ಬೆಂಗಳೂರು – ನೆನೆಗುದಿಗೆ ಬಿದ್ದಿರುವ ರಾಜ್ಯದ ನಿಗಮ ಮತ್ತು ಮಂಡಳಿ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಿದ ಬೆನ್ನಲ್ಲೇ ಸಾಕಷ್ಟು ಗೊಂದಲ,ಅಸಮಾಧಾನಗಳು ಕೇಳಿಬಂದಿವೆ.
ಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟುವ ಹಲವು ಮಂದಿ ಶಾಸಕರು ನಿಗಮ ಮಂಡಳಿ (Nigama Mandali) ಅಧ್ಯಕ್ಷ ಸ್ಥಾನದ ಪ್ರಸ್ತಾವನೆಯನ್ನು ನಯವಾಗಿಯೇ ತಿರಸ್ಕರಿಸಿದ್ದಾರೆ ಮತ್ತೆ ಕೆಲವರು ನಿರ್ದಿಷ್ಟ ನಿಗಮದ ಅಧ್ಯಕ್ಷ ಸ್ಥಾನ ಬೇಕು ಎಂದು ಪಟ್ಟು ಹಿಡಿದಿರುವುದು ಪಕ್ಷದ ನಾಯಕತ್ವಕ್ಕೆ ಸವಾಲಾಗಿದೆ.
ಕಳೆದ ರಾತ್ರಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ನಾಯಕ ಸುರ್ಜೇವಾಲ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮೊದಲಿಗೆ ಎಲ್ಲ ಪ್ರಮುಖ ಶಾಸಕರಿಗೆ ನಿಗಮ ಮಂಡಳಿಗಳ (Nigama Mandali) ಅಧ್ಯಕ್ಷ ಸ್ಥಾನ ನೀಡಬೇಕು ಹಾಗೂ ನಂತರದಲ್ಲಿ ಉಳಿಯುವ ಸ್ಥಾನಗಳನ್ನು ಕಾರ್ಯಕರ್ತರಿಗೆ ಹಂಚಿಕೆ ಮಾಡಬೇಕು ಎಂಬ ತೀರ್ಮಾನ ಕೈಗೊಳ್ಳಲಾಗಿದೆ.
ಕಾರ್ಯಕರ್ತರಿಗೆ ಸ್ಥಾನಮಾನ ನೀಡುವ ಸಮಯದಲ್ಲಿ ಕಳೆದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮತ್ತು ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಅವಕಾಶ ನೀಡಿದವರಿಗೆ ಈ ಬಾರಿ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಇವರ ಬದಲಾಗಿ ಹೊಸಬರಿಗೆ ಆದ್ಯತೆ ನೀಡಬೇಕು ಎಂಬ ನಿರ್ಧಾರಕ್ಕೆ ಬರಲಾಗಿದೆ.
28ಕ್ಕೆ ಮತ್ತೊಂದು ಸುತ್ತಿನ ಸಭೆ:
ಈ ಕುರಿತಂತೆ ಸುದ್ದಿಗಾರರಿಗೆ ಮಾಹಿತಿ ನೀಡಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್
ನಿಗಮ ಮಂಡಳಿ ನೇಮಕ ವಿಚಾರವಾಗಿ ಚರ್ಚೆ ಮಾಡುತ್ತಿದ್ದೇವೆ. ಹಿರಿಯ ನಾಯಕರು, ಶಾಸಕರ ಅಭಿಪ್ರಾಯವನ್ನು ಪಡೆಯುತ್ತಿದ್ದೇವೆ. ನಾನು ಹಾಗೂ ಮುಖ್ಯಮಂತ್ರಿಗಳು ತೆಲಂಗಾಣ ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ಹೋಗಬೇಕಿದೆ. 28ರಂದು ನಮ್ಮ ದೆಹಲಿ ನಾಯಕರು ಮತ್ತೆ ರಾಜ್ಯಕ್ಕೆ ಆಗಮಿಸುತ್ತಿದ್ದು, ಆ ಸಭೆ ಬಳಿಕ ನಮ್ಮ ಪಟ್ಟಿಯನ್ನು ಹೈಕಮಾಂಡ್ ನಾಯಕರಿಗೆ ಕಳುಹಿಸುತ್ತೇವೆ” ಎಂದರು.
