ಬೆಂಗಳೂರು.ಜ, 22: ಲೋಕಸಭೆ ಚುನಾವಣೆಗೆ ಮುನ್ನ ನಿಗಮ ಮಂಡಳಿಗಳ (Nigama Mandali) ನೇಮಕಾತಿ ಆದೇಶ ಹೊರಡಿಸುವ ಮೂಲಕ ಕಾಂಗ್ರೆಸ್ ಕಾರ್ಯಕರ್ತರ ಬಹುದಿನದ ಕನಸು ನನಸಾಗಲಿದೆ ಎಂದು ಭಾವಿಸಿದವರಿಗೆ ಇದೀಗ ಕಾಣದ ಕೈಗಳ ಹಸ್ತಕ್ಷೇಪ ನಿರಾಸೆ ತಂದೊಡ್ಡಿದೆ.
ವಿಧಾನಸಭೆಗೆ ಸತತವಾಗಿ ಆಯ್ಕೆಯಾಗುತ್ತಿರುವ ಕೆಲವು ಪ್ರಭಾವಿ ಶಾಸಕರಿಗೆ ಮಂತ್ರಿ ಸ್ಥಾನ ಕೊಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಅವರನ್ನು ಪ್ರಭಾವಿ ನಿಗಮ ಮಂಡಳಿಗಳ ಅಧ್ಯಕ್ಷರನ್ನಾಗಿ ನೇಮಕ ಮಾಡುವ ಮೂಲಕ ಸಮಾಧಾನ ಪಡಿಸಲು ತೀರ್ಮಾನಿಸಲಾಗಿತ್ತು.
ಇದರ ಜೊತೆಗೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅನಿವಾರ್ಯ ಕಾರಣಗಳಿಂದ ಸ್ಪರ್ಧಿಸಲಾಗದೆ ಹೈಕಮಾಂಡ್ ಆದೇಶವನ್ನು ಪಾಲಿಸಿದ್ದ ಕೆಲವು ನಾಯಕರು ಮತ್ತು ಪಕ್ಷಕ್ಕಾಗಿ ದುಡಿದ ನಿಷ್ಠಾವಂತ ಕಾರ್ಯಕರ್ತರಿಗೆ ನಿಗಮ ಮಂಡಳಿಗಳಲ್ಲಿ ಅವಕಾಶ ನೀಡುವ ಮೂಲಕ ಅವರನ್ನು ಗುರುತಿಸುವ ಕೆಲಸ ಮಾಡಲು ತೀರ್ಮಾನಿಸಲಾಗಿತ್ತು.
ಅದರಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಪಕ್ಷದ ಹಲವು ನಾಯಕರ ಜೊತೆ ಸತತ ಸಮಾಲೋಚನೆ ನಡೆಸಿ ಪಟ್ಟಿ ಒಂದನ್ನು ಸಿದ್ಧಪಡಿಸಿದ್ದರು.
ನಿಗಮ– ಮಂಡಳಿಗಳಿಗೆ 37 ಶಾಸಕರು, 39 ಕಾರ್ಯಕರ್ತರ ಪಟ್ಟಿ ಸಿದ್ಧಪಡಿಸಿ,ಹೈಕಮಾಂಡ್ ಅನುಮೋದನೆ ನೀಡಲಾಗಿತ್ತು.ಈ ಪಟ್ಟಿಯ ಬಗ್ಗೆ ಹಲವು ಸುತ್ತಿನ ಸಮಾಲೋಚನೆ ನಡೆಸಿದ ಹೈಕಮಾಂಡ್ ಅನುಮೋದನೆ ನೀಡಿತ್ತು.ಇದಾದ ನಂತರ ಇನ್ನೇನು ಅಧಿಕೃತವಾಗಿ ಆದೇಶದ ಮೂಲಕ ನೇಮಕಾತಿ ನಿರ್ಧಾರ ಹೊರಬೀಳಲಿದೆ ಎಂದು ಹೇಳಲಾಗಿತ್ತು.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಂತೂ ಕೆಲವೇ ಸೆಕೆಂಡ್ ಗಳಲ್ಲಿ ನೇಮಕಾತಿ ಆದೇಶ ಹೊರಬೀಳಲಿದೆ ಎಂದು ಹೇಳಿದರು. ಈ ಹೇಳಿಕೆ ಹೊರಬಿದ್ದು ನಾಲ್ಕು ದಿನಗಳಾದರೂ ನೇಮಕಾತಿ ಆದೇಶ ಹೊರಬೀಳಲಿಲ್ಲ.ಈಗ-ಆಗ ನೇಮಕ ಆದೇಶ ಬರಲಿದೆ ಎಂದು ಕಾದು ಕುಳಿತಿದ್ದ ಆಕಾಂಕ್ಷಿಗಳು ಕಾದು ಕುಳಿತದ್ದಷ್ಟೇ ಬಂತು ಆದೇಶ ಹೊರಬೀಳಲಿಲ್ಲ.
