ಚಿತ್ರದುರ್ಗ, ಜ.8- ಚಿತ್ರದುರ್ಗದ ಜೈಲು ರಸ್ತೆಯಲ್ಲಿನ ಪಾಳುಬಿದ್ದ ಮನೆಯಲ್ಲಿ ಪತ್ತೆಯಾಗಿದ್ದ ಐವರ ಅಸ್ಥಿಪಂಜರಗಳ (Skeleton) ಮರಣೋತ್ತರ ಪರೀಕ್ಷೆಯ ವರದಿ ಹೊರಬಿದ್ದಿದೆ. ಆದರೆ ಸಾವಿಗೆ ನಿಜವಾದ ಕಾರಣ ಪತ್ತೆಯಾಗಿಲ್ಲ. ಐವರು
ಕೊಲೆಯಾಗಿದ್ದಾರೋ? ಆತ್ಮಹತ್ಯೆ ಮಾಡಿಕೊಂಡಿದ್ದಾರೋ ? ಎಂಬ ಅನುಮಾನಕ್ಕೆ ತೆರೆಬಿದ್ದಿಲ್ಲದಿರುವುದು ಕುತೂಹಲ ಕೆರಳಿಸಿದೆ.
ಡಿಸೆಂಬರ್ 28 ರಂದು ಜಗನ್ನಾಥರೆಡ್ಡಿ ಅವರ ಪಾಳುಬಿದ್ದ ಮನೆಯಲ್ಲಿ ಪತ್ತೆಯಾಗಿದ್ದ ಐವರ ಅಸ್ಥಿಪಂಜರಗಳಿಂದಾಗಿ ಈ ಪ್ರಕರಣದ ಸುತ್ತ ಹಲವು ಅನುಮಾನಗಳ ಹುತ್ತ ಬೆಳೆದಿತ್ತು.
ಮರಣೋತ್ತರ ಪರೀಕ್ಷಾ ವರದಿಯಿಂದ ಸತ್ಯಾಂಶ ಹೊರಬೀಳುವ ಭರವಸೆ ಪೊಲೀಸರಲಿದ್ದು ಅದು ಹುಸಿಯಾಗಿದೆ.
ಅಸ್ತಿ ಪಂಜರಗಳ (Skeleton) ಮರಣೋತ್ತರ ಪರೀಕ್ಷೆ ನಡೆಸಿದ್ದ ಜಿಲ್ಲಾಸ್ಪತ್ರೆಯ ತಜ್ಞ ವೈದ್ಯ ವೇಣು ಅವರು ನ ವರದಿಯನ್ನು, ಬಡಾವಣೆ ಠಾಣೆ ಇನ್ಸ್ ಪೆಕ್ಟರ್ ನಯೂಮ್ ಅವರಿಗೆ ಹಸ್ತಾಂತರಿಸಿದ್ದಾರೆ. ಆದರೆ ಆ ವರದಿಯಲ್ಲಿ ಘಟನೆಗೆ ಸಂಬಂಧಿಸಿದಂತೆ ಯಾವುದೇ ಸುಳಿವು ಸಿಕ್ಕಿಲ್ಲ. ವರದಿಯಲ್ಲಿ ಕೇವಲ ಎಫ್ ಎಸ್ ಎಲ್ ವರದಿ ಬಾಕಿ ಇದೆ ಎಂದಷ್ಟೇ ಉಲ್ಲೇಖವಾಗಿದೆ. ಹೀಗಾಗಿ ಇದು ಕೊಲೆಯೋ? ಆತ್ಮಹತ್ಯೆಯೋ? ಎಂಬ ಶಂಕೆಗೆ ತೆರೆ ಎಳೆಯಲಾಗದೇ ಪೊಲೀಸರು ಮತ್ತೆ ಗೊಂದಲಕ್ಕೀಡಾಗಿದ್ದಾರೆ.
