ಬೆಂಗಳೂರು,ಏ.28:
ಲೋಕಸಭೆ ಚುನಾವಣೆ ಸೋಲಿನ ನಂತರ ಯಾವುದೇ ಚುನಾವಣೆ ರಾಜಕಾರಣದಲ್ಲಿ ತೊಡಗಿಕೊಳ್ಳದ ಮಾಜಿ ಸಂಸದ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಸಹೋದರ ಡಿಕೆ ಸುರೇಶ್ ಇದೀಗ ಮತ್ತೊಂದು ಉನ್ನತ ಹುದ್ದೆ ಅಲಂಕರಿಸಲು ತಂತ್ರಗಾರಿಕೆ ಆರಂಭಿಸಿದ್ದಾರೆ.
ಉಪಮುಖ್ಯಮಂತ್ರಿಯೂ ಆಗಿರುವ ತಮ್ಮ ಸಹೋದರನ ಜೊತೆಗೆ ಸೇರಿ ರಾಜಕೀಯ ಲೆಕ್ಕಾಚಾರ ಆರಂಭಿಸಿರುವ ಅವರು ಇದೀಗ ರಾಜ್ಯ ಹಾಲು ಒಕ್ಕೂಟದ (ಕೆಎಂಎಫ್ )ಅಧ್ಯಕ್ಷರಾಗಲು ಪ್ರಯತ್ನ ಆರಂಭಿಸಿದ್ದಾರೆ.
ಹಾಲಿ ಅಧ್ಯಕ್ಷರಾಗಿರುವ ಭೀಮಾ ನಾಯಕ್ ಅವರ ಅಧಿಕಾರಾವಧಿ ಪೂರ್ಣಗೊಳ್ಳುತ್ತಿದ್ದು ಅವರ ನಂತರದಲ್ಲಿ ಈ ಹುದ್ದೆ ಅಲಂಕರಿಸಲು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಸಹೋದರ ಹಾಗೂ ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಂತ್ರ ರೂಪಿಸುತ್ತಿರುವ ಬೆನ್ನಲ್ಲೇ ಡಿಕೆ ಶಿವಕುಮಾರ್ ಅಖಾಡಕ್ಕೆ ಇಳಿದಿದ್ದಾರೆ.
ಸಂಪುಟ ದರ್ಜೆಯ ಸಚಿವ ಸ್ಥಾನ ಹೊಂದಿರುವ ಈ ಹುದ್ದೆಯನ್ನು ತಮ್ಮ ಸೋದರನಿಗೆ ದೊರಕಿಸಿ ಕೊಡಬೇಕು ಎಂದು ಲೆಕ್ಕಾಚಾರ ಹಾಕುತ್ತಿರುವ ಅವರು ರಾಜ್ಯದ ಇತರ ಜಿಲ್ಲಾ ಹಾಲು ಒಕ್ಕೂಟಗಳಿಗೆ ತಮ್ಮ ಬೆಂಬಲಿಗರನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಜೊತೆಗೆ ಕೆಲವರನ್ನು ನಾಮನಿರ್ದೇಶನ ಮಾಡುವ ಅವಕಾಶ ಸರಕಾರಕ್ಕೆ ಇದೆ ಇದನ್ನು ಬಳಸಿಕೊಂಡು ತಮ್ಮ ಬೆಂಬಲಿಸರನ್ನು ಹೆಚ್ಚಿನ ಸಂಖ್ಯೆಯಲ್ಲಿ ಕೆಎಂಎಫ್ ನಿರ್ದೇಶಕರನ್ನಾಗಿ ಮಾಡುತ್ತಿರುವ ಡಿಕೆ ಶಿವಕುಮಾರ್ ಇವರ ಮೂಲಕ ತಮ್ಮ ಸೋದರ ಹಾಗೂ ಮಾಜಿ ಸಂಸದ ಡಿಕೆ ಸುರೇಶ ಅವರಿಗೆ ಉನ್ನತ ಹುದ್ದೆ ದೊರಕಿಸಿಕೊಡಲು ತಂತ್ರ ಹೆಣದಿದ್ದಾರೆ
ಇದರ ಭಾಗವಾಗಿ ಡಿ.ಕೆ. ಸುರೇಶ್ ಅವರು ತಮ್ಮ ತೋಟದ ಮನೆ ಇರುವ ಕನಕಪುರ ತಾಲ್ಲೂಕಿನ ಕೋಡಿಹಳ್ಳಿಯ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ 180 ದಿನ ಹಾಲು ಪೂರೈಕೆ ಮಾಡಿ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ಇದಾದ ನಂತರ ಅವರು ಬೆಂಗಳೂರು ಹಾಲು ಒಕ್ಕೂಟ(ಬಮೂಲ್) ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ.
