ಬೆಂಗಳೂರು, ಮಾ.19- ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ ಡಿ ಎ ಮೈತ್ರಿಕೂಟ ಗೆಲುವು ಸಾಧಿಸುವ ಮೂಲಕ ನರೇಂದ್ರ ಮೋದಿ ಮತ್ತೊಮ್ಮೆ ದೇಶದ ಪ್ರಧಾನಿಯಾಗಬೇಕು ಎಂದು ಪ್ರತಿಪಾದಿಸುತ್ತಿರುವ ಬಿಜೆಪಿ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬೇಡಿಕೆಯ ಪಟ್ಟಿ ಮುಂದೆ ಇಟ್ಟಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ತಮ್ಮ ಬೇಡಿಕೆಗಳ ಪಟ್ಟಿಯನ್ನು ಹಾಕಿರುವ ಯತ್ನಾಳ್ ಅವರು ಭಾರತವನ್ನು ಹಿಂದೂ ರಾಷ್ಟ್ರ ಎಂದು ಘೋಷಿಸುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಅಲ್ಪಸಂಖ್ಯಾತರ ತುಷ್ಟಿಕರಣ ನೀತಿಯನ್ನು ಎಲ್ಲ ಸರ್ಕಾರಗಳು ಕೈ ಬಿಡಬೇಕು ಬಹು ಸಂಖ್ಯಾತರ ಹಿತಾಸಕ್ತಿಗೆ ಅನುಗುಣವಾಗಿ ಸರ್ಕಾರಗಳು ಕೆಲಸ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ವಕ್ಫ್ ಬೋರ್ಡ್ ಅನ್ನು ನಿಷೇಧಿಸಬೇಕು.
ಯತ್ನಾಳ್ ಅವರು ಮಂಡಿಸಿರುವ ಬೇಡಿಕೆಗಳ ಪಟ್ಟಿ ಹೀಗಿದೆ:
ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಘೋಷಿಸಬೇಕು.
ಸರ್ವೋಚ್ಚ ನ್ಯಾಯಾಲಯದಲ್ಲಿರುವ ಕೊಲಿಜಿಯಂ ವ್ಯವಸ್ಥೆಯನ್ನು ಕೊನೆಗೊಳಿಸಬೇಕು.
ಭಾರತೀಯ ಯುವಕರೆಲ್ಲರಿಗೂ ‘ಅಗ್ನಿವೀರ' ಯೋಜನೆಯನ್ನು ಕಡ್ಡಾಯಗೊಳಿಸಬೇಕು.
ಮಸೀದಿಯಲ್ಲಿರುವ ಧ್ವನಿವರ್ಧಕಗಳನ್ನು ತೆರವುಗೊಳಿಸಬೇಕು.
ಸರ್ಕಾರದ ನಿಯಂತ್ರಣದಿಂದ ಹಿಂದೂ ದೇವಾಲಯಗಳನ್ನು ಮುಕ್ತಗೊಳಿಸಬೇಕು.
ಶಾಲೆಗಳಲ್ಲಿ ಭಗವದ್ಗೀತೆ, ರಾಮಾಯಣ, ಮಹಾಭಾರತದ ಬೋಧನೆಯನ್ನು ಕಡ್ಡಾಯಗೊಳಿಸಬೇಕು.
ಶಾಲೆಗಳಲ್ಲಿ ಯೋಗ ಕಲಿಸುವುದನ್ನು ಕಡ್ಡಾಯಗೊಳಿಸಬೇಕು.
ಭಾರತ ವಿರೋಧಿ ಚಟುವಟಿಕೆಗಳಲ್ಲಿ ನಿರತರಾಗಿರುವರ ಸಾಗರೋತ್ತರ ಭಾರತೀಯ ನಾಗರಿಕ (ಒಸಿಐ) ಕಾರ್ಡ್ ಅನ್ನು ನಿಷೇಧಿಸಬೇಕು.
ರಾಷ್ಟ್ರೀಯ ಪೌರತ್ವ ನೋಂದಣಿಯನ್ನು (ಎನ್ಆರ್ಸಿ) ಸಂಪೂರ್ಣಗೊಳಿಸಬೇಕು.
ಅತ್ಯಾಚಾರ, ದರೋಡೆ, ದೇಶ ವಿರೋಧಿ ಚಟುವಟಿಕೆ, ಕೊಲೆ, ಸುಲಿಗೆ, ಸಾರ್ವಜನಿಕ ಆಸ್ತಿ ಹಾನಿ ಮಾಡಿದವರ ವಿರುದ್ಧ ಶೀಘ್ರ ನ್ಯಾಯ ಪಡೆಯುವುದಕ್ಕೆ ತ್ವರಿತ ಗತಿಯ ನ್ಯಾಯಾಲಯಗಳ ಸ್ಥಾಪನೆ ಮಾಡಬೇಕೆಂದು ಆ ಗ್ರಹಿಸಿದ್ದಾರೆ.