ಬೆಂಗಳೂರು, ಏ.11: ರಾಜ್ಯದಲ್ಲಿ ಬಿಜೆಪಿ ಈ ಬಾರಿ ಹೆಚ್ಚಿನ ಲೋಕಸಭಾ ಕ್ಷೇತ್ರಗಳನ್ನು ಗೆಲ್ಲಬೇಕೆಂದು ಕಾರ್ಯತಂತ್ರ ರೂಪಿಸುತ್ತಿದ್ದು ಬಿಜೆಪಿ ಅಭ್ಯರ್ಥಿಗಳ ಪರವಾಗಿ ತೆಲುಗು ಚಿತ್ರರಂಗದ ಪವರ್ ಸ್ಟಾರ್ ಪವನ್ ಕಲ್ಯಾಣ್ ಪ್ರಚಾರ ನಡೆಸಲಿದ್ದಾರೆ.
ನೆರೆಯ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಿಗೆ ಹೊಂದಿಕೊಂಡ ರಾಯಚೂರು, ಬಳ್ಳಾರಿ, ಚಿಕ್ಕಬಳ್ಳಾಪುರ, ಕೋಲಾರ ಹಾಗೂ ಬೆಂಗಳೂರು ದಕ್ಷಿಣ ಲೋಕಸಭಾ ಏಪ್ರಿಲ್ 17 ರಂದು ರಾಜ್ಯದಲ್ಲಿ ನಟ ಪವನ್ ಕಲ್ಯಾಣ್ (Pawan Kalyan) ಬಿಜೆಪಿ ಅಭ್ಯರ್ಥಿಗಳ ಪರ ರೋಡ್ ಶೋ ನಡೆಸುವ ಮೂಲಕ ಅಭ್ಯರ್ಥಿಗಳಾದ ರಾಜಾ ಅಮರೇಶ್ವರ ನಾಯಕ, ಬಿ.ಶ್ರೀರಾಮುಲು, ಡಾ. ಸುಧಾಕರ್, ತೇಜಸ್ವಿ ಸೂರ್ಯ ಪರ ಮತ ಯಾಚಿಸಲಿದ್ದಾರೆ.
ಗಡಿ ಜಿಲ್ಲೆಯಾದ ರಾಯಚೂರು ಆಂಧ್ರಪ್ರದೇಶದ ಜೊತೆ ನಂಟು ಹೊಂದಿದ್ದು, ತೆಲುವು ಭಾಷಿಕರು ಹೆಚ್ಚಿದ್ದಾರೆ. ಜೊತೆಗೆ ಆಂಧ್ರದ ಸಿನಿ ತಾರೆಯರ ಪ್ರಭಾವವೂ ಅವರ ಮೇಲೆ ಹೆಚ್ಚಿದೆ. ಹೀಗಾಗಿ ಅಲ್ಲಿನ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ್ ಪರ ಪ್ರಚಾರ ನಡೆಸಿ ತೆಲುಗು ಭಾಷಿಗರನ್ನು ಸೆಳೆಯುವ ಪ್ರಯತ್ನ ನಡೆಸಲಿದ್ದಾರೆ.
ಬಳ್ಳಾರಿಯಂತೂ ತೆಲುಗು ಸೀಮೆಯ ಒಡನಾಟ ಇರಿಸಿಕೊಂಡ ಕ್ಷೇತ್ರ. ಸಹಜವಾಗಿ ರಾಜಕಾರಣದಲ್ಲಿ ತೆಲುಗು ಪ್ರಭಾವ ಹೆಚ್ಚಾಗಿದೆ. ಹೀಗಾಗಿ ಬಿಜೆಪಿ ಅಭ್ಯರ್ಥಿ ಬಿ. ಶ್ರೀರಾಮುಲು ಪರ ಪವನ್ ಕಲ್ಯಾಣ್ ರೋಡ್ ಶೋ ನಡೆಸುವ ಮೂಲಕ ಮತಯಾಚಿಸಿ ಮತದಾರರನ್ನು ಸೆಳೆಯಲಿದ್ದಾರೆ. ಶ್ರೀರಾಮುಲು ಸ್ನೇಹಿತ ಪ್ರಭಾವಿ ರಾಜಕಾರಣಿ ಜನಾರ್ದನ ರೆಡ್ಡಿ ಬಳ್ಳಾರಿ ಪ್ರವೇಶ ಮಾಡದಂತೆ ನಿರ