ದಕ್ಷಿಣ ಕನ್ನಡ, ಜು.7- ಬಂಟ್ವಾಳ ತಾಲೂಕಿನ ಪಂಜಿಕಲ್ಲು ಗ್ರಾಮದಲ್ಲಿ ಭಾರೀ ಮಳೆಗೆ ಮನೆ ಮೇಲೆ ಗುಡ್ಡ ಕುಸಿದು ಸಾವನ್ನಪ್ಪಿದವರ ಸಂಖ್ಯೆ ಮೂರಕ್ಕೇರಿದೆ.
ಕೇರಳ ಮೂಲದ ಕೊಟ್ಟಾಂನ ಬಾಬು (46) ಸಂತೋಷ್ ಅಲ್ಫೊನ್ಸಾ(46)ಸೇರಿ ಮೂವರು ಮೃತಪಟ್ಟ ದುರ್ದೈವಿಗಳು. ಹೆನ್ರಿ ಕಾರ್ಲೊ ಎಂಬವರಿಗೆ ಸೇರಿದ ಮನೆಯಾಗಿದೆ. ಕಾರ್ಲೋ ಅವರ ಮನೆಯ ತೋಟದ ಕೆಲಸಕ್ಕೆ ಕೇರಳ ಮೂಲದ ಕಾರ್ಮಿಕರು ಬಂದು ಆ ಮನೆಯಲ್ಲಿ ನೆಲಸಿದ್ದರು.
ನಾಲ್ವರು ಹಲವು ವರ್ಷಗಳಿಂದ ಇವರ ತೋಟದ ಕೆಲಸ ಮಾಡುತ್ತಿದ್ದರು. ಕಾರ್ಲೋ ಅವರ ಮನೆಯ ಹತ್ತಿರದಲ್ಲಿ ಆ ನಾಲ್ವರು ಕಾರ್ಮಿಕರಿಗೆ ಪ್ರತ್ಯೇಕ ಮನೆ ನೀಡಿದ್ದರು. ಆದರೆ ನಿನ್ನೆ ರಾತ್ರಿ ಸುರಿದ ಭಾರಿ ಮಳೆಗೆ ಗುಡ್ಡ ಕುಸಿದು ಮನೆ ಮೇಲೆ ಬಿದ್ದಿತ್ತು. ಈ ಸಂದರ್ಭದಲ್ಲಿ ನಾಲ್ವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆಯೇ ಕೇರಳದ ಪಾಲಕ್ಕಾಡ್ ನಿವಾಸಿ ಬಿಜು(45) ಎಂಬವರು ಮೃತಪಟ್ಟಿದ್ದರು. ಇಂದು ಕೂಡ ಮತ್ತೆ ಇಬ್ಬರು ಸಾವನ್ನಪ್ಪಿದ್ದಾರೆ. ಈ ಮೂಲಕ ಮೃತ ಸಂಖ್ಯೆ 3ಕ್ಕೆ ಏರಿದೆ. ಗುಡ್ಡ ಕುಸಿದಿದ್ದರಿಂದ ಜೆಸಿಬಿ ಬಳಸಿ ಅಗ್ನಿಶಾಮಕ ದಳ ಮತ್ತು ಸ್ಥಳೀಯರು ಮಣ್ಣು ತೆರವು ಮಾಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದಾಗಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಅನೇಕ ಅನಾಹುತಗಳಾಗುತ್ತಿವೆ. ಇಂದು ಕೂಡ ಮಂಗಳೂರು ನಗರ ಹೊರವಲಯದ ಅದ್ಯಪಾಡಿ ಬಳಿ ರಸ್ತೆ ಕುಸಿದಿದೆ.