ಬೆಂಗಳೂರು,ಜು.15- ಜೆಜೆ ನಗರದ ಹಳೆಗುಡ್ಡದಹಳ್ಳಿಯಲ್ಲಿ ಕಳೆದ ಮಾ.4ರ ರಾತ್ರಿ ಯುವಕ ಚಂದ್ರು ಕೊಲೆಯಾಗಿರುವುದು ಭಾಷೆ ವಿಚಾರಕ್ಕೆ ಎನ್ನುವುದು ಸಿಐಡಿ ಅಧಿಕಾರಿಗಳು ನಡೆಸಿದ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಪ್ರಕರಣದ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ಸಲ್ಲಿಸಿರುವ 179 ಪುಟಗಳ ಆರೋಪಪಟ್ಟಿ(ಚಾರ್ಜ್ಶೀಟ್)ಯಲ್ಲಿ ಕೊಲೆಗೆ ಕಾರಣ ಏನೆಂಬುದು ಬಯಲಾಗಿದೆ.
ಭಾಷೆ ವಿಚಾರಕ್ಕೆ ಚಂದ್ರು ಕೊಲೆ ನಡೆದಿದೆ ಎನ್ನುವ ಆಘಾತಕಾರಿ ವಿಷಯ ಚಾರ್ಜ್ಶೀಟ್ ನಲ್ಲಿದ್ದು, ಬೈಕ್ ಅಪಘಾತ ಕಾರಣವಲ್ಲ, ಉರ್ದು ಭಾಷೆಯಲ್ಲಿ ಮಾತಾಡಲಿಲ್ಲ ಎನ್ನುವುದು ಚಂದ್ರು ಕೊಲೆಗೆ ಕಾರಣ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಪ್ರಕರಣದ ವಿವರ:
ಕಾಟನ್ಪೇಟೆಯ ಜೈಮಾರುತಿನಗರ ನಿವಾಸಿ ಚಂದ್ರು (22)ನನ್ನು ಮಾ.4ರ ತಡರಾತ್ರಿ ಕೊಲೆ ಮಾಡಲಾಗಿತ್ತು. ಆರೋಪಿ ಶಾಹಿದ್ ಸೇರಿ ಹಲವರನ್ನು ಜೆ.ಜೆ. ನಗರ ಪೊಲೀಸರು ಬಂಧಿಸಿದ್ದರು. ಗೂಡ್ಸ್ಶೆಡ್ ರಸ್ತೆಯಲ್ಲಿರುವ ರೈಲ್ವೆ ವಿಭಾಗೀಯ ಕಚೇರಿಯಲ್ಲಿ ಚಂದ್ರು ಉದ್ಯೋಗ ತರಬೇತಿ ಪಡೆಯುತ್ತಿದ್ದ. ಸ್ನೇಹಿತ ಸೈಮನ್ ಹುಟ್ಟುಹಬ್ಬ ಆಚರಿಸಲು ಮಾ.4ರ ರಾತ್ರಿ ಆತನ ಮನೆಗೆ ಹೋಗಿದ್ದ.
ಆ ವೇಳೆ ಚಿಕನ್ ರೋಲ್ ತರಲೆಂದು ಸೈಮನ್ ಮತ್ತು ಚಂದ್ರು ಇಬ್ಬರೂ ತಡರಾತ್ರಿ ಬೈಕ್ನಲ್ಲಿ ಜೆ.ಜೆ. ನಗರಕ್ಕೆ ಹೋಗಿದ್ದರು. ಹಳೇಗುಡ್ಡದಹಳ್ಳಿಯ ಕಾವೇರಿ ಆಶ್ರಮ ಶಾಲೆ ಸಮೀಪ ನಿಯಂತ್ರಣ ತಪ್ಪಿದ ಚಂದ್ರುವಿನ ಬೈಕ್ ಮುಂದಿನಿಂದ ಬರುತ್ತಿದ್ದ ಶಾಹಿದ್ ಬೈಕ್ಗೆ ಡಿಕ್ಕಿ ಹೊಡೆದಿತ್ತು. ಯಾರಿಗೂ ಗಾಯಗಳಾಗಿರಲಿಲ್ಲ.
