ಬೆಂಗಳೂರು,ಫೆ.3-
ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಚೌಕಟ್ಟು ಬಿದ್ದು ತಾಯಿ ಹಾಗೂ ಮಗು ಮೃತಪಟ್ಟ ಪ್ರಕರಣ ಸಂಬಂಧ ಗೋವಿಂದಪುರ ಪೊಲೀಸರು ಇಲ್ಲಿಯವರೆಗೆ 7 ಬಿಎಂಆರ್ಸಿಎಲ್ (BMRCL) ಅಧಿಕಾರಿಗಳು ಹಾಗೂ 18 ಎನ್ಸಿಸಿ ಸಿಬ್ಬಂದಿಗಳಿಗೆ ನೋಟಿಸ್ ನೀಡಿ ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆ ವೇಳೆ ಅವೈಜ್ಞಾನಿಕ ಕಾಮಗಾರಿ, ನಿರ್ಲಕ್ಷ್ಯವನ್ನು ಒಪ್ಪಿಕೊಳ್ಳದ BMRCL ಅಧಿಕಾರಿಗಳು, ಗುತ್ತಿಗೆ ನೀಡಿದ್ದೇವೆ ಇದರಲ್ಲಿ ನಮ್ಮ ಪಾತ್ರ ಇಲ್ಲ ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ. ಇನ್ನು ಗುತ್ತಿಗೆ ಪಡೆದಿರುವ ನಾಗಾರ್ಜುನ ಕನ್ಸ್ಟ್ರಕ್ಷನ್ ಕಂಪನಿ ಬೇರೆಯದೆ ವರಸೆ ತೆಗೆದಿದೆ. ಗುತ್ತಿಗೆ ಕಂಪನಿ ಯೋಜನೆಯಂತೆ ಕಾಮಗಾರಿ ನಡೆಸಿದ್ದೇವೆ ಆದರೆ ನಮ್ಮದೇನು ತಪ್ಪಿಲ್ಲ ಎಂದಿದೆ. ಈ ಮಧ್ಯೆ ಹೈದರಾಬಾದ್ನ ಐಐಟಿ ತಂಡ ಮತ್ತೊಂದು ತನಿಖಾ ವರದಿಯನ್ನು ಎರಡು ದಿನಗಳಲ್ಲಿ ಪೊಲೀಸರಿಗೆ ನೀಡಲಿದೆ. ಈಗಾಗಲೇ ಹೈದರಾಬಾದ್ನ ಐಐಟಿ ತಜ್ಞರ ತಂಡ ಸಲ್ಲಿಸಿರುವ ಒಂದು ವರದಿಯಲ್ಲಿ ದುರಂತಕ್ಕೆ ಪಿಲ್ಲರ್ನ ಆಸರೆ ವ್ಯವಸ್ಥೆ (Support System) ವೈಫಲ್ಯ ಕಾರಣವಾಗಿದೆ ಎಂದು ತಿಳಿಸಿದೆ.
ದುರಂತದ ಬಳಿಕ ತಜ್ಞರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಜ.18 ರಂದು ವರದಿ ನೀಡಿದ್ದು, ಮೆಟ್ರೋ ಪಿಲ್ಲರ್ ನಿರ್ಮಿಸುವಾಗ ಅದಕ್ಕೆ ರಾಡ್, ಇತರೆ ವಸ್ತುಗಳನ್ನು ಬಳಸಿ ಆಸರೆ ( ಸಪೋರ್ಟ್) ನೀಡಬೇಕು. ಆದರೆ ಈ ಮೆಟ್ರೋ ಪಿಲ್ಲರ್ಗೆ ಸರಿಯಾದ ರೀತಿಯಲ್ಲಿ ಸಪೋರ್ಟ್ ನೀಡಿರಲಿಲ್ಲ. ಹೀಗಾಗಿ ಮೆಟ್ರೋ ಪಿಲ್ಲರ್ ವಾಲಿ ಕೆಲವೇ ಕ್ಷಣಗಳಲ್ಲಿ ನೆಲಕ್ಕೆ ಬಿದ್ದಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಈ ನಡುವೆ ಹೈಕೋರ್ಟ್ ಸ್ವಯಂ ಪ್ರೇರಿತವಾಗಿ ಮೊಕದ್ದಮೆ ದಾಖಲಿಸಿಕೊಂಡು ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡಿದೆ.
‘ಪ್ರಕರಣದ ಸಂಬಂಧ ಮಾಧ್ಯಮಗಳ ಸುದ್ದಿ ಆಧರಿಸಿ ಸಾರ್ವಜನಿಕರ ಹಿತ ದೃಷ್ಟಿಯಿಂದ ಸ್ವಯಂಪ್ರೇರಿತವಾಗಿ ಪ್ರಕರಣ ಕೈಗೆತಿಕೊಂಡಿದ್ದೇವೆ’ ಎಂದು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ ಅವರ ನೇತೃತ್ವದ ಪೀಠ ಹೇಳಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ BMRCL, BBMP ಮತ್ತು ಸಂಬಂಧಪಟ್ಟ ಗುತ್ತಿಗೆದಾರರನ್ನು ಪ್ರತಿವಾದಿಗಳನ್ನಾಗಿಸಲು ಸೂಚನೆ ನೀಡಿದೆ. ‘ಈ ಪ್ರಕರಣವು ಸಾರ್ವಜನಿಕರಲ್ಲಿ ಕಳವಳ ಮತ್ತು ಸುರಕ್ಷತಾ ಕ್ರಮಗಳ ಕುರಿತು ಪ್ರಶ್ನೆ ಮೂಡಿಸುತ್ತದೆ. ಕಾಮಗಾರಿ ನಡೆಯುವ ಸಂದರ್ಭದಲ್ಲಿ ಯಾವೆಲ್ಲಾ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡಿದ್ದೀರಿ? ಮತ್ತು ಟೆಂಡರ್ ನೀಡುವ ಸಂದರ್ಭದಲ್ಲಿ ಸುರಕ್ಷರತೆಯು ಟೆಂಡರ್ನ ಭಾಗವಾಗಿರಲಿಲ್ಲವೇ? ಟೆಂಡರ್ ಸಮಯದಲ್ಲಿ ಸರ್ಕಾರ ಸೂಚಿಸಿದ ಸುರಕ್ಷತಾ ಕ್ರಮಗಳನ್ನು ಗುತ್ತಿಗೆದಾರರು ಪಾಲಿಸಿದ್ದಾರೆಯೇ?’ ಎಂದು ಪ್ರಶ್ನೆ ಮಾಡಿದೆ.