ನವದೆಹಲಿ, ಸೆ.27 – ಖಾಲಿಸ್ತಾನಿ ಪ್ರತ್ಯೇಕತಾವಾದಿಗಳು ಮತ್ತು ದರೋಡೆಕೋರರ ನಡುವಿನ ಸಂಬಂಧದಲ್ಲಿ ಭಾಗಿಯಾಗಿರುವ ಖದೀಮರನ್ನು ಗುರಿಯಾಗಿಸಿಕೊಂಡು ರಾಷ್ಟ್ರೀಯ ತನಿಖಾ ದಳ (ಎನ್ಐಎ)ದ ಅಧಿಕಾರಿಗಳು ಆರು ರಾಜ್ಯಗಳ 50 ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ.
ಖಲಿಸ್ತಾನ್ ಉಗ್ರರೊಂದಿಗೆ ಸಂಪರ್ಕ ಹೊಂದಿರುವ ಹವಾಲಾ ಆಪರೇಟರ್ಗಳು, ದರೋಡೆಕೋರರು, ಮತ್ತಿತರ ಸಂಘಟಿತ ಅಪರಾಧ ಜಾಲಗಳಲ್ಲಿ ಸಕ್ರಿಯರಾದವರನ್ನು ಬಂಧಿಸಲು ಎನ್ಐಎ ಅಧಿಕಾರಿಗಳು ದಾಳಿಗಳು ನಡೆಸಿ ಮಾಹಿತಿಯನ್ನು ಕಲೆಹಾಕಿದ್ದಾರೆ.
ಪಂಜಾಬ್ನಲ್ಲಿ 30, ರಾಜಸ್ಥಾನದಲ್ಲಿ 13, ಹರಿಯಾಣದಲ್ಲಿ 4, ಉತ್ತರಾಖಂಡದಲ್ಲಿ 2 ಮತ್ತು ದೆಹಲಿ ಮತ್ತು ಉತ್ತರ ಪ್ರದೇಶದಲ್ಲಿ ತಲಾ 1 ಸ್ಥಳಗಳಲ್ಲಿ ದಾಳಿ ನಡೆದಿದೆ.
ಭಾರತದಿಂದ ಪರಾರಿಯಾಗಿ ಬ್ರಿಟನ್, ಅಮೆರಿಕ, ಕೆನಡಾ, ದುಬೈ, ಪಾಕಿಸ್ತಾನ ಮತ್ತು ಇತರ ದೇಶಗಳಲ್ಲಿ ನೆಲೆಸಿರುವ 19 ಖಲಿಸ್ತಾನಿ ಭಯೋತ್ಪಾದಕರ ಪಟ್ಟಿಯನ್ನು ಈ ಹಿಂದೆ ಬಿಡುಗಡೆ ಮಾಡಿದ್ದು, ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಸಾಧ್ಯತೆಯಿದೆ.
ನಿಷೇಧಿತ ಖಲಿಸ್ತಾನಿ ಪರವಾದ ಸಿಖ್ಸ್ ಫಾರ್ ಜಸ್ಟಿಸ್ ನ ಸದಸ್ಯ, ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನುನ್ ಎಂಬಾತನ ಆಸ್ತಿಯನ್ನು ಎನ್ಐಎ ಮುಟ್ಟುಗೋಲು ಹಾಕಿಕೊಂಡ ಒಂದು ದಿನದ ನಂತರ ಈ ಕ್ರಮ ಬಂದಿದೆ.
ಪರಾರಿಯಾದ ಈ 19 ಮಂದಿಯ ವಿರುದ್ಧ ಭಯೋತ್ಪಾದನಾ ವಿರೋಧಿ ಕಾನೂನು (ಯುಎಪಿಎ) ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು. ಇವರು ವಿದೇಶದಲ್ಲಿದ್ದುಕೊಂಡು ಭಾರತ ವಿರೋಧಿ ಪ್ರಚಾರ ನಡೆಸುತ್ತಿದ್ದಾರೆ.
10 ಲಕ್ಷ ಬಹುಮಾನ:
ಘೊಷಿತ ಭಯೋತ್ಪಾದಕ ಹರ್ವಿಂದರ್ ಸಿಂಗ್ ಸಂಧು ಅಲಿಯಾಸ್ ರಿಂಡಾ ಮತ್ತು ಲಖ್ಬೀರ್ ಸಿಂಗ್ ಸಂಧು ಅಲಿಯಾಸ್ ಲಾಂಡಾ ಅವರನ್ನು ಬಂಧಿಸಲು ಸಹಾಯ ಮಾಡುವವರಿಗೆ ತಲಾ 10 ಲಕ್ಷ ರೂಪಾಯಿ ಬಹುಮಾನವನ್ನು ಎನ್ಐಎ ಘೋಷಿಸಿದೆ. ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಉತ್ತೇಜಿಸಿದ ಆರೋಪದ ಮೇಲೆ ನಿಷೇಧಿತ ಸಂಘಟನೆಯಾದ ಬಬ್ಬರ್ ಖಾಲ್ಸಾ ಇಂಟರ್ನ್ಯಾಶನಲ್ (ಬಿಕೆಐ) ನೊಂದಿಗೆ ಇವರಿಗೆ ಸಂಬಂಧವಿದೆ.
ಖಲಿಸ್ತಾನ್ ಪರ ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆಯನ್ನು ತೀವ್ರಗೊಳಿಸಿರುವ ಎನ್ಐಎ ಬುಧವಾರ ಬಿಕೆಐನ ಮೂವರು ಸಹಚರರಾದ ಫಿರೋಜ್ಪುರದ ಪರ್ಮಿಂದರ್ ಸಿಂಗ್ ಕೈರಾ, ಪಂಜಾಬ್ನ ತರ್ನ್ ತರನ್ನ ಸತ್ನಾಮ್ ಸಿಂಗ್ ಮತ್ತು ಯದ್ವಿಂದರ್ ಸಿಂಗ್ ಅವರ ತಲೆಗೆ 5 ಲಕ್ಷ ರೂಪಾಯಿ ನಗದು ಬಹುಮಾನವನ್ನು ಘೋಷಿಸಿದೆ.
ಎನ್ ಐಎ ಪ್ರಕಾರ, ಭಾರತದ ಶಾಂತಿ ಮತ್ತು ಕೋಮು ಸೌಹಾರ್ದವನ್ನು ಕದಡುವ ಮತ್ತು ಪಂಜಾಬ್ನಲ್ಲಿ ಭಯೋತ್ಪಾದನೆಯನ್ನು ಹರಡುವ ಗುರಿಯನ್ನು ಹೊಂದಿರುವ ಬಿಕೆಐನ ಭಯೋತ್ಪಾದಕ ಚಟುವಟಿಕೆಗಳಿಗೆ ಸಂಬಂಧಿಸಿ ಈ ವರ್ಷದ ಆರಂಭದಲ್ಲಿ ದಾಖಲಾದ ಪ್ರಕರಣದಲ್ಲಿ ಮತ್ತು ಇತರ ನಾಲ್ವರು ಬೇಕಾಗಿದ್ದಾರೆ.