ಬಮೂಲ್ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಸಂಘದಿಂದ ಡೆಲಿಗೇಷನ್ ಫಾರಂ ಸಹ ಪಡೆದಿರುವ ಅವರು, ಬಮೂಲ್ ಚುನಾವಣೆಯಲ್ಲಿ ಗೆದ್ದು ಕೆಎಂಎಫ್ ಅಧ್ಯಕ್ಷ ಸ್ಥಾನ ಅಲಂಕರಿಸಲು ಸಿದ್ಧತೆ ನಡೆಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ
ಬಮೂಲ್ ನ ಆರು ಕ್ಷೇತ್ರಗಳ ಪೈಕಿ, ಸುರೇಶ್ ತಮ್ಮ ತವರಾದ ಕನಕಪುರದಿಂದ ಕಣಕ್ಕಿಳಿಯಲಿದ್ದಾರೆ. ಅವರು ಅವಿರೋಧವಾಗಿ ಆಯ್ಕೆಯಾಗುವ ನಿಟ್ಟಿನಲ್ಲಿ ರಾಜಕೀಯ ತಂತ್ರಗಾರಿಕೆ ರೂಪಿಸಲಾಗಿದೆ
‘ಸದ್ಯ ಕನಕಪುರ ಕ್ಷೇತ್ರ ಪ್ರತಿನಿಧಿಸುತ್ತಿರುವ ಎಚ್.ಪಿ. ರಾಜಕುಮಾರ್ ಬಮೂಲ್ ಅಧ್ಯಕ್ಷರಾಗಿದ್ದಾರೆ. ಅವರು ಸುರೇಶ್ ಸ್ಪರ್ಧೆಗೆ ಯಾವುದೇ ತಕರಾರಿಲ್ಲದೆ ಬಿಟ್ಟು ಕೊಡುತ್ತಾರೆ. ಕನಕಪುರ ಮತ್ತು ಹಾರೋಹಳ್ಳಿ ಕ್ಷೇತ್ರದಲ್ಲಿ ಸಹೋದರರು ಯಾರನ್ನು ಸೂಚಿಸುತ್ತಾರೊ ಅವರೇ ನಿರ್ದೇಶಕರು. ಅಷ್ಟರ ಮಟ್ಟಿಗೆ ಅಲ್ಲಿ ಅವರ ಹಿಡಿತವಿದೆ. ಈ ಮೂಲಕ ಬಮೂಲ್ ಗೆ ಆಯ್ಕೆಯಾಗಿರುವ ಡಿಕೆ ಸುರೇಶ್ ಅವರು ಆನಂತರ ಕೆಎಂಎಫ್ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸಲು ಅರ್ಹತೆ ಪಡೆಯುತ್ತಾರೆ ಆನಂತರ ಬಹುತೇಕ ಜಿಲ್ಲಾ ಹಾಲು ಒಕ್ಕೂಟಗಳ ಬೆಂಬಲ ಪಡೆದಿರುವ ಅವರು ನಾಮ ನಿರ್ದೇಶಿತ ಸದಸ್ಯರ ನೆರವಿನೊಂದಿಗೆ ಕೆಎಂಎಫ್ ಅಧ್ಯಕ್ಷರಾಗಿ ಆಯ್ಕೆಯಾಗುವ ಸಾಧ್ಯತೆಗಳು ಹೆಚ್ಚಿವೆ ಎನ್ನುತ್ತವೆ ಉನ್ನತ ಮೂಲಗಳು.
