ಮಂಗಳೂರು: ನಗರದ ಹೊರವಲಯದಲ್ಲಿರುವ ಮಳಲಿಯ ಮಸೀದಿಯಲ್ಲಿ ಹಿಂದೂ ದೇವಾಲಯ ಶೈಲಿ ಪತ್ತೆ ವಿವಾದಕ್ಕೆ ಸಂಬಂಧಿಸಿದಂತೆ ಮಂಗಳೂರು 3ನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯವು ಆ.1ಕ್ಕೆ ತೀರ್ಪು ಕಾಯ್ದಿರಿಸಿದೆ.
ಮಸೀದಿ ನವೀಕರಣ ವೇಳೆ ಹಿಂದೂ ದೇಗುಲ ಕುರುಹು ಪತ್ತೆಯಾದ ಹಿನ್ನೆಲೆಯಲ್ಲಿ ಮಳಲಿ ಮಸೀದಿಯ ಸರ್ವೆ ನಡೆಸುವಂತೆ ಕೋರಿ ಹಿಂದೂ ಸಂಘಟನೆ ಪರ ವಕೀಲರು ಪ್ರಬಲ ವಾದ ಮಂಡಿಸಿದ್ದಾರೆ. ಆದರೆ ಈ ವಾದವನ್ನು ಮಸೀದಿ ಪರ ವಕೀಲರು ವಿರೋಧಿಸಿದ್ದಾರೆ. ಮಸೀದಿಯು ವಕ್ಸ್ ಬೋರ್ಡ್ ಅಧೀನದಲ್ಲಿ ಇರುವುದರಿಂದ ಮರು ಸರ್ವೆ ನಡೆಸಲು ಅವಕಾಶ ನೀಡದೆ, ನವೀಕರಣ ಕಾಮಗಾರಿ ಮುಂದುವರಿಸಲು ಅವಕಾಶ ನೀಡಬೇಕೆಂದು ಆಗ್ರಹಿಸಿದ್ದರು.
ಈ ನಡುವೆ ಸಿವಿಲ್ ನ್ಯಾಯಾಲಯವು ತೀರ್ಪು ಪ್ರಕಟಿಸದಂತೆ ಸ್ಥಳೀಯ ನಿವಾಸಿಗಳಾದ ಮನೋಜ್ ಕುಮಾರ್ ಹಾಗು ಧನಂಜಯ ಮತ್ತಿತರರು ಸಲ್ಲಿಸಿರುವ ಅರ್ಜಿಯನ್ನು ರಾಜ್ಯ ಹೈಕೋರ್ಟ್ ವಜಾಗೊಳಿಸಿ ಆದೇಶಿಸಿತ್ತು. ಇದರ ಪ್ರತಿಯನ್ನು ಮಸೀದಿ ಪರ ವಕೀಲರು ಶುಕ್ರವಾರ ಸಿವಿಲ್ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹೈಕೋರ್ಟ್ನ ಆದೇಶ ಪ್ರತಿಯನ್ನು ಸ್ವೀಕರಿಸಿರುವ ಮಂಗಳೂರು ಮೂರನೇ ಸಿವಿಲ್ ನ್ಯಾಯಾಲಯವು ಹೆಚ್ಚುವರಿ ತೀರ್ಪನ್ನು ಆ.1ಕ್ಕೆ ಮುಂದೂಡಿದೆ.