ಬೆಂಗಳೂರು.ಜ,15: ಸಂವಿಧಾನದ ಆಶಯಕ್ಕೆ ಪೂರಕವಾಗಿ ರಾಜ್ಯಾಂಗಬದ್ಧವಾಗಿ ಆಡಳಿತ ನಡೆಸಬೇಕಾದ ಕೇಂದ್ರ ಸರ್ಕಾರವು ಧಾರ್ಮಿಕ ಸಂಸ್ಥೆಯೊಂದರ ಆಡಳಿತ ಮಂಡಳಿಯಾಗಿ ಬದಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹಾದೇವಪ್ಪ (HC Mahadevappa) ಆಪಾದಿಸಿದ್ದಾರೆ.
ಈ ಕುರಿತಂತೆ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಅವರು, ಕೇಂದ್ರ ಸರ್ಕಾರದ ಈ ನಡವಳಿಕೆವಸಂವಿಧಾನ ಮತ್ತು ವೈವಿಧ್ಯತೆಯಲ್ಲಿ ಏಕತೆಯ ಮೌಲ್ಯವನ್ನು ಪ್ರತಿಪಾದಿಸುವ ಪ್ರಜಾಪ್ರಭುತ್ವದ ಆಶಯದ ವಿರುದ್ಧದ ನಡೆಯಾಗಿದೆ ಎಂದು ದೂರಿದ್ದಾರೆ.
ಅತಿರೇಕದ ಧಾರ್ಮಿಕತೆಯನ್ನು ಆಚರಿಸುತ್ತಿರುವ ಸರ್ಕಾರವು ರಾಜ್ಯಾಂಗಬದ್ಧ ವ್ಯವಸ್ಥೆಯನ್ನು ಅರಿಯುವಲ್ಲಿ ಸಂಪೂರ್ಣ ಸೋತಿದೆ.ಧಾರ್ಮಿಕತೆ ಎಂಬುದು ವ್ಯಕ್ತಿಯೋರ್ವನ ಐಚ್ಛಿಕ ವಿಷಯವಾಗಿದೆ. ಈ ಕಾರಣಕ್ಕಾಗಿಯೇ ಕೆಲವರು ಮಂದಿರಗಳಿಗೆ ಹೋಗುತ್ತಾರೆ, ಇನ್ನು ಕೆಲವರು ಮಸೀದಿಗೆ, ಮತ್ತೆ ಕೆಲವರು ಚರ್ಚ್, ಬೌದ್ಧ ಸ್ಥೂಪಗಳಿಗೆ ತೆರಳುತ್ತಾರೆ. ಇತ್ತೀಚಿಗೆ ಬಾಬಾ ಸಾಹೇಬರ ದೀಕ್ಷಾಭೂಮಿಗೂ ಹೆಚ್ಚಿನ ಜನರು ತೆರಳುತ್ತಿರುವುದನ್ನು ನಾವು ಕಾಣಬಹುದು ಎಂದು ಹೇಳಿದ್ದಾರೆ.
ಈ ಹಿನ್ನಲೆಯಲ್ಲಿ ಒಬ್ಬರ ಐಚ್ಛಿಕ ವಿಷಯವಾದ ಧಾರ್ಮಿಕತೆಯನ್ನು ರಾಜಕೀಯ ಪರಿಧಿಯ ಒಳಗೆ ತಂದು ಧರ್ಮವನ್ನೂ ರಾಜಕೀಯದ ಲಾಭಕ್ಕಾಗಿ ಬಳಸಿಕೊಳ್ಳುವ ಇವರ ಸಂವಿಧಾನ ವಿರೋಧಿ ಕೆಲಸವನ್ನು ನಾನು ಮಾತ್ರವಲ್ಲದೇ ಪ್ರಜಾಪ್ರಭುತ್ವವನ್ನು ಪ್ರೀತಿಸುವ ಎಲ್ಲರೂ ವಿರೋಧಿಸಬೇಕು.ಚುನಾವಣೆಗಳು ಅಭಿವೃದ್ಧಿ ಮತ್ತು ಜನಪರತೆಯ ಆಧಾರದಲ್ಲಿ ನಡೆಯಬೇಕೇ ವಿನಃ ಧಾರ್ಮಿಕತೆಯ ಮೇಲಲ್ಲ ಎಂದು ಪ್ರತಿಪಾದಿಸಿದ್ದಾರೆ.