ಬೆಂಗಳೂರು, ನ.17: ಶಿರಸಿ ಕೆನರಾ ವೃತ್ತದ ಇಡಗುಂದಿ ಅರಣ್ಯವಲಯದಲ್ಲಿ ಸಾಗುವಾನಿ, ಬೀಟಿ ಮೊದಲಾದ ಬೆಲೆಬಾಳುವ ಮರಗಳ ಅಕ್ರಮ ಕಡಿತಲೆ ಮತ್ತು ಮರಳು ಅಕ್ರಮ ಸಾಗಣೆಗೆ ಸಾಕ್ಷಿ ಲಭಿಸಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸಲು ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಸೂಚನೆ ನೀಡಿದ್ದಾರೆ.
ಉತ್ತರ ಕನ್ನಡ (Uttara Kannada) ಜಿಲ್ಲೆಯಲ್ಲಿನ ದುರ್ಗಮ ಅರಣ್ಯಪ್ರದೇಶದಲ್ಲಿ ಒಣಗಿದ ಮರಗಳನ್ನು ಕಡಿದು, ಸಾಗಿಸಲು ಕೆಲವು ಕಿಡಿಗೇಡಿಗಳು ಪ್ರಯತ್ನಿಸಿರುವ ಮತ್ತು ಮರಳು ಸಂಗ್ರಹ ಮಾಡಿರುವ ಬಗ್ಗೆ ವಾಟ್ಸ್ಅಪ್ ಮೂಲಕ ಬಂದ ದೂರನ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಸಚಿವರು ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
ಈ ಸಂಬಂಧ ಅರಣ್ಯ ಸಿಬ್ಬಂದಿ ಸ್ಥಳೀಯರ ನೆರವಿನಿಂದ ಮರಗಳ ಅಕ್ರಮ ಕಡಿತಲೆಯ ಸ್ತಳವನ್ನು ಪತ್ತೆ ಮಾಡಿದ್ದು, ಕತ್ತರಿಸಿದ ಮರಗಳನ್ನು ವಶಕ್ಕೆ ಪಡೆಸಲಾಗಿದೆ. ಈ ಹಿನ್ನೆಲೆಯಲ್ಲಿ ಕಾಡಿನೊಳಗೆ ಪ್ರವೇಶಿಸಿ ಮರ ಕಡಿಯುತ್ತಿರುವ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಅರಣ್ಯ ಸಂಚಾರಿ ದಳಕ್ಕೆ ಸೂಚಿಸಲಾಗಿದ್ದು, ತಮ್ಮ ವಲಯದಲ್ಲಿ ಅಕ್ರಮ ಕಡಿತಲೆ ಆಗಿದ್ದರೂ ಕ್ರಮ ವಹಿಸದೆ ನಿರ್ಲಕ್ಷ್ಯ ತೋರಿರುವ, ಕರ್ತವ್ಯ ಲೋಪ ಎಸಗಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು, ತಮ್ಮ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ.