ಬೆಂಗಳೂರು,
ಅಧಿಕಾರ ಹಸ್ತಾಂತರ ಕುರಿತಂತೆ ನಡೆಯುತ್ತಿರುವ ಬೆಳವಣಿಗೆಗಳ ನಡುವೆ ಸಮಾಜ ಕಲ್ಯಾಣ ಮಂತ್ರಿ ಡಾ. ಎಚ್ ಸಿ ಮಹಾದೇವಪ್ಪ ನಾಯಿಗಳ ಕುರಿತಾಗಿ ಹೇಳಿದ ಮಾತು ಇದೀಗ ತೀವ್ರ ವಿವಾದಕ್ಕೆ ಕಾರಣವಾಗಿದೆ.
ಈ ಬಗ್ಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಮಾಜಿ ಸಂಸದ ಡಿ.ಕೆ.ಸುರೇಶ್, ನಾಯಿಗೆ ಇರುವ ನಿಯತ್ತು ನಿನಗಿಲ್ಲ ಎಂದು ಹಳ್ಳಿಗಳಲ್ಲಿ ಬೈಯುವುದನ್ನು ಕೇಳಿದ್ದೇವೆ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾಯಿಗಳು ನಿಯತ್ತಿಗೆ ಹೆಸರುವಾಸಿಯಾಗಿವೆ. ಋಣವನ್ನು ನೆನಪಿನಲ್ಲಿ ಇಟ್ಟುಕೊಂಡು ಯಜಮಾನನ ಋಣ ತೀರಿಸುತ್ತವೆ. ಕೆಲವರು ಮನೆಯಲ್ಲಿ ನಾಯಿಗಳನ್ನು ಸಾಕುತ್ತಾರೆ. ಬೀದಿ ನಾಯಿಗಳೂ ಇರುತ್ತವೆ. ನಾಯಿಗಳಿಗೆ ಇರುವ ನಿಯತ್ತು ಹೆಚ್ಚು ಜನಪ್ರಿಯತೆ ಪಡೆದಿದೆ ಎಂದರು.
ಕಟ್ಟಾ ಕಾಂಗ್ರೆಸ್ಸಿಗರು ನಿಯತ್ತಿನ ನಾಯಿಗಳೇ ಹೊರತು ಯಾರೂ ಕೂಡ ಬೀದಿನಾಯಿಗಳಲ್ಲ. ಸಚಿವ ಮಹಾದೇವಪ್ಪ ಯಾವ ಅರ್ಥದಲ್ಲಿ, ಯಾರನ್ನು ಕುರಿತು ಹೇಳಿದ್ದಾರೋ ನನಗೆ ಗೊತ್ತಿಲ್ಲ. ನಾಯಿ ಸಾಕುವುದೇ ನಮ್ಮನ್ನು ಕಾಪಾಡುತ್ತದೆ ಎಂಬ ಕಾರಣಕ್ಕೆ. ಅದರ ಬಗ್ಗೆ ಹೆಚ್ಚು ವ್ಯಾಖ್ಯಾನ ಬೇಕಿಲ್ಲ ಎಂದರು.