ಚಂದ್ರು ಬೆದರಿಕೆ:
ಈ ವೇಳೆ ಸರಿಯಾಗಿ ಬೈಕ್ ಚಲಾಯಿಸುವಂತೆ ಶಾಹಿದ್ಗೆ ಚಂದ್ರು ಬೆದರಿಸಿದ್ದ. ಇದರಿಂದ ಕೆರಳಿದ ಶಾಹಿದ್, ತನ್ನ ಸ್ನೇಹಿತರನ್ನು ಸ್ಥಳಕ್ಕೆ ಕರೆಸಿ ಚಂದ್ರು ಹಾಗು ಸೈಮನ್ ಜತೆ ಜಗಳ ಮಾಡಿದ್ದ. ಜಗಳ ವಿಕೋಪಕ್ಕೆ ತಿರುಗಿ ಶಾಹಿದ್ ತನ್ನ ಬಳಿಯಿದ್ದ ಚೂರಿಯಿಂದ ಚಂದ್ರು ತೊಡೆಗೆ ಇರಿದು ಪರಾರಿಯಾಗಿದ್ದ. ಗಂಭೀರವಾಗಿ ಗಾಯಗೊಂಡಿದ್ದ ಚಂದ್ರುವನ್ನು ಗೆಳೆಯ ಸೈಮನ್ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದನಾದರೂ ಬದುಕಲಿಲ್ಲ.
ಸಿಐಡಿಗೆ ವರ್ಗಾವಣೆ:
ಬೈಕ್ ಡಿಕ್ಕಿಯಾಗಿದ್ದ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಪೊಲೀಸರು ಹೇಳಿದ್ದರು. ಆದರೆ, ಗಲಾಟೆ ವೇಳೆ ಉರ್ದು ಭಾಷೆಯಲ್ಲಿ ಮಾತಾಡುವಂತೆ ಶಾಹಿದ್ ತಂಡ ಹೇಳಿದೆ. ಈ ವೇಳೆ ಉರ್ದು ಬರಲ್ಲ ಎಂದು ಕನ್ನಡದಲ್ಲೇ ಮಾತನಾಡಿದ ಚಂದ್ರುವನ್ನ ಚುಚ್ಚಿ ಕೊಲ್ಲಲಾಗಿದೆ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಹಾಗು ಬಿಜೆಪಿ ಮುಖಂಡ ಸಿ.ಟಿ.ರವಿ ಹೇಳಿದ್ದರು. ಈ ಪ್ರಕರಣ ವಿವಾದದ ಸ್ವರೂಪ ಪಡೆದಿತ್ತು. ಇದರ ಬೆನ್ನಲ್ಲೇ ತಮ್ಮ ಹೇಳಿಕೆಯನ್ನು ಗೃಹ ಸಷಿವರು ಹಿಂಪಡೆದಿದ್ದರು. ಪ್ರಕರಣದ ತನಿಖೆಯನ್ನ ಸಿಐಡಿಗೆ ವಹಿಸಲಾಗಿತ್ತು.
ತನಿಖೆ ನಡೆಸಿದ ಸಿಐಡಿ ಅಧಿಕಾರಿಗಳು, ನ್ಯಾಯಾಲಯಕ್ಕೆ ಇದೀಗ ಚಾರ್ಜ್ಶೀಟ್ ಸಲ್ಲಿಸಿದ್ದು, ಚಂದ್ರು ಸಾವಿಗೆ ಕಾರಣ ಏನೆಂದು ತಿಳಿಸಿದ್ದಾರೆ.
ಭಾಷೆ ವಿಚಾರಕ್ಕೆ ನಡೆದ ಕೊಲೆ :CID Change Sheet.
Previous Articleಸಿದ್ದರಾಮಯ್ಯ ನೀಡಿದ ಪರಿಹಾರ ಹಣ ಬಿಸಾಡಿ ಶಾಂತಿಗಾಗಿ ಮನವಿ ಮಾಡಿದ ಮಹಿಳೆ
Next Article ಅಪ್ರಾಪ್ತೆ ಅಪಹರಿಸಿ ಚಲಿಸುವ ಕಾರಿನಲ್ಲಿ ಗ್ಯಾಂಗ್ ರೇಪ್