ಗೃಹಮಂತ್ರಿಗಳು ಅವರ ಬೆಂಬಲಿಗರಿಗೆ ನಿಗಮ ಮಂಡಳಿ ಸ್ಥಾನದ ವಿಚಾರವಾಗಿ ಬೇಸರವಾಗಿದೆ ಎಂದು ಕೇಳಿದಾಗ, “ಇಲ್ಲಿ ಅವರ ಬೆಂಬಲಿಗರು, ನನ್ನ ಬೆಂಬಲಿಗರು ಎಂಬುದಿಲ್ಲ. ಎಲ್ಲ ಒಟ್ಟಾಗಿ ಕಾಂಗ್ರೆಸ್ ಬೆಂಬಲಿಗರು. ನನಗೆ, ಸಿಎಂ, ಗೃಹ ಸಚಿವರಿಗೆ ಬೆಂಬಲಿಗರು ಇಲ್ಲ. ಇರುವವರೆಲ್ಲಾ ಕಾಂಗ್ರೆಸ್ ಬೆಂಬಲಿಗರು. ಮಂತ್ರಿಗಿರಿ ಸಿಗದ ಹಿರಿಯ ಶಾಸಕರಿಗೆ ನಿಗಮ ಮಂಡಳಿ ಸ್ಥಾನ ನೀಡುವ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ” ಎಂದು ತಿಳಿಸಿದರು.
ಹರಾಜು ಪ್ರಕ್ರಿಯೆ:
ಮತ್ತೊಂದೆಡೆ,ವರ್ಗಾವಣೆಯನ್ನು ಫೋನ್ ಕರೆಯಲ್ಲೇ ನಿಭಾಯಿಸುವ ವ್ಯವಸ್ಥಿತ ದಂಧೆಯನ್ನಾಗಿ ಮಾಡಿಕೊಂಡಿರುವ ಸಿದ್ದರಾಮಯ್ಯನವರ ಸರ್ಕಾರ ನಿಗಮ ಮಂಡಳಿ ಹರಾಜಿಗೆ ಇಷ್ಟು ದಿನ ಕಾಯುತ್ತಿತ್ತು. ಈ ಹಿಂದೆ ವ್ಯವಹಾರ ಸರಿಯಾಗಿ ಕುದುರದ ಕಾರಣ ಮುಂದೂಡಲಾಗಿದ್ದ ನಿಗಮ ಮಂಡಳಿ ಹುದ್ದೆಗಳ ಹರಾಜು ಪ್ರಕ್ರಿಯೆ ಬಗ್ಗೆ ಸುರ್ಜೆವಾಲ ಅವರು ದೆಹಲಿಯಿಂದ ಬಂದು ಸಮಾಲೋಚನೆಗಳನ್ನು ನಡೆಸಿದ್ದಾರೆ.ಎಂದು ಬಿಜೆಪಿ ವ್ಯಾಖ್ಯಾನಿಸಿದೆ.
ಹರಾಜು ನಡೆಯುತ್ತಿರುವ ಪರಿಣಾಮವಾಗಿ ನಿಗಮ ಮಂಡಳಿ ಹುದ್ದೆಗೆ ಕೊಡಬೇಕಾದ ಕಲೆಕ್ಷನ್ ಪ್ರಮಾಣ ಮತ್ತೆ ಚರ್ಚೆಗೆ ಬಂದಿದೆ ಎಂದು ಬಿಜೆಪಿ ಟೀಕಿಸಿದೆ.
ನಿಗಮ, ಮಂಡಳಿಗಳನ್ನು ಪಡೆಯಲು ಕೋಟಿ ಕೋಟಿ ಹಣ ಕೊಡಬೇಕು ಎಂದು ಆರೋಪಿಸಿರುವ ಬಿಜೆಪಿ, ಕಲೆಕ್ಷನ್ ಪಟ್ಟಿಯನ್ನು ಸಿದ್ದರಾಮಯ್ಯ ಚಿತ್ರದ ಜೊತೆ ಪೋಸ್ಟ್ ಮಾಡಿದೆ.
ಜನನ, ಮರಣ ಪ್ರಮಾಣಪತ್ರ ಪಡೆಯುವುದು ಮೂಲಭೂತ ಹಕ್ಕು ಎಂಬ ಕಾರಣಕ್ಕೆ ಅದನ್ನು ಇದುವರೆಗೂ ಉಚಿತವಾಗಿ ನೀಡಲಾಗುತ್ತಿತ್ತು. ಆದರೆ ಅದರ ಮೇಲೆಯೂ ₹100 ರಿಂದ ₹1000ದವರೆಗೂ ಶುಲ್ಕ ವಿಧಿಸಿ ಮರಣದಲ್ಲೂ ದಂಧೆ ನಡೆಸಲು ಕಾಂಗ್ರೆಸ್ ಸರ್ಕಾರ ಮುಂದಾಗಿರುವುದು ಅತಿ ಖಂಡನೀಯ ಎಂದಿದೆ.