ಬೆಂಗಳೂರು, ಜ.6- ಹೈಕಮಾಂಡ್ ಮಧ್ಯಪ್ರವೇಶದೊಂದಿಗೆ ಕೊಂಚ ಮಟ್ಟಿಗೆ ಮೆತ್ತಗಾದವರಂತೆ ಕಂಡು ಬಂದಿದ್ದ ಮಾಜಿ ಸಚಿವ ಹಾಗೂ ಬಿಜೆಪಿ ಹಿರಿಯ ನಾಯಕ ವಿ.ಸೋಮಣ್ಣ (V Somanna) ಮತ್ತೊಮ್ಮೆ ಗುಡುಗಿದ್ದಾರೆ.
ಮುಂಬರುವ ಲೋಕಸಭಾ Electionಯಲ್ಲಿ ಸ್ಪರ್ಧಿಸಲು ಅವಕಾಶದ ಬದಲಿಗೆ ರಾಜ್ಯಸಭೆಯ ಸದಸ್ಯತ್ವ ನೀಡುವಂತೆ ವರಿಷ್ಠರಿಗೆ ಬೇಡಿಕೆ ಸಲ್ಲಿಸಿರುವ ಅವರು ಇದೀಗ ಕೆಲವರ ವಿರುದ್ಧ ಶಿಸ್ತು ಕ್ರಮಕ್ಕೆ ಆಗ್ರಹಿಸಿದ್ದಾರೆ.
ವಿಧಾನಸಭೆ ಚುನಾವಣೆಯಲ್ಲಿ ನನ್ನ ಸೋಲಿಗೆ ಕಾರಣರಾದವರ ಮೇಲೆ ಕೂಡಲೇ ಶಿಸ್ತು ಕ್ರಮ ಜರುಗಿಸದಿದ್ದರೆ ಇದೇ ತಿಂಗಳ 16ರಂದು ಎಲ್ಲವನ್ನು ಬಹಿರಂಗಪಡಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭೆ ಚುನಾವಣೆಯಲ್ಲಿ ನನ್ನ ವಿರುದ್ಧ ಯಾರು? ಹೇಗೆ ಕೆಲಸ ಮಾಡಿದ್ದಾರೆ, ಏನೇನು ಮಾಡಿದ್ದಾರೆ ಎಂಬುದು ಹಾಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಗೊತ್ತಿದೆ. ಕೂಡಲೇ ಅವರು ಶಿಸ್ತು ಕ್ರಮ ತೆಗೆದುಕೊಳ್ಳಬೇಕು ಇಲ್ಲದಿದ್ದರೆ ನಾನೇ ಬಹಿರಂಗಪಡಿಸುತ್ತೇನೆ ಎಂದು ಎಚ್ಚರಿಸಿದರು.
ನಮ್ಮಂತಹವರ ಮೇಲೆ ಗದಾಪ್ರಹಾರ ಮಾಡಿದರೆ ಪರಿಣಾಮ ಏನಾಗುತ್ತದೆ ಎಂಬುದನ್ನು ಚಿಂತನೆ ಮಾಡಬೇಕು. ವಿಜಯೇಂದ್ರ ಅವರಿಗೆ ಒಳ್ಳೆಯದಾಗಲಿ. ಹಿಂದಿನದ್ದನ್ನೇ ನಡೆಸಿಕೊಂಡು ಹೋಗುತ್ತೇನೆ ಎಂಬ ಧೋರಣೆಯನ್ನು ಮೊದಲು ಬಿಡಬೇಕು ಎಂದು ಕಿವಿಮಾತು ಹೇಳಿದರು.
