ಬೆಂಗಳೂರು, ಸೆ.24- ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಡಾ. ಸುಧಾಮೂರ್ತಿ ಅವರ ಹೆಸರನ್ನು ಬಳಸಿಕೊಂಡು ವಂಚನೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.
ವಂಚನೆ ಸಂಬಂಧಿಸಿದಂತೆ ಸುಧಾಮೂರ್ತಿ ಅವರ ಅಪ್ತ ಕಾರ್ಯದರ್ಶಿ ಮಮತ ಸಂಜಯ್ ಅವರು ಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ವಂಚನೆ ನಡಸಿರುವ ಶೃತಿ ಹಾಗೂ ಲಾವಣ್ಯ ಎಂಬವರ ವಿರುದ್ಧ ದೂರು ದಾಖಲಿಸಿ ಸೂಕ್ತ ಕ್ರಮಕ್ಕೆ ಆಗ್ರಹಿಸಲಾಗಿದೆ.ಆರೋಪಿಗಳು ಸುಧಾಮೂರ್ತಿಯವರ ಪೋಟೋಗಳನ್ನ ಬಳಸಿ ಜಾಹಿರಾತು ನೀಡಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ಟಿಕೆಟ್ ಮಾರಾಟ ಮಾಡಿ ವಂಚಿಸುತ್ತಿದ್ದರು. ಸದ್ಯ ವಂಚನೆ ಬೆಳಕಿಗೆ ಬಂದಿದ್ದು ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.
ಕನ್ನಡ ಕೂಟ ಕ್ಯಾಲಿಪೋರ್ನಿಯಾ(ಕೆಕೆಎನ್ ಸಿ)ದಿಂದ 50 ನೇ ವರ್ಷದ ಕಾರ್ಯಕ್ರಮಕ್ಕೆ ಸುಧಾಮೂರ್ತಿಯವರಿಗೆ ಆಹ್ವಾನಿಸಲಾಗಿತ್ತು. ಆದರೆ ಕಾರಣಾಂತರಗಳಿಂದ ಕಾರ್ಯಕ್ರಮಕ್ಕೆ ಬರಲು ಆಗುವುದಿಲ್ಲವೆಂದು ಇಮೇಲ್ ಮೂಲಕ ಡಾ.ಸುಧಾಮೂರ್ತಿ ಅವರು ಸಂದೇಶ ಕಳಿಸಿದ್ದರು.
ಈ ಮಧ್ಯೆ ಕಿಡಿಗೇಡಿಗಳು ಸಮಯ ಬಳಿಸಿಕೊಂಡು ಸುಧಾಮೂರ್ತಿಯವರ ಪೋಟೋಗಳನ್ನ ಬಳಸಿ ಕನ್ನಡ ಕೂಟ ಕ್ಯಾಲಿಪೋರ್ನಿಯಾ ಕಾರ್ಯಕ್ರಮಕ್ಕೆ ಬರುತ್ತಾರೆಂದು ಸಾಮಾಜಿಕ ಜಾಲತಾಣದಲ್ಲಿ ಜಾಹೀರಾತು ನೀಡಿ ಕಾರ್ಯಕ್ರಮದ ಟಿಕೆಟ್ ಮಾರಾಟ ಮಾಡಿದ್ದಾರೆ.
ಮೂರ್ತಿ ಟ್ರಸ್ಟ್ನ ಕಚೇರಿ ಎಂದು ಹೆಸರು ಸೃಷ್ಠಿಸಿ ಸುಧಾಮೂರ್ತಿಯವರ ಸಹಾಯಕಿ ಲಾವಣ್ಯ ಎಂಬುವರು ಕಾರ್ಯಕ್ರಮಕ್ಕೆ ಸುಧಾಮೂರ್ತಿ ಮೇಡಂ ಬರುದಾಗಿ ಹೇಳಿ ವಂಚನೆ ಮಾಡಿದ್ದಾರೆ.
ಈ ಬಗ್ಗೆ ಕೆಕೆಎನ್ ಸಿ ಕಾರ್ಯಕ್ರಮ ಆಯೋಜನೆ ಮಾಡುವವರಿಗೆ ಕರೆ ಮಾಡಿ ವಿಚಾರಿಸಿದಾಗ ಸುಧಾಮೂರ್ತಿಯವರ ಸಹಾಯಕಿ ಕರೆ ಮಾಡಿ ಸುಧಾಮೂರ್ತಿಯವರು ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ ಎಂದು ತಿಳಿಸಿದ್ದಾರೆ ಎಂದು ಆಯೋಜಕರು ಹೇಳಿದ್ದಾರೆ.
ಇಷ್ಟೇ ಅಲ್ಲದೆ ಹೀಗೆ ಅಮೆರಿಕಾದಲ್ಲಿ ಮೀಟ್ ಆಂಡ್ ಗ್ರೇಟ್ ವಿತ್ ಡಾ.ಸುಧಾಮೂರ್ತಿ ಕಾರ್ಯಕ್ರಮ ಆಯೋಜಿಸಿರುವುದಾಗಿ ಟಿಕೆಟ್ ಮಾರಾಟ ಮಾಡಿದ್ದಾರೆ.
ಅಮೆರಿಕಾದ ಸೇವಾ ಮಿಲ್ ಪಿಟ್ಸ್ ಎಂಬಲ್ಲಿ ಕಾರ್ಯಕ್ರಮ ಆಯೋಜಿಸಿರುವುದಾಗಿ ಟಿಕೆಟ್ ಮಾರಾಟ ಮಾಡಿದ್ದಾರೆ. ಪ್ರತಿ ಟಿಕೆಟ್ಗೆ 40 ಡಾಲರ್ ಪಡೆದಿರುವ ಆರೋಪ ಕೇಳಿ ಬಂದಿದೆ. ಈ ರೀತಿ ಸುಧಾಮೂರ್ತಿಯವರಿಗೆ ತಿಳಿಯದೆಯೇ ವಿದೇಶಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿರುವ ಬಗ್ಗೆ ಅನುಮಾನ ಬಂದು ಕಂಪನಿಯಲ್ಲಿ ಪ್ರಶ್ನಿಸಿದಾಗ ವಂಚನೆ ಬೆಳಕಿಗೆ ಬಂದಿದೆ.
ಈ ಸಂಬಂಧ ಜಯನಗರ ಠಾಣೆಯಲ್ಲಿ ಐಟಿ ಕಾಯ್ದೆ 66ಸಿ, 66ಡಿ ಹಾಗೂ ಐಪಿಸಿ 419, 420 ಕಾಯ್ದೆಯಡಿ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.