ರಾಜ್ಯ ನಾಯಕರು ಹೈಕಮಾಂಡ್ ಗೆ ಮಾಡಿದ್ದ ಶಿಫಾರಸಸ್ಸಿನ ಪಟ್ಟಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರ ಸಹಿ ಹಾಕಿ ರವಾನಿಸಿದ್ದರು.ಅವರ ಸಹಿ ಹೊಂದಿದ್ದ ಪಟ್ಟಿ ಬಿಡುಗಡೆ ಆಗುವ ಮೊದಲೇ ಪಕ್ಷದ ವಲಯದಲ್ಲಿ ಬಹಿರಂಗವಾಗಿತ್ತು.
ಆದರೆ, ಇನ್ನೇನು ಪಟ್ಟಿ ಪ್ರಕಟ ಸರ್ಕಾರದ ಆದೇಶದೊಂದಿಗೆ ಹೊರ ಬರಲಿದೆ ಎನ್ನುತ್ತಿರುವಾಗ ಅದು ಹೊರಬರಲಿಲ್ಲ.ಇದಕ್ಕೆ ಪ್ರಮುಖ ಕಾರಣ ಕಾಣದ ಕೈಗಳ ಹಸ್ತಕ್ಷೇಪ ಎನ್ನಲಾಗಿದೆ. ಎಐಸಿಸಿ ಅನುಮೋದಿಸಿ ವೇಣುಗೋಪಾಲ್ ಅವರು ರವಾನಿಸಿದ್ದ ಪಟ್ಟಿಯಲ್ಲಿ ಕೆಲವು ಹೆಸರುಗಳು ನುಸುಳಿದ್ದವು.
ಕಲಬುರಗಿ ಭಾಗದ ಲಲಿತ್ ರಾಘವ್, ಸಿ. ನರೇಂದ್ರ, ಮಝರ್ ಖಾನ್, ಜಗದೇವ ಗುತ್ತೆದಾರ ಅವರು ಹೆಸರು ನಿಗಮ ಮಂಡಳಿ ಪಟ್ಟಿಯಲ್ಲಿತ್ತು. ತಾವು ಪಟ್ಟಿ ರಚನೆ ಸಮಯದಲ್ಲಿ ಹೈಕಮಾಂಡ್ ಜೊತೆ ನಡೆದ ಚರ್ಚೆಯಲ್ಲಿ ಈ ಹೆಸರುಗಳ ಪ್ರಸ್ತಾಪವಾಗಲಿಲ್ಲ. ರಾಜ್ಯದ ನಾಯಕರ ಚರ್ಚೆ ಸಮಯದಲ್ಲೂ ಇವುಗಳು ಇರಲಿಲ್ಲ ಈಗ ಏಕಾಏಕಿ ಯಾವುದೇ ಮಾಹಿತಿಯನ್ನೇ ನೀಡದೆ ಕೆಲವು ಕಾರ್ಯಕರ್ತರ ಹೆಸರನ್ನು ಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗಿದೆ ಎಂದು ಅಸಮಾಧಾನಗೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶ ಹೊರಡಿಸಲು ನಿರಾಕರಿಸಿದ್ದಾರೆ.ಇದಕ್ಕೆ ಡಿ.ಕೆ.ಶಿವಕುಮಾರ್ ಕೂಡ ಸಹಮತ ವ್ಯಕ್ತಪಡಿಸಿದರು ಎನ್ನಲಾಗಿದ್ದು, ಇದೀಗ ಪಟ್ಟಿ ಗೊಂದಲವಾಗಿ ಶೈತ್ಯಾಗಾರ ಸೇರಿದೆ.