ಬೆಂಗಳೂರು, ಏ.17- ಬಿರು ಬೇಸಿಗೆಯ ಹಿನ್ನೆಲೆಯಲ್ಲಿ ನಾಳೆಯಿಂದ (ಏ.18) ಮೇ 31 ರವರೆಗೆ ಜಿಲ್ಲಾ ಮತ್ತು ವಿಚಾರಣಾಧೀನ ನ್ಯಾಯಾಲಯಗಳಲ್ಲಿ ವಕೀಲರು ಕಪ್ಪು ಕೋಟ್ ಧರಿಸದೇ ಕಲಾಪದಲ್ಲಿ ಭಾಗಿಯಾಗಲು ವಿನಾಯಿತಿ ನೀಡಲಾಗಿದೆ.
ವಕೀಲರು ಕಪ್ಪು ಕೋಟ್ ಧರಿಸದೇ ಕಲಾಪದಲ್ಲಿ ಭಾಗಿಯಾಗಲು ವಿನಾಯಿತಿ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಹೈಕೋರ್ಟ್ ಸುತ್ತೋಲೆ ಹೊರಡಿಸಿದೆ.
ಬೆಂಗಳೂರು ವಕೀಲರ ಸಂಘದ ಅಧ್ಯಕ್ಷರು ಕಳೆದ ಏ. 5ರಂದು ನೀಡಿರುವ ಮನವಿ ಆಧರಿಸಿ ಏಪ್ರಿಲ್ 16 ರಂದು ನಡೆದಿರುವ ಪೂರ್ಣ ನ್ಯಾಯಾಲಯದಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ದೈನಂದಿನ ಸೂಚಿತ ಡ್ರೆಸ್ ಬದಲಾಗಿ ವಕೀಲರು ಶ್ವೇತವರ್ಣದ ಶರ್ಟ್ ಅಥವಾ ಯಾವುದೇ ಬಣ್ಣದ ಗಂಭೀರತೆ ಬಿಂಬಿಸುವ ಶ್ವೇತವರ್ಣದ ಸಲ್ವಾರ್ ಕಮೀಜ್ ಇಲ್ಲವೇ ಸೀರೆ ಜೊತೆಗೆ ಸಾದಾ ಶ್ವೇತ ವರ್ಣದ ಕುತ್ತಿಗೆ ಬ್ಯಾಂಡ್ ಧರಿಸಿ ಕಲಾಪದಲ್ಲಿ ಭಾಗಿಯಾಗಬಹುದು ಎಂದು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಕೆ.ಎಸ್.ಭರತ್ ಕುಮಾರ್ ತಿಳಿಸಿದ್ದಾರೆ.