ಬೆಂಗಳೂರು, ಸೆ.28 – ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ನಾಳೆ ಕರ್ನಾಟಕ ಬಂದ್ ವೇಳೆ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ಬಸ್ ಸಂಚಾರ ನಡೆಸಲು ಕೆಎಸ್ಆರ್ಟಿಸಿ (KSRTC) ಹಾಗೂ ಬಿಎಂಪಿಟಿಸಿ ತೀರ್ಮಾನಿಸಿ ನೌಕರರಿಗೆ ನಾಳೆ ಕಡ್ಡಾಯ ಹಾಜರಾತಿಗೆ ಸೂಚನೆ ನೀಡಲಾಗಿದೆ.
ದೀರ್ಘಾವಧಿ,ವಾರದ ರಜೆ ಹೊರತುಪಡಿಸಿ ನೌಕರರು ಹೊರತುಪಡಿಸಿ ಉಳಿದ ಎಲ್ಲಾ ನೌಕರರು ಕಡ್ಡಾಯವಾಗಿ ನಾಳೆ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ನೌಕರರಿಗೆ ಸಾರಿಗೆ ನಿಗಮಗಳು ಮೌಖಿಕ ಸೂಚನೆ ನೀಡಿವೆ.
ಸಾರಿಗೆ ನಿಗಮಗಳು ಅಗತ್ಯ ಸೇವೆಗಳ ಅಡಿಯಲ್ಲಿ ಬರುವುದರರಿಂದ ಸೇವೆ ನೀಡಬೇಕು. ಹೀಗಾಗಿ ಯಾರು ಸಹ ನಾಳಿನ ಬಂದ್ ನಲ್ಲಿ ಭಾಗಿಯಾಗುವಂತಿಲ್ಲ. ಒಂದು ವೇಳೆ ಕೆಲಕ್ಕೆ ಗೈರು ಆಗಿ ಬಂದ್ ನಲ್ಲಿ ಭಾಗಿಯಾದ್ರೆ ಅಂತವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುವುದಾಗಿ ಎಚ್ಚರಿಕೆ ನೀಡಲಾಗಿದೆ.
ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಸಾರ್ವಜನಿಕರ ಆಸ್ತಿಗೆ ಹಾನಿಯಾಗದಂತೆ ಬಿಎಂಟಿಸಿ ನಿಗಮ ಮುಂಜಾಗ್ರತಾ ಕ್ರಮಕೈಗೊಂಡಿದೆ. ಬಿಎಂಟಿಸಿ ಎಲ್ಲ ಡಿಪೋಗಳಿಗೂ ಪೊಲೀಸ್ ಭದ್ರತೆ ನೀಡುವಂತೆ ನಿಗಮ ಮನವಿ ಮಾಡಿದೆ. ಅಲ್ಲದೇ ಬಸ್ ನಿಲ್ದಾಣಗಳಲ್ಲೂ ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಿದೆ. ಈ ಮೂಲಕ ಬಿಎಂಟಿಸಿ ಬಸ್ ರಸ್ತೆಗಿಳಿದಾಗ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಮುಂದಾಗಿದೆ.
ಡಿಪೋ ಮ್ಯಾನೇಜರ್ ಗಳು ಕಡ್ಡಾಯವಾಗಿ ಡಿಪೋದಲ್ಲಿದ್ದು ಬಸ್ ಕಾರ್ಯಚರಣೆ ನಡೆಸುವಂತೆ ಸೂಚನೆ ನೀಡಲಾಗಿದ್ದು, ಸಾರ್ವಜನಿಕರಿಗೆ ತೊಂದರೆಯಾಗದಂತೆ ಬಸ್ ಗಳ ಕಾರ್ಯಚರಣೆ ಮಾಡಲು ವ್ಯವಸ್ಥೆ ಮಾಡಿಕೊಳ್ಳುವಂತೆ ತಿಳಿಸಲಾಗಿದೆ.