ಬೆಂಗಳೂರು.ಜ,4: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕನಿಷ್ಠ 20 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬೇಕೆಂದು ಪಣತೊಟ್ಟಿರುವ ಕಾಂಗ್ರೆಸ್ (Congress) ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಿದೆ.
ಪ್ರತಿ ಲೋಕಸಭಾ ಕ್ಷೇತ್ರದ ಚುನಾವಣೆ ಉಸ್ತುವಾರಿಗೆ ನೇಮಿಸಿರುವ ಸಚಿವರ ನೇತೃತ್ವದ ಸಮಿತಿ ಸ್ಥಳೀಯ ಮಟ್ಟದ ಕಾರ್ಯಕರ್ತರ ಅಭಿಪ್ರಾಯ ಪಡೆದು ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಸಿದ್ದ ಪಡಿಸುತ್ತಿದ್ದಾರೆ.
ಇದರ ಬೆನ್ನಲ್ಲೇ ಮಹಿಳಾ ನಾಯಕರು ಟಿಕೆಟ್ ಗಾಗಿ ಪಟ್ಟು ಹಿಡಿದಿರುವುದು ರಾಜ್ಯ ನಾಯಕತ್ವಕ್ಕೆ ಹೊಸ ಸವಾಲಾಗಿ ಪರಿಣಮಿಸಿದೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಹಿಳೆಯರಿಗೆ ಸ್ಪರ್ಧಿಸಲು ಅವಕಾಶ ನೀಡಲಿಲ್ಲ ಹೀಗಾಗಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಹೆಚ್ಚಿನ ಅವಕಾಶ ನೀಡಬೇಕು ಎಂದು ಮಹಿಳಾ ನಾಯಕರು ಮತ್ತು ಹಿಡಿದಿದ್ದಾರೆ.
ಕೇಂದ್ರ ಸರ್ಕಾರ ಶಾಸನಸಭೆಗಳಲ್ಲಿ ಮಹಿಳಾ ಮೀಸಲಾತಿಬವಿಧೇಯಕ ಜಾರಿಗೊಳಿಸಿರುವ ಬೆನ್ನಲ್ಲೇ ಮಹಿಳಾ ನಾಯಕರು ಚುನಾವಣೆಗೆ ಸ್ಪರ್ಧಿಸಲು ಹೆಚ್ಚು ಆಸಕ್ತಿ ತೋರಿದ್ದು ತಮ್ಮದೇ ಆದ ಪ್ರಭಾವವನ್ನು ನಾಯಕತ್ವದ ಮೇಲೆ ಹೇರ ತೊಡಗಿದ್ದಾರೆ.
ಕೆಲವು ಮಹಿಳಾ ನಾಯಕರು ಹೈಕಮಾಂಡ್ ಮಟ್ಟದಲ್ಲೂ ತಮ್ಮ ಪ್ರಭಾವ ಬೀರ ತೊಡಗಿದ್ದು ಶತಾಯಗತಾಯ ಟಿಕೆಟ್ ಪಡೆಯಲೇಬೇಕು ಲಾಬಿ ನಡೆಸುತ್ತಿದ್ದಾರೆ.
ಪ್ರಮುಖವಾಗಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಮಾಜಿ ಶಾಸಕಿ, ಸೌಮ್ಯ ರಾಮಲಿಂಗಾ ರೆಡ್ಡಿ, ಚಾಮರಾಜನಗರ ಮೀಸಲು ಕ್ಷೇತ್ರದಲ್ಲಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್ ಮಂಡ್ಯದಲ್ಲಿ ನಟಿ ಮಾಜಿ ಸಂಸದೆ ರಮ್ಯಾ ಹೆಸರು ಪ್ರಮುಖವಾಗಿ ಕೇಳಿಬರುತ್ತಿವೆ ಇವರೊಂದಿಗೆ ಬೆಂಗಳೂರು ಉತ್ತರ ಕ್ಷೇತ್ರದಿಂದ ಕುಸುಮಾ ಹನುಮಂತರಾಯಪ್ಪ ,ತುಮಕೂರು ಕ್ಷೇತ್ರಕ್ಕೆ ತುರುವೆಕೆರೆಯ ಕಾಂಗ್ರೆಸ್ ನಾಯಕಿ ಗೀತಾ ರಾಜಣ್ಣ, ಶಿವಮೊಗ್ಗ ದಲ್ಲಿ ಮತ್ತೊಮ್ಮೆ ಸ್ಪರ್ಧಿಸಲು ಗೀತಾ ಶಿವರಾಜ್ ಕುಮಾರ್ ಸಜ್ಜಾಗಿದ್ದಾರೆ.
ದಾವಣಗೆರೆ ಸಚಿವ ಮಲ್ಲಿಕಾರ್ಜುನ ಪತ್ನಿ ಪ್ರಭಾ ಮಲ್ಲಿಕಾರ್ಜುನ, ಬಾಗಲಕೋಟೆಯಲ್ಲಿ ರಕ್ಷಿತಾ ಈಟಿ, ಶಿಲ್ಪಾ ಕಾಶಪ್ಪನವರ್ ನಡುವೆ ಪೈಪೋಟಿ ನಡೆದಿದೆ.
ಬಿಜಾಪುರದಲ್ಲಿ ಕಾಂತಾನಾಯ್ಕ್, ಚಿಕ್ಕಮಗಳೂರು- ಉಡುಪಿ ಕ್ಷೇತ್ರದಿಂದ ಆರತಿ ಕೃಷ್ಣ ಟಿಕೆಟ್ ಗೆ ಬೇಡಿಕೆ ಇಟ್ಟಿದ್ದು, ಕೋಲಾರಕ್ಕೆ ಕೆ ಹೆಚ್ ಮುನಿಯಪ್ಪ ಪುತ್ರಿ ರೂಪ ಶಶಿಧರ್ ಕಣಕ್ಕಿಳಿಯಲು ಚಿಂತನೆ ನಡೆಸಿದ್ದಾರೆ.
ಈ ಬೆಳವಣಿಗೆ ರಾಜ್ಯ ಕಾಂಗ್ರೆಸ್ ನಲ್ಲಿ ಹೊಸ ಸಂಚಲನ ಮೂಡಿಸಿದೆ.