ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ನೂರು ದಿನ ಪೂರ್ಣಗೊಳಿಸಲು ಸಜ್ಜಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಾಮಾಜಿಕ ನ್ಯಾಯದ ಪರ ಕಳಕಳಿ, ಶೋಷಿತರ ಬಗೆಗಿನ ಮಮತೆ,ತುಳಿತಕ್ಕೊಳಗಾದವರ ಪರವಾದ ಕಳಕಳಿಯ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ.
ಕಾಂಗ್ರೆಸ್ ಪಕ್ಷ ಸಾಮಾಜಿಕ ನ್ಯಾಯ ತಳಹದಿಯ ಮೇಲೆ ರಾಜಕಾರಣ ಮಾಡುವ ಪಕ್ಷ ಅದರಲ್ಲೂ ಸೋಷಿಯಲ್ ಇಂಜಿನಿಯರಿಂಗ್ ಮೂಲಕ ಅವಕಾಶ ವಂಚಿತ ಸಮುದಾಯಗಳಿಗೆ ಸಮಾಜದ ಮುಖ್ಯ ವಾಹಿನಿಗೆ ಪ್ರವೇಶಿಸಲು ಅವಕಾಶ ಕಲ್ಪಿಸುವ ಉದಾತ್ತ ತತ್ವಗಳನ್ನು ಒಳಗೊಂಡಿದೆ. ಇದಕ್ಕೆ ಪ್ರಮುಖ ಪ್ರೇರಣೆ ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು.
ಅರಸು ಅವರ ರಾಜಕೀಯ ತತ್ವಗಳನ್ನು ಮೈಗೂಡಿಸಿಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅಹಿಂದ ಚಳವಳಿ ಮೂಲಕ ರಾಜಕೀಯವಾಗಿ ಹೆಚ್ಚು ಪ್ರವರ್ಧಮಾನಕ್ಕೆ ಬಂದರು. ದಲಿತ, ಹಿಂದುಳಿದ ಅಲ್ಪಸಂಖ್ಯಾತ ಸಮುದಾಯಗಳು ಸಿದ್ದರಾಮಯ್ಯ ಅವರನ್ನು ತಮ್ಮ ನಾಯಕ ಎಂದು ಗೌರವಿಸಿ,ಪ್ರೀತಿಸಿ ಆರಾಧಿಸುತ್ತವೆ.ಇದಕ್ಕೆ ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವವೇ ಸಾಕ್ಷಿ.
ಇನ್ನೂ ಇವರ ಬೆಂಬಲಿಗರಂತೂ ಅಂದು ಅರಸು,ಇಂದು ಸಿದ್ದರಾಮಯ್ಯ ಎಂದೇ ಬಣ್ಣಿಸುತ್ತಿದ್ದಾರೆ. ಸಹಜವಾಗಿ ಇಂತಹ ಸಿದ್ದರಾಮಯ್ಯ ಅವರಿಂದ ಈ ವರ್ಗದ ಜನರು ಸಾಮಾಜಿಕ ನ್ಯಾಯದ ನಿರೀಕ್ಷೆ ಇಟ್ಟುಕೊಂಡಿದ್ದರು.
ಅದರಲ್ಲೂ ಜಾತಿ ಆಧಾರಿತ Election ವ್ಯವಸ್ಥೆಯಲ್ಲಿ ಮೀಸಲಾತಿ ಕ್ಷೇತ್ರ ಹೊರತುಪಡಿಸಿ ಇತರೆ ಕ್ಷೇತ್ರಗಳಲ್ಲಿ ನೇರ ಚುನಾವಣೆ ಎದುರಿಸಿ ಶಾಸನ ಸಭೆಗೆ ಆಯ್ಕೆಯಾಗಲು ಸಾಧ್ಯವಿಲ್ಲದ ಕುಂಬಾರ, ಕಮ್ಮಾರ,ತಿಗಳ,ವಿಶ್ವಕರ್ಮ, ಸವಿತಾ,ಮಡಿವಾಳ, ಕೊರಚ,ಹೆಳವ,ದಕ್ಕಲಿಗ ಮೊದಲಾದ ಸಮುದಾಯಗಳಿಗೆ ವಿಧಾನಪರಿಷತ್ ಸದಸ್ಯರಾಗಿ ನಾಮಕರಣ,ಸರ್ಕಾರದ ವಿವಿಧ ನಿಗಮ,ಮಂಡಳಿಗಳಲ್ಲಿ ನೇಮಕದ ನಿರೀಕ್ಷೆ ಇಟ್ಟುಕೊಂಡಿದ್ದವು.
