ಚಿಕ್ಕಮಗಳೂರು,ಜೂ.10-ರಸ್ತೆ ಬದಿ ನಿಂತು ಚಿರತೆ ಚರ್ಮ ಮಾರಾಟಕ್ಕೆ ಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ಅರಣ್ಯ ಇಲಾಖೆ ಸಂಚಾರಿ ಪೊಲೀಸರು ಬಂಧಿಸಿದ್ದಾರೆ. ಇಂದಾವರದ ಪರ್ವತ, ಎಪಿಎಂಸಿ ಮಾರ್ಕೆಟ್ನಲ್ಲಿ ರೈಟರ್ ಕೆಲಸ ಮಾಡುವ ಕಾಂತರಾಜ್ ಹಾಗು ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಶ್ರೀನಿವಾಸ್ ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತರು ಚಿರತೆ ಚರ್ಮವನ್ನು ಕಳೆದ ವರ್ಷವೇ ಮರಣ ಹೊಂದಿದ ಓರ್ವ ವ್ಯಕ್ತಿಯಿಂದ ಖರೀದಿಸಿದ್ದರು ಎಂದು ಹೇಳಲಾಗಿದೆ. ಅಂದಿನಿಂದಲೂ ಚಿರತೆ ಚರ್ಮವನ್ನು ಮಾರಾಟ ಮಾಡಲು ಗಿರಾಕಿಗಳಿಗಾಗಿ ಹುಡುಕಾಡುತ್ತಿದ್ದು ಯಾರೂ ಸಿಕ್ಕಿರಲಿಲ್ಲ.
ಇಂದಾವರ ಫ್ಯಾಕ್ಟರಿ ಬಡಾವಣೆಯ ಮಲ್ನಾಡ್ ಸಮುದಾಯ ಭವನದ ಬಳಿ ನಿಂತು ಗಿರಾಕಿಗಳಿಗಾಗಿ ಕಾಯುವಾಗ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅರಣ್ಯ ಸಂಚಾರಿ ದಳದ ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಈ ಕಾರ್ಯಾಚರಣೆಗೆ ಮಡಿಕೇರಿ ಅರಣ್ಯ ಘಟಕದ ಎಸ್ಪಿ ಚಂದ್ರಕಾಂತ್ ಮಾರ್ಗದರ್ಶನದಲ್ಲಿ ಕೈಗೊಳ್ಳಲಾಗಿದೆ.