ಇದು ವಿಷ ಸೇವಿಸಿ ಇಲ್ಲವೇ ಸಯನೈಡ್ ಸೇವಿಸಿ ಮಾಡಿಕೊಂಡ ಆತ್ಮಹತ್ಯೆ? ಅಥವಾ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರಾ? ಎನ್ನುವ ಬಗ್ಗೆ ಅನುಮಾನಗಳು ಮೂಡಿದ್ದು, ಪೊಲೀಸರು ಹೆಚ್ಚಿನ ತನಿಖೆಗೆ ಮುಂದಾಗಿದ್ದಾರೆ.
ಡೆತ್ನೋಟ್ನಲ್ಲೇನಿದೆ ನಗರದ ಚಳ್ಳಕೆರೆ ಟೋಲ್ ಗೇಟ್ ಬಳಿಯ ಮನೆಯಲ್ಲಿ ಜಗನ್ನಾಥ್ ಪತ್ನಿ ಪ್ರೇಮಕ್ಕ ಮಕ್ಕಳಾದ ಕೃಷ್ಣರೆಡ್ಡಿ, ನರೇಂದ್ರ, ತ್ರಿವೇಣಿ ವಾಸವಾಗಿದ್ದರು. ಆದ್ರೆ ಹಲವು ವರ್ಷಗಳಿಂದ ಅವರ ಸಂಬಂಧಿಗಳು, ಸ್ನೇಹಿತರು ಹಾಗೂ ಅಕ್ಕಪಕ್ಕದ ನಿವಾಸಿಗಳ ಸಂಪರ್ಕಕ್ಕೂ ಕುಟುಂಬಸ್ಥರು ಬಂದಿರಲಿಲ್ಲ. ದೂರದ ಊರಲ್ಲಿ ಅನಾಥಾಶ್ರಮದಲ್ಲಿ ನೆಲೆಸಿರಬಹುದು ಎಂದು ಎಲ್ಲರೂ ಭಾವಿಸಿದ್ದರು. ಅಲ್ಲದೇ ಜಗನ್ನಾಥ್ ರೆಡ್ಡಿಯ ಮೂವರು ಮಕ್ಕಳಿಗೂ ವಿವಾಹವಾಗಿರಲಿಲ್ಲ.
ಮೊದಲ ಮಗ ಕೃಷ್ಣರೆಡ್ಡಿ ನಿರುದ್ಯೋಗಿಯಾಗಿದ್ದು, ಮತ್ತೋರ್ವ ನರೇಂದ್ರರೆಡ್ಡಿ 2013ರಲ್ಲಿ ಬೆಂಗಳೂರಿನ ಬಿಡದಿಯಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಇಂಜಿನಿಯರ್ ಆಗಿ ಕೆಲಸ ಬಿಟ್ಟು ದರೋಡೆ ಕೇಸ್ನಲ್ಲಿ ಕೆಲದಿನ ಜೈಲು ಶಿಕ್ಷೆಗೆ ಗುರಿಯಾದರು. ಹಾಗೆಯೇ ಇದ್ದ ಓರ್ವ ಪುತ್ರಿಯಾದ ತ್ರಿವೇಣಿ ಬೋನ್ ಮ್ಯಾರೊ ಎಂಬ ಮೂಳೆ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಇವರ ಹಿರಿಯ ಮಗ ಮಂಜುನಾಥ ರೆಡ್ಡಿ ಕೇರಳದಲ್ಲಿ ಸಾವನ್ನಪ್ಪಿದ್ದರು. ಹೀಗಾಗಿ ಇಡೀ ಕುಟುಂಬ ಮಾನಸಿಕ ಖಿನ್ನತೆಗೆ ಒಳಗಾಗಿದ್ದು, ಕಳೆದ 8 ವರ್ಷಗಳಿಂದ ಯಾರ ಸಂಪರ್ಕದಲ್ಲಿರಲಿಲ್ಲ ಎಂದು ಜಗನ್ನಾಥ್ ಪತ್ನಿಯಾದ ಪ್ರೇಮಕ್ಕ ಅವರ ಸಹೋದರಿ ಲಲಿತಮ್ಮ ತಿಳಿಸಿದ್ದರು.