ಬದಲಾದ ಪರಿಸ್ಥಿತಿಯಲ್ಲಿ ಬಿಜೆಪಿಯಂತಹ ಬಲ ಪಂಥೀಯ ಧೋರಣೆಯುಳ್ಳ ಪಕ್ಷ ಕಾಂಗ್ರೆಸ್ ನಂತೆ ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಿ ಸಿದ್ದಿ ಜನಾಂಗಕ್ಕೆ ಸೇರಿದ ಶಾಂತಾರಾಮ ಸಿದ್ದಿ ಅವರಿಗೆ ಪರಿಷತ್ ಸದಸ್ಯತ್ವ, ಮಂಜಮ್ಮ ಜೋಗತಿ ಅವರಂತ ಲಿಂಗತ್ವ ಅಲ್ಪಸಂಖ್ಯಾತ ದಲಿತರಿಗೆ ಅಕಾಡೆಮಿ ಅಧ್ಯಕ್ಷತೆಯ ಅವಕಾಶ ನೀಡಿದಾಗ ಹುಟ್ಟಿದಾರಭ್ಯ ಸಾಮಾಜಿಕ ನ್ಯಾಯದ ಮಂತ್ರ ಜಪಿಸುವ ಕಾಂಗ್ರೆಸ್ ಪಕ್ಷದಿಂದ ಇನ್ನೂ ಹೆಚ್ಚಿನ ಅವಕಾಶ ನಿರೀಕ್ಷಿಸಿದ್ದು ತಪ್ಪಲ್ಲ.ಅದರಲ್ಲೂ ಸಿದ್ದರಾಮಯ್ಯ ಅವರಂತಹವರು ಮುಖ್ಯಮಂತ್ರಿಯಾಗಿದ್ದಾಗ ಇವರು ಮತ್ತಷ್ಟು ವಿಶ್ವಾಸದಿಂದ ಬೀಗಿದ್ದು ಸಹಜವಾಗಿಯೇ ಇತ್ತು. ಆದರೆ, ಈಗ ವಿಧಾನ ಪರಿಷತ್ ನಾಮಕರಣ ಸದಸ್ಯರಾದ ಪಿ.ಆರ್. ರಮೇಶ್ ,ಮೋಹನ್ ಕೊಂಡಜ್ಜಿ ಮತ್ತು ಸಿ.ಎಂ. ಲಿಂಗಪ್ಪ ಅವರ ನಿವೃತ್ತಿಯಿಂದ ತೆರವಾದ ಮೂರು ಸ್ಥಾನಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಕ್ಷದ ಹಲವು ನಾಯಕರು ಮತ್ತು ಹೈಕಮಾಂಡ್ ಜೊತೆಗೆ ಸತತ ಸಮಾಲೋಚನೆ ಬಳಿಕ ಕೈಗೊಂಡ ನಿರ್ಧಾರ ಅವಕಾಶ ವಂಚಿತ ಸಮುದಾಯಗಳಷ್ಟೇ ಅಲ್ಲ ಕಾಂಗ್ರೆಸ್ ನ ಹಲವು ನಾಯಕರಿಗೆ ಅಚ್ಚರಿ ಹಾಗೂ ಬೇಸರ ಮೂಡಿಸಿದೆ.
ಇದಕ್ಕೆ ಕಾರಣ ನಾಮಕರಣ ಮಾಡುವಂತೆ ರಾಜ್ಯಪಾಲರಿಗೆ ರವಾನೆಯಾದ ಪಟ್ಟಿ.
