ಬೆಂಗಳೂರು,
ಅಧಿಕಾರ ಹಂಚಿಕೆ ಕುರಿತಂತೆ ರಾಜ್ಯ ಕಾಂಗ್ರೆಸ್ಸಿನಲ್ಲಿ ಉಂಟಾಗಿರುವ ಬಿಕ್ಕಟ್ಟಿನ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಹಲವು ಶಾಸಕರು ಸದ್ದಿಲ್ಲದೆ ವಿದೇಶ ಪ್ರವಾಸ ಕೈಗೊಳ್ಳುತ್ತಿದ್ದಾರೆ.
ಈ ಶಾಸಕರು ಒಂದು ವಾರ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳುತ್ತಿದ್ದು ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಪುಟ್ಟರಂಗಶೆಟ್ಟಿ, ರಾಘವೇಂದ್ರ ಹಿಟ್ನಾಳ್, ಬಿ.ಎಂ ನಾಗರಾಜು, ಯಶವಂತರಾಯಗೌಡ ಪಾಟೀಲ್, ಅನಿಲ್ ಚಿಕ್ಕಮಾಧು, ಜೆ.ಟಿ ಪಾಟೀಲ್, ಅಲ್ಲಮಪ್ರಭು ಪಾಟೀಲ್, ಬನವನಗೌಡ ದದ್ದಲ್, ಎ.ಆರ್ ಕೃಷ್ಣಮೂರ್ತಿ, ತುರವೀಹಾಳ್, ಬಿ.ಬಿ ಚಿಮ್ಮನಕಟ್ಟಿ, ಬಿ.ಆರ್ ಪಾಟೀಲ್, ರಘು ಮೂರ್ತಿ ಹಾಗೂ ವಿಧಾನ ಪರಿಷತ್ತಿನ ಮೂವರು ವಿದೇಶ ಪ್ರವಾಸ ತೆರಳುತ್ತಿದ್ದಾರೆ.
ಇವರೊಂದಿಗೆ ಒಟ್ಟು 35 ಮಂದಿ ಶಾಸಕರು ವಿದೇಶ ಪ್ರವಾಸಕ್ಕೆ ತೆರಳಬೇಕಿತ್ತು. ಇದರಲ್ಲಿ ಕೆಲವರಿಗೆ ವೀಸಾ ಸಮಸ್ಯೆಯಾದ ಪರಿಣಾಮ ಅವರು ಈ ತಂಡದ ಜೊತೆ ಹೋಗುತ್ತಿಲ್ಲ ಮತ್ತೆ ಕೆಲವರು ತಮ್ಮ ಈ ಪ್ರವಾಸ ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಬಹುದು ಎಂಬ ಕಾರಣಕ್ಕೆ ಹೋಗುತ್ತಿಲ್ಲ ಎಂದು ಹೇಳಲಾಗಿದೆ.
ಇನ್ನು ಕೆಲವರು ಕುಟುಂಬ ಸಮೇತರಾಗಿ ಪ್ರವಾಸಕ್ಕೆ ತೆರಳುತ್ತಿದ್ದಾರೆ ನಾಳೆ ರಾತ್ರಿ 8 ಗಂಟೆಗೆ ಮೊದಲ ತಂಡ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನ್ಯೂಜಿಲೆಂಡ್ ಗೆ ತೆರಳುತ್ತಿದೆ ಈ ಎಲ್ಲರೂ ಮಾರ್ಚ್ ಒಂದರಂದು ವಾಪಸ್ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
Previous Articleನಾಯಿ ಕುರಿತು ಡಿ.ಕೆ.ಸುರೇಶ್ ವ್ಯಾಖ್ಯಾನ
Next Article ರಾಹುಲ್ ಗಾಂಧಿಗೆ ಹೈಕೋರ್ಟ್ ನಲ್ಲಿ ಗೆಲುವು

