ ಅಂಗಡಿ ಮುಚ್ಚಿ ಮನೆಗೆ ಹೋಗುವಾಗ ಕೊಲೆಯಾಗಿದ್ದಾನೆ.
ಬೈಕ್ನಲ್ಲಿ ಬಂದು ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಪ್ರವೀಣ್ ಕೇರಳದ ಗಡಿಯಲ್ಲಿದ್ದರು. ಹೀಗಾಗಿ ಕೇರಳ ಸರ್ಕಾರದ ಜೊತೆಗೂ ನಮ್ಮ ಪೊಲೀಸರು ಮಾತನಾಡಿದ್ದಾರೆ.ಅಲ್ಲೂ ಕಾರ್ಯಾಚರಣೆ ನಡೆಯುತ್ತಿದೆ. ಒಬ್ಬ ಯುವಕನ ಕೊಲೆಯಾಗಿರುವುದರಿಂದ ಆ ಭಾಗದ ಜನರು ಕೂಡ ಆತಂಕಕ್ಕೊಳಗಾಗಿದ್ದಾರೆ. ನಾನು, ಮುಖ್ಯಮಂತ್ರಿಗಳು ರಾತ್ರಿಯೇ ಪೊಲೀಸರ ಜೊತೆ ಮಾತಾಡಿದ್ದೇವೆ. ಅಗತ್ಯ ಸೂಚನೆ ನೀಡಿದ್ದೇವೆ. ಇದೀಗ ಪೊಲೀಸರು ಕೊಲೆಗಡುಕರ ಬೆನ್ನಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ಎಡಿಜಿಪಿ ಭೇಟಿ:
ನಮ್ಮ ಎಡಿಜಿಪಿ ಮಂಗಳೂರಿಗೆ ಹೋಗಿದ್ದಾರೆ. ಇಂಥ ಘಟನೆಗಳು ಮರುಕಳಿಸುತ್ತಿವೆ. ಹಿಜಬ್ ಹಿಂದಿನ ಶಕ್ತಿಗಳೇ ಇದರ ಹಿಂದೆಯೂ ಇದೆ. ಸೈದ್ಧಾಂತಿಕವಾಗಿ ವಿಚಾರ ಮಂಡಿಸಲಿ. ಆದರೆ ಹತ್ಯೆ ಮಾಡುವುದು, ರಕ್ತ ಹರಿಸುವುದು ಸರಿಯಲ್ಲ. ಇಂಥ ಶಕ್ತಿಗಳನ್ನು ಮಟ್ಟ ಹಾಕುತ್ತೇವೆ. ಅನೇಕ ಆಯಾಮಗಳಲ್ಲಿ ತನಿಖೆ ಮಾಡುತ್ತಿದ್ದಾರೆ. ಕಳೆದ ವಾರ ನಡೆದ ಕೊಲೆ ಪ್ರಕರಣದ ಆರೋಪಿಗಳು ಸಿಕ್ಕಿದ್ದಾರೆ. ಅದೂ ಕಾರಣ ಆಗಿದೆಯಾ ಅಂತ ಆ ಆಯಾಮದಲ್ಲೂ ತನಿಖೆ ನಡೆಯುತ್ತಿದೆ. ಈಗಾಗಲೇ ಮಂಗಳೂರು ಜಿಲ್ಲೆಯಾದ್ಯಂತ ಸಾಕಷ್ಟು ಬಂದೋಬಸ್ತ್ ಕೈಗೊಳ್ಳಲಾಗಿದ್ದು, ಹೆಚ್ಚುವರಿ ಪೊಲೀಸರ ನಿಯೋಜನೆ ಮಾಡಲಾಗಿದೆ. ಪೊಲೀಸರು ಶೀಘ್ರವೇ ಆರೋಪಿಗಳನ್ನು ಬಂಧಿಸಿ ಅವರ ದಮನ ಮಾಡುತ್ತಾರೆ. ಈ ಘಟನೆ ಸಂಬಂಧ ಜನರಲ್ಲಿ ಆಕ್ರೋಶ ಮನೆ ಮಾಡಿದೆ. ಹೀಗಾಗಿ ಮೂರು ತಾಲೂಕುಗಳಲ್ಲಿ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ಜನರಿಗೆ ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಮನವಿ ಮಾಡಿದ್ದಾರೆ.
ಎರಡು ಕಡೆ ಕಾರ್ಯಾಚರಣೆ:
ಮತ್ತೊಂದೆಡೆ ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರ, ಪಕ್ಷದ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿರುವ ವಿಚಾರವಾಗಿ ಮಾತನಾಡಿದ ಅವರು, ಈ ಮತಾಂಧ ಶಕ್ತಿಗಳು ಒಂದು ರಾಜ್ಯದಲ್ಲಿ ಮಾತ್ರ ಕಾರ್ಯಾಚರಣೆ ಮಾಡುತ್ತಿಲ್ಲ. ಅವರ ಕಾರ್ಯಾಚರಣೆ ಎರಡು ರಾಜ್ಯಗಳಲ್ಲಿ ನಡೆಯುತ್ತಿದೆ. ಗಡಿ ಭಾಗದಲ್ಲಿ ಈ ಕೃತ್ಯಗಳನ್ನು ಮಾಡುತ್ತಿದ್ದಾರೆ. ಕೇರಳ ಸಿಎಂ ಸಹ ಮಾತನಾಡಿದ್ದಾರೆ. ಈ ವಿಚಾರವಾಗಿ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.
ಹತ್ಯೆ ಮಾಡುವುದು, ರಕ್ತ ಹರಿಸುವುದು ಸರಿಯಲ್ಲ : CM ಬೊಮ್ಮಾಯಿ
Previous Articleಮಕ್ಕಳ ಶಾಲಾ ದಾಖಲಾತಿ ವಯಸ್ಸು ಹೆಚ್ಚಿಸಿದ ರಾಜ್ಯ ಸರ್ಕಾರ
Next Article ಯುವಕರ ಪ್ರಚೋದನೆ : ಬಂಧಿತ ಉಗ್ರರು ಬಾಯ್ಬಿಟ್ಟ ಸತ್ಯ