ನಿವೃತ್ತ ಐಆರ್ ಎಸ್ ಅಧಿಕಾರಿ ಸುಧಾಂ ದಾಸ್, ಮಾಜಿ ಮಂತ್ರಿ ಎಂ.ಆರ್.ಸೀತಾರಾಂ,ಮಾಜಿ ಮಂತ್ರಿ ಹಾಗೂ ಚಿತ್ರನಟಿ ಉಮಾಶ್ರೀ, ಅವರ ಹೆಸರುಗಳನ್ನು ಅಂತಿಮ ಗೊಳಿಸಿ ಇದಕ್ಕೆ ಅನುಮೋದನೆ ನೀಡುವಂತೆ ಕೋರಿ ರಾಜ್ಯಪಾಲರಿಗೆ ಪಟ್ಟಿ ರವಾನಿಸಿದ್ದಾರೆ ನಾಮಕರಣ ಸ್ಥಾನಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸುತ್ತಿದ್ದಂತೆ ಹಲವಾರು ಮಂದಿ ಆಕಾಂಕ್ಷಿಗಳು ಇದಕ್ಕಾಗಿ ಪ್ರಬಲ ಲಾಭಿ ನಡೆಸಿದ್ದರು. ಈ ವೇಳೆ ಸರ್ಕಾರ ಸಾಮಾಜಿಕ ನ್ಯಾಯದ ಮುಂದಿಟ್ಟಿದ್ದು ಅವಕಾಶ ವಂಚಿತ ಹಾಗೂ ನೇರ ಚುನಾವಣೆಯಲ್ಲಿ ಇದೆಲ್ಲಾ ಸಾಧ್ಯವಿಲ್ಲದ ಅತಿ ಹಿಂದುಳಿದ ಮತ್ತು ದಲಿತ ಹಾಗೂ ಇತರೆ ಸಮುದಾಯಗಳಿಗೆ ಪ್ರಾತಿನಿಧ್ಯ ನೀಡಲಾಗುವುದು ಎಂದು ಹೇಳಿ ಆಕಾಂಕ್ಷಿಗಳ ಬಾಯಿಯ ಮುಚ್ಚಿಸಲಾಗಿತ್ತು ಇದಕ್ಕೆ ಪೂರಕವೆಂಬಂತೆ ಈ ಹುದ್ದೆಯಿಂದ ನಿವೃತ್ತಿಯಾದ ಮೋಹನ್ ಕೊಂಡಜ್ಜಿ ಅವರು ಮತ್ತೊಂದು ಅವಧಿಗೆ ನನ್ನ ಹೆಸರು ಪರಿಗಣಿಸುವುದು ಬೇಡ.ನನ್ನಂತೆ ಎಷ್ಟೋ ಮಂದಿ ಕಾಂಗ್ರೆಸ್ ಕಾರ್ಯಕರ್ತರು ಇಂತಹ ಒಂದು ಅವಕಾಶಕ್ಕೆ ಕಾಯುತ್ತಾ ಕುಳಿತಿದ್ದಾರೆ.ಅವರ ಬಹುತೇಕ ವಯಸ್ಸು ಕಾಂಗ್ರೆಸ್ ಪಕ್ಷದಲ್ಲೇ ಕಳೆದು ಹೋಗಿದೆ.ಇಂತಹ ಅವಕಾಶ ವಂಚಿತ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರಿಗೆ ಈ ಅವಕಾಶ ಸಿಗಬೇಕು ಎಂದು ಹೇಳಿದ್ದರು.
ಕಾರಣವಿಷ್ಟೇ ಯುವ ಕಾಂಗ್ರೆಸ್ ಮುಖಂಡರಾಗಿ ಕಾಂಗ್ರೆಸ್ ಪಕ್ಷದಲ್ಲಿ ವಿವಿಧ ಹುದ್ದೆಗಳನ್ನು ನಿಭಾಯಿಸಿದ ಕೊಂಡಜ್ಜಿ ಮೋಹನ್ ಅವರಿಗೆ ಎಲ್ಲಾ ಅರ್ಹತೆಗಳಿದ್ದರೂ ದಾವಣಗೆರೆ ರಾಜಕಾರಣದಿಂದಾಗಿ ಚುನಾವಣೆ ಸ್ಪರ್ಧಿಸಲು ಅವಕಾಶ ಸಿಗಲಿಲ್ಲ. ವಿಧಾನಪರಿಷತ್ ಸದಸ್ಯರಾಗುವ ಅವಕಾಶ ಹಲವು ಬಾರಿ ಒದಗಿದರೂ ರಾಜಕೀಯ ಒಳಸುಳಿಗೆ ಸಿಲುಕಿ ಅವಕಾಶ ವಂಚಿತರಾಗಬೇಕಾಯಿತು.ಈ ನೋವಿನ ಅನುಭವವಿದ್ದ ಕೊಂಡಜ್ಜಿ ಸಹಜವಾಗಿ ತನ್ನಂತಹ ಅರ್ಹ ಅವಕಾಶ ವಂಚಿತರಿಗೆ ಅವಕಾಶ ಲಭಿಸಬೇಕು ಎಂಬ ಉದಾತ್ತ ಮನೋಭಾವ ಪ್ರದರ್ಶಿಸಿದರು. ಆದರೆ ನೇಮಕಾತಿ ಸಮಯದಲ್ಲಿ ಇದಕ್ಕೆ ಅವಕಾಶ ಸಿಗಲೇ ಇಲ್ಲ.