ವರಿಷ್ಠರ ಸೂಚನೆ ಮೇರೆಗೆ ನಾನು ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದೆ. ಆದರೆ ನಮ್ಮವರೇ ನನಗೆ ಏನು ಮಾಡಿದ್ದಾರೆ ಎಂಬುದು ವಿಜಯೇಂದ್ರ ಅವರಿಗೆ ಗೊತ್ತಿಲ್ಲವೇನೆಂದಲ್ಲ. ಬೇರೆ ಪಕ್ಷದವರ ಜೊತೆ ಕೈ ಜೋಡಿಸಿದವರು ಯಾರು ಎಂಬುದು ನಮ್ಮ ಅಧ್ಯಕ್ಷರಿಗೆ ಗೊತ್ತಿದೆ. ತಕ್ಷಣವೇ ಅಂಥವರ ಮೇಲೆ ಕ್ರಮ ಆಗಲೇಬೇಕು. ಪಕ್ಷಕ್ಕೆ ಮುಜುಗರವಾಗಬಾರದೆಂದು ನಾನು ಕೆಲವು ಕಹಿ ಸತ್ಯಗಳನ್ನು ನುಂಗಿಕೊಂಡಿದ್ದೇನೆ. ಎಲ್ಲಿಯವರೆಗೂ ನಾನು ಸಹಿಸಿಕೊಳ್ಳಲಿ ಎಂದು ಪ್ರಶ್ನೆ ಮಾಡಿದರು.
ನಾನು ಕಳೆದ ನಾಲ್ಕು ದಶಕಗಳಿಂದ ರಾಜಕಾರಣದಲ್ಲಿ ಇದ್ದೇನೆ. ಪಕ್ಷ ಬದಲಾಯಿಸಿದರೂ ಅನಿವಾರ್ಯ ಕಾರಣಗಳಿಂದ ಪಕ್ಷ ಬದಲಾಯಿಸಿರಬಹುದು. ಆದರೆ ಸೋಮಣ್ಣ ಎಂದಿಗೂ ವಿಶ್ವಾಸ ದ್ರೋಹ ಮಾಡಿದ ವ್ಯಕ್ತಿಯಲ್ಲ. ನಮಗೆ ನಮ್ಮವರಿಂದಲೇ ಮೋಸವಾಗಿದೆ. ಅಂಥವರನ್ನು ಪಕ್ಷದಲ್ಲಿ ಇಟ್ಟುಕೊಳ್ಳಬೇಕೆ?ಇದನ್ನು ವರಿಷ್ಠರು ತೀರ್ಮಾನ ಮಾಡಬೇಕೆಂದು ಒತ್ತಾಯಿಸಿದರು.
ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲೇ ನಾನು ಪಕ್ಷಕ್ಕೆ ಮುಜುಗರವಾಗಬಾರದೆಂದು ಯಾವುದೇ ಹೇಳಿಕೆಗಳನ್ನು ಕೊಟ್ಟಿಲ್ಲ. ನನಗಾಗಿರುವ ನೋವು ಯಾರಿಗೂ ಬರಬಾರದು. ಭವಿಷ್ಯದಲ್ಲಿ ಇದು ಮರುಕಳಿಸಬಾರದೆಂದರೆ ಕೆಲವರ ವಿರುದ್ಧ ಕ್ರಮ ಆಗಲೇಬೇಕು. ಪಕ್ಷದಲ್ಲಿದ್ದುಕೊಂಡೇ ನನಗೆ ಮೋಸ ಮಾಡುತ್ತಾರೆ ಎಂದರೆ ಯಾರನ್ನು ನಂಬಬೇಕೆಂದು ವಿಷಾದ ವ್ಯಕ್ತಪಡಿಸಿದರು.
ಇದೇ ತಿಂಗಳ 8ರಂದು ನಾನು ದೆಹಲಿಗೆ ತೆರಳುತ್ತಿದ್ದೇನೆ. ಪಕ್ಷದ ವರಿಷ್ಠರು ಸೂಚನೆ ಕೊಟ್ಟಿದ್ದಾರೆ. ನಾನು ಯಾರ ವಿರುದ್ಧವೂ ದೂರು ನೀಡುವುದಿಲ್ಲ. ನನಗೆ ಯಾರಿಂದ ಅನ್ಯಾಯವಾಗಿದೆ ಎಂಬುದನ್ನು ಅವರ ಗಮನಕ್ಕೆ ತರುತ್ತೇನೆ ಎಂದರು.