ಬೆಂಗಳೂರು,ಜ.19-
ಬೀದರ್ನಲ್ಲಿ ಎಟಿಎಂ ಲೂಟಿ ಹಾಗೂ ಮಂಗಳೂರಿನ ಬ್ಯಾಂಕ್ ದರೋಡೆ ಬೆನ್ನಲ್ಲೇ ಬೆಚ್ಚಿ ಬಿದ್ದಿರುವ ನಗರದ ಜನತೆಯ ಭಯ ಹೋಗಲಾಡಿಸಿ ಸುರಕ್ಷತೆ ಸಂದೇಶ ಸಾರಲು ಪೊಲೀಸ್ ಆಯುಕ್ತರು ಸೇರಿದಂತೆ ಬೆಂಗಳೂರು ನಗರದ ಎಲ್ಲ ಹಿರಿಯ ಅಧಿಕಾರಿಗಳು ಶನಿವಾರ ರಾತ್ರಿ ವಿಶೇಷ ಗಸ್ತು ನಡೆಸಿದ್ದಾರೆ.
ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ನೇತೃತ್ವದಲ್ಲಿ ಮಧ್ಯರಾತ್ರಿ 1 ಗಂಟೆಯಿಂದ ನಸುಕಿನ 4 ಗಂಟೆವರೆಗೆ ಗಸ್ತು ನಡೆಸಿದ್ದಾರೆ.
ಹೆಚ್ಚುವರಿ ಆಯುಕ್ತರಾದ ವಿಕಾಸ್ ಕುಮಾರ್ ವಿಕಾಸ್, ಚಂದ್ರಗುಪ್ತ, ಜಂಟಿ ಆಯುಕ್ತರಾದ ಬಿ.ರಮೇಶ್, ಎಂ.ಎನ್.ಅನುಚೇತ್ ಸೇರಿ ಎಲ್ಲ ಡಿಸಿಪಿಗಳು ಗಸ್ತು ವಿನಲ್ಲಿ ಭಾಗಿಯಾದ್ದರು.
ಪ್ರತಿ ಅಧಿಕಾರಿಗಳು ಪ್ರತ್ಯೇಕವಾಗಿ ಒಂದೊಂದು ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ಪಹರೆ ನಡೆಸಿದರು.
ಸದಾಶಿವನಗರ ಠಾಣಾ ವ್ಯಾಪ್ತಿಯಲ್ಲಿ ಕಮೀಷನರ್ ದಯಾನಂದ್, ಕೆಂಗೇರಿ ಠಾಣೆ ವ್ಯಾಪ್ತಿಯಲ್ಲಿ ಹೆಚ್ಚುವರಿ ಆಯುಕ್ತ ಡಾ. ಚಂದ್ರಗುಪ್ತ, ಅಶೋಕ ನಗರ ಠಾಣಾ ಸರಹದ್ದಿನಲ್ಲಿ ಹೆಚ್ಚುವರಿ ಆಯುಕ್ತ ವಿಕಾಸ್ ಕುಮಾರ್ವಿಕಾಸ್, ಹೆಬ್ಬಾಳ ಠಾಣೆ ವ್ಯಾಪ್ತಿಯಲ್ಲಿ ಜಂಟಿ ಆಯುಕ್ತ ಅನುಚೇತ್, ಅಮೃತಹಳ್ಳಿಯಲ್ಲಿ ರಮೇಶ್, ಬಾಣಸವಾಡಿಯಲ್ಲಿ ಪೂರ್ವ ವಿಭಾಗದ ಡಿಸಿಪಿ ಡಿ.ದೇವರಾಜ್, ಹಲಸೂರು ಗೇಟ್ನಲ್ಲಿ ಕೇಂದ್ರ ವಿಭಾಗದ ಡಿಸಿಪಿ ಎಚ್.ಟಿ.ಶೇಖರ್, ಬಸವೇಶ್ವರ ನಗರ ಠಾಣೆ ವ್ಯಾಪ್ತಿಯಲ್ಲಿ ಪಶ್ಚಿಮ ವಿಭಾಗದ ಡಿಸಿಪಿ ಎಸ್.ಗಿರೀಶ್, ಪೀಣ್ಯ ಠಾಣೆ ಸರಹದ್ದಿನಲ್ಲಿ ಉತ್ತರ ವಿಭಾಗದ ಡಿಸಿಪಿ ಸೈದುಲ ಅಡಾವತ್, ಹುಳಿಮಾವು ಠಾಣೆ ಭಾಗದಲ್ಲಿ ಆಗೇಯ ವಿಭಾಗದ ಡಿಸಿಪಿ ಸಾರಾ ಫಾತಿಮಾ ಹಾಗೂ ಯಲಹಂಕ ಠಾಣಾ ವ್ಯಾಪ್ತಿಯಲ್ಲಿ ಉತ್ತರ ವಿಭಾಗದ(ಸಂಚಾರ) ಡಿಸಿಪಿ ಸಿರಿಗೌರಿ ಅವರು ರಾತ್ರಿ 1 ಗಂಟೆಯಿಂದ ಗಸ್ತು ನಡೆಸಿದ್ದಾರೆ.
ಇತ್ತೀಚೆಗೆ ರಾಜ್ಯದಲ್ಲಿ ನಡೆದಿರುವ ಅಪರಾಧ ಕೃತ್ಯಗಳ ಹಿನ್ನೆಲೆಯಲ್ಲಿ ಬಿ.ದಯಾನಂದ್ ಅವರು ವಿಶೇಷ ಗಸ್ತು ನಡೆಸಿ ಜನರಲ್ಲಿನ ಆತಂಕ ನಿವಾರಿಸಿ ಪೊಲೀಸರಲ್ಲಿಯೂ ದಕ್ಷತೆ ಹೆಚ್ಚಿಸಿದ್ದಾರೆ .
ಗಣ್ಯರ ಏರಿಯಾದಲ್ಲಿ ಸುತ್ತಾಟ:
ಡಿಸಿಎಂ ಡಿ.ಕೆ.ಶಿವಕುಮಾರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಗೃಹ ಸಚಿವ ಜಿ.ಪರಮೇಶ್ವರ, ಸಚಿವರಾದ ಸತೀಶ್ ಜಾರಕಿಹೊಳಿ, ಎಂ.ಬಿ.ಪಾಟೀಲ್, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸೇರಿ ಅತೀ ಹೆಚ್ಚು ಗಣ್ಯರು ಇರುವ ಸದಾಶಿವನಗರ, ಡಾಲರ್ಸ್ ಕಾಲೋನಿಗಳಲ್ಲಿ ನಗರ ಪೊಲೀಸರು ರಾತ್ರಿ ಗಸ್ತು ನಡೆಸಿದರು.
ಈ ವೇಳೆ ರಸ್ತೆಯಲ್ಲಿ ಭೇಟಿಯಾದ ಜನರ ಜತೆಗೆ ಮಾತುಕತೆ ನಡೆಸಿದ ಪೊಲೀಸರು ಭದ್ರತೆ ಕುರಿತು ಚರ್ಚಿಸಿದರು. ಅಲ್ಲದೇ, ಸಮಸ್ಯೆಗಳನ್ನು ಆಲಿಸಿ ಸ್ಪಂದಿಸಿದರು. ನಗರ ಪೊಲೀಸ್ ಆಯುಕ್ತ ದಯಾನಂದ್ ಅವರು ತಾವೇ ವಾಹನ ಚಾಲನೆ ಮಾಡಿದ್ದು ವಿಶೇಷವಾಗಿತ್ತು.