ಸುಧಾಂದಾಸ್ ಯಾರು?
ಈಗ ನಾಮಕರಣಕ್ಕೆ ಶಿಫಾರಸುಗೊಂಡಿರುವ ಹೆಸರುಗಳ ಕಡೆ ಗಮನಹರಿಸುವುದಾದರೆ ಸುಧಾಂದಾಸ್ ಅವರು ಕೇಂದ್ರ ಸರ್ಕಾರದ ಐ ಆರ್ ಎಸ್ ಅಧಿಕಾರಿ. ದಲಿತ ಎಡಗೈ ಸಮುದಾಯಕ್ಕೆ ಸೇರಿರುವ ಈ ಅಧಿಕಾರಿ ಸೇವೆಯಿಂದ ನಿವೃತ್ತಿಯಾಗುತ್ತಿದ್ದಂತೆ ರಾಜ್ಯ ಮಾಹಿತಿ ಹಕ್ಕು ಆಯೋಗದ ಸದಸ್ಯರಾಗಿ ನೇಮಕಗೊಳ್ಳುತ್ತಾರೆ ಈ ಮೂಲಕ ಅಂದಿನ ಸರ್ಕಾರ ಇವರನ್ನು ದಲಿತ ಸಮುದಾಯಕ್ಕೆ ಪ್ರಾತಿನಿಧ್ಯದ ಹೆಸರಲ್ಲಿ ಅವಕಾಶ ಕಲ್ಪಿಸುತ್ತದೆ.
ಮಾಹಿತಿ ಹಕ್ಕು ಆಯೋಗದ ಅಧಿಕಾರ ಅನುಭವಿಸಿ ನಿವೃತ್ತಿಯಾದ ಸುಧಾಮದಾಸ್ ಅವರನ್ನು ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿಯ ಸಹ ಅಧ್ಯಕ್ಷರಾಗಿ ನೇಮಕ ಮಾಡಲಾಗುತ್ತದೆ ಎಂ.ಬಿ. ಪಾಟೀಲ್ ಅವರೊಂದಿಗೆ ಕೂಡಿ ವಿಧಾನಸಭೆ ಚುನಾವಣೆಗೆ ಪಕ್ಷದ ಪ್ರಚಾರ ತಂತ್ರ ಹೆಣೆಯುವ ಜವಾಬ್ದಾರಿ ನೀಡಲಾಗುತ್ತದೆ.
ಆದರೆ ,ಅಧಿಕಾರವಹಿಸಿಕೊಂಡ ಸುಧಾಂದಾಸ್ ಈ ಬಗ್ಗೆ ಸುದ್ದಿ ಮಾಡಿದ್ದನ್ನು ಬಿಟ್ಟರೆ ಪ್ರಚಾರ ಸಮಿತಿಯ ಯಾವುದೇ ಒಂದು ಸಭೆಯನ್ನು ನಡೆಸಿದ ಉದಾಹರಣೆ ಇಲ್ಲ. ಮೂರು ತಿಂಗಳ ಅವಧಿಗೆ ಪ್ರಚಾರ ಸಮಿತಿಯ ಸಹ ಅಧ್ಯಕ್ಷರಾಗಿದ್ದ ಇವರ ಸೇವೆಯನ್ನು ಪರಿಗಣಿಸಿ ಇದೀಗ ಎಡಗೈ ಸಮುದಾಯಕ್ಕೆ ಪ್ರಾತಿನಿಧ್ಯದ ಹೆಸರಲ್ಲಿ ವಿಧಾನಪರಿಷತ್ ನಾಮಕರಣ ಮಾಡಲಾಗುತ್ತಿದೆ.
ಯಾವಾಗ ವಿಧಾನ ಪರಿಷತ್ ಸದಸ್ಯತ್ವಕ್ಕೆ ಇವರ ಹೆಸರು ಕೇಳಿ ಬಂತೋ ಆ ಕ್ಷಣವೇ ಸಚಿವರಾದ ಕೆಎಚ್ ಮುನಿಯಪ್ಪ, ಆರ್ ಬಿ ತಿಮ್ಮಾಪುರ ನೇತೃತ್ವದಲ್ಲಿ ಈ ಸಮುದಾಯಕ್ಕೆ ಸೇರಿದ ಮಾಜಿ ಸಚಿವ ಆಂಜನೇಯ, ಮಾಜಿ ಸಂಸದ ಚಂದ್ರಪ್ಪ ಸೇರಿದಂತೆ ಹಲವು ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಸುಧಾಂ ದಾಸ್ ಅವರ ನೇಮಕಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು.
ಸಮುದಾಯಕ್ಕೆ ಸೇರಿದ ಹಲವಾರು ಮಂದಿ ಹಿರಿಯ ಕಾಂಗ್ರೆಸ್ ಕಾರ್ಯಕರ್ತರು ಈ ಅವಕಾಶಕ್ಕಾಗಿ ಕಾಯುತ್ತಿದ್ದಾರೆ ಅವರನ್ನು ಪರಿಗಣನೆಗೆ ತೆಗೆದುಕೊಳ್ಳದೆ ಸಮುದಾಯಕ್ಕೆ ಆಗಲಿ ಪಕ್ಷಕ್ಕಾಗಲಿ ಯಾವುದೇ ಕೊಡುಗೆ ನೀಡದ ಸುಧಾಂ ದಾಸ್ ಅವರನ್ನು ಈ ಹುದ್ದೆಗೆ ನೇಮಕ ಮಾಡಬಾರದು ಎಂದು ಆಗ್ರಹಿಸಿದರು ಅಷ್ಟೇ ಅಲ್ಲ ಈ ಸಂಬಂಧ ಅಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹೈಕಮಾಂಡ್ ನ ಹಲವು ನಾಯಕರಿಗೆ ಮನವಿ ಸಲ್ಲಿಸಿದರು.
ಈ ಪ್ರತಿರೋಧಕ್ಕೆ ಬೆಚ್ಚಿದ ನಾಯಕರು ಕೆಲಕಾಲ ನಾಮಕರಣ ಪ್ರಸ್ತಾಪಕ್ಕೆ ತಡೆ ನೀಡಿದರು.ಆದರೆ, ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಡೆಸಿದ ತಂತ್ರಗಾರಿಕೆ ಯಶಸ್ವಿಯಾಗಿ ಸುಧಾಂದಾಸ್ ಅವರ ಹೆಸರು ಅಂತಿಮಗೊಂಡಿದೆ. ಇಲ್ಲಿರುವ ಪ್ರಶ್ನೆ ಉನ್ನತ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿಯಾದ ಬೆನ್ನಲ್ಲೇ ಮಾಹಿತಿ ಆಯೋಗದ ಉನ್ನತ ಹುದ್ದೆ ಅನುಭವಿಸಿದ ಸುಧಾಂ ದಾಸ್ ಬಿಟ್ಟರೆ ಈ ಸಮುದಾಯಕ್ಕೆ ಸೇರಿದ ಬೇರೆ ಯಾವುದೇ ನಾಯಕರು ಕಾಂಗ್ರೆಸ್ ನಲ್ಲಿ ಇಲ್ಲವೇ ಎನ್ನುವುದಾಗಿದೆ.
ಇನ್ನು ಈ ಮೊದಲು ಎರಡನೇ ಅಭ್ಯರ್ಥಿಯಾಗಿ ಹಿರಿಯ ರಾಜಕಾರಣಿ ಕೆ ರಹಮಾನ್ ಖಾನ್ ಅವರ ಪುತ್ರ ಮನ್ಸೂರ್ ಅಲಿ ಖಾನ್ ಅವರ ಹೆಸರು ಪರಿಗಣಿಸಲು ಹೈಕಮಾಂಡ್ ಸೂಚನೆ ನೀಡಿತ್ತು. ಈ ಪ್ರಸ್ತಾಪಕ್ಕೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರೋಧ ವ್ಯಕ್ತಪಡಿಸಿದ್ದರು ಮನ್ಸೂರ್ ಅಲಿ ಖಾನ್ ಅವರಿಗೆ ವಿಧಾನ ಪರಿಷತ್ ಬದಲಾಗಿ ಬೇರೆ ಹುದ್ದೆ ನೀಡುವ ಭರವಸೆ ನೀಡಿದ್ದರು.
ಆದರೆ, ಮನ್ಸೂರ್ ಅಲಿಖಾನ್ ಪಕ್ಷದ ವಿವಿಧ ಹುದ್ದೆಗಳನ್ನು ನಿಭಾಯಿಸಿರುವ ತಮಗೆ ಸದ್ಯಕ್ಕೆ ಪರಿಷತ್ ಸದಸ್ಯತ್ವ ಸಾಕು ಎಂದು ಹೇಳಿದ್ದರು. ಇದರ ನಡುವೆ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಹಲವರು ಮನ್ಸೂರ್ ಅವರ ಆಯ್ಕೆಗೆ ವಿರೋಧ ವ್ಯಕ್ತಪಡಿಸಿದರು ಇವರ ತಂದೆ ರಹಮಾನ್ ಖಾನ್ ಅವರಿಗೆ ಪಕ್ಷ ಹಲವು ಬಾರಿ ಅವಕಾಶ ನೀಡಿದೆ ಹೀಗಾಗಿ ಮತ್ತೆ ಇದೇ ಕುಟುಂಬಕ್ಕೆ ಅವಕಾಶ ನೀಡುವುದು ಬೇಡ ಇದರ ಬದಲಿಗೆ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಹಲವಾರು ಮಂದಿ ಅರ್ಹರು ಕಾಂಗ್ರೆಸ್ ಪಕ್ಷದಲ್ಲಿ ಇದ್ದಾರೆ ಅವರಿಗೆ ಅವಕಾಶ ನೀಡಿದರೆ ಅಲ್ಪಸಂಖ್ಯಾತ ಸಮುದಾಯದ ನಾಯಕತ್ವ ಬೆಳೆಯಲಿದೆ ಎಂಬ ವಾದ ಮಂಡಿಸಿದ್ದರು ಇದನ್ನು ಆಧಾರವಾಗಿಟ್ಟುಕೊಂಡ ಶಿವಕುಮಾರ್ ಅವರು ಮನ್ಸೂರ್ ಅಲಿಖಾನ್ ಅವರನ್ನು ಯಾವುದೇ ಕಾರಣಕ್ಕೂ ಈ ಹುದ್ದೆಗೆ ಪರಿಗಣಿಸುವುದು ಬೇಡ ಎಂದು ಹೈಕಮಾಂಡ್ ಮತ್ತು ಮುಖ್ಯಮಂತ್ರಿ ಅವರ ಮೇಲೆ ಒತ್ತಡ ಹೇರಿ ಅವರ ಹೆಸರು ಕೈಬಿಡುವಂತೆ ಮಾಡುವಲ್ಲಿ ಯಶಸ್ವಿಯಾದರು.
ಮನ್ಸೂರ್ ಅವರ ಬದಲಿಗೆ ಸಿನಿಮಾ ನಟಿಯೂ ಆಗಿರುವ ಮಾಜಿ ಸಚಿವೆ ಉಮಾಶ್ರೀ ಅವರ ಹೆಸರನ್ನು ಪರಿಗಣಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಧರಿಸಿದರು. ಇದಕ್ಕೆ ಅಲ್ಪಸಂಖ್ಯಾತ ಸಮುದಾಯದ ಹಲವು ಮುಖಂಡರು ವಿರೋಧ ವ್ಯಕ್ತಪಡಿಸಿ ಮನ್ಸೂರ್ ಬದಲಿಗೆ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಬೇರೆಯವರಿಗೆ ಅವಕಾಶ ನೀಡುವಂತೆ ಮನವಿ ಮಾಡಿದರು.
ಆದರೆ ಉಮಾಶ್ರೀ ಅವರು ಪ್ರತಿನಿಧಿಸುವ ನೇಕಾರ ಸಮುದಾಯ ಮತ್ತು ಚಿತ್ರರಂಗಕ್ಕೆ ಪ್ರಾತಿನಿತ್ಯ ಸಿಕ್ಕಿಲ್ಲ ಹೀಗಾಗಿ ಅವಕಾಶ ಕಲ್ಪಿಸಲೇಬೇಕು ಎಂದು ಮುಖ್ಯಮಂತ್ರಿಗಳು ವಾದ ಮಂಡಿಸಿದ್ದಾರೆ ಆದರೆ ಇಲ್ಲಿರುವ ಪ್ರಶ್ನೆ ಸಿನಿಮಾ ರಂಗ ಎಂಬುವುದಾದರೆ ಇದೆ ವರ್ಗಕ್ಕೆ ಸೇರಿದ ರಾಜೇಂದ್ರ ಸಿಂಗ್ ಬಾಬು, ಸಾಧು ಕೋಕಿಲ, ಬಿರಾದಾರ್, ಭವ್ಯ, ಅಂಜಲಿ, ವಿಜಯಲಕ್ಷ್ಮಿ ಸಿಂಗ್ ಜೈ ಜಗದೀಶ್, ಸೇರಿದಂತೆ ಅನೇಕ ಮಂದಿ ಹಿರಿಯರು ಅವಕಾಶಕ್ಕಾಗಿ ಕಾಯುತ್ತಿದ್ದಾರೆ.
ಇನ್ನು ದೇವಾಂಗ ಅಥವಾ ನೇಕಾರ ಸಮುದಾಯಕ್ಕೆ ಸೇರಿದ ಹಲವಾರು ಮಂದಿ ಇಂತಹ ಒಂದು ಹುದ್ದೆಯ ನಿರೀಕ್ಷೆಯಲ್ಲಿದ್ದಾರೆ ಉಮಾಶ್ರೀ ಅವರು ಕೂಡ ಅರ್ಹರೆ ಆದರೆ ಈಗಾಗಲೇ ಉಮಾಶ್ರೀ ಅವರನ್ನು ವಿಧಾನ ಪರಿಷತ್ ಗೆ ನೇಮಕ ಮಾಡಲಾಗಿತ್ತು ಆನಂತರ ವಿಧಾನಸಭೆಗೆ ಸ್ಪರ್ಧಿಸಲು ಅವಕಾಶ ನೀಡಲಾಗಿತ್ತು. ಶಾಸಕರಾಗಿ ಆಯ್ಕೆಯಾಗಿದ್ದ ಅವರನ್ನು ಮಂತ್ರಿಯಾಗಿಯೂ ಸೇವೆ ಸಲ್ಲಿಸಲು ಅವಕಾಶ ನೀಡಲಾಗಿತ್ತು ಹೀಗಾಗಿ ಪದೇಪದೇ ಅವಕಾಶ ನೀಡಿದವರಿಗೆ ಎಷ್ಟು ಬಾರಿ ಅವಕಾಶ ನೀಡುವುದು ಎನ್ನುವ ಪ್ರಶ್ನೆ ಇಲ್ಲಿ ಮೂಡುತ್ತದೆ.
ಇದೇ ರೀತಿಯಲ್ಲಿ ಮಾಜಿ ಮಂತ್ರಿ ಉದ್ಯಮಿ ಎಂಆರ್ ಸೀತಾರಾಮ್ ಅವರನ್ನು ಪರಿಷತ್ ಸದಸ್ಯರನ್ನಾಗಿ ನಾಮಕರಣ ಮಾಡಲು ಶಿಫಾರಸು ಮಾಡಲಾಗಿದೆ ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡ ಬಲಿಜ ಸಮುದಾಯದ ನಾಯಕ ಎಂಬ ಕಾರಣಕ್ಕೆ ಇವರನ್ನು ಪರಿಗಣಿಸಲಾಗಿದೆ.
ಎರಡು ಬಾರಿ ವಿಧಾನಸಭೆಗೆ ಆಯ್ಕೆಯಾಗಿ ಒಮ್ಮೆ ಸೋಲು ಅನುಭವಿಸಿದ ಇವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ನೇಮಕ ಮಾಡಿ ಮಂತ್ರಿಯಾಗಿ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿತ್ತು. ಎರಡನೇ ಬಾರಿ ಇವರಿಗೆ ಪರಿಷತ್ ಸದಸ್ಯತ್ವ ನೀಡಲು ಮುಂದಾದಾಗ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಪ್ರಬಲ ವಿರೋಧ ವ್ಯಕ್ತಪಡಿಸಿದ್ದರು ಹೀಗಾಗಿ ಒಂದು ಅವರಿಗೆ ಅವಕಾಶ ತಪ್ಪಿ ಹೋಗಿತ್ತು. ಇದೀಗ ಅವಕಾಶ ವಂಚಿತ ಬಲಿಜ ಸಮುದಾಯಕ್ಕೆ ಪ್ರಾತಿನಿಧ್ಯದ ಹೆಸರಲ್ಲಿ ಸೀತಾರಾಮ್ ಅವರ ಹೆಸರನ್ನು ಪರಿಗಣಿಸಲಾಗಿದೆ.
ಬಲಿಜ ಸಮುದಾಯಕ್ಕೆ ಪ್ರತಿನಿತ್ಯ ಎನ್ನುವುದಾದರೆ ಈ ಸಮುದಾಯಕ್ಕೆ ಸೇರಿದ ಹಲವಾರು ಮಂದಿ ಕಾಂಗ್ರೆಸ್ ಕಾರ್ಯಕರ್ತರು ಅವಕಾಶಕ್ಕೆ ಕಾದು ಕುಳಿತಿದ್ದಾರೆ ಪಕ್ಷದ ಪ್ರಬಲ ವೋಟ್ ಬ್ಯಾಂಕ್ ಎಂದು ಪರಿಗಣಿಸಲ್ಪಟ್ಟ ಈ ಸಮುದಾಯಕ್ಕೆ ಸಿಗಬೇಕಾದ ಅವಕಾಶವನ್ನು ಒಂದೇ ಕುಟುಂಬಕ್ಕೆ ಸೇರಿದವರಿಗೆ ಪದೇ ಪದೇ ನೀಡುವುದು ಎಷ್ಟರಮಟ್ಟಿಗೆ ಸರಿ ಎಂಬ ಪ್ರಶ್ನೆಗಳು ಕೇಳಿ ಬರುತ್ತಿವೆ.
ಒಟ್ಟಾರೆಯಾಗಿ ಇಡೀ ಪ್ರಹಸನವನ್ನು ಗಮನಿಸಿದಾಗ ಸಾಮಾಜಿಕ ನ್ಯಾಯ ಮತ್ತು ಅವಕಾಶ ವಂಚಿತರಿಗೆ ಪ್ರಾತಿನಿಧ್ಯ ಎನ್ನುವುದು ಸಿಕ್ಕವರಿಗೆ ಸೀರುಂಡೆ ಎಂಬಂತಾಗಿದೆ.
ಇನ್ನು ಮೇಲ್ಮನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ವಿಧಾನ ಪರಿಷತ್ ಎನ್ನುವುದು ಉಳ್ಳವರ ಆಲಯ ಎಂಬಂತೆ ಪರಿವರ್ತನೆಯಾಗಿದೆ ಇಲ್ಲಿ ಸಾಮಾಜಿಕ ನ್ಯಾಯ ಮೀಸಲಾತಿ ಎಂಬ ಯಾವುದೇ ಪರಿಕಲ್ಪನೆಗೆ ಅವಕಾಶವೇ ಇಲ್ಲ ಹಣಬಲ ಮತ್ತು ಪ್ರಬಲ ಲಾಭಿ ಇದ್ದ ಯಾರೂ ಬೇಕಾದರೂ ಪರಿಷತ್ ಸದಸ್ಯರಾಗಬಹುದು ಎಂಬ ವಾತಾವರಣ ಸೃಷ್ಟಿಯಾಗಿದೆ ಇಂತಹ ಸ್ಥಿತಿ ಬದಲಾವಣೆ ಆಗುವ ಕಾಲ ಯಾವಾಗ ಬರಲಿದೆ ಎಂಬುದನ್ನು ಕಾದು ನೋಡಬೇಕು.
2 Comments
нарколог вывод из запоя http://vyvod-iz-zapoya-v-sankt-peterburge.ru/ .
снять ломку наркомана снять ломку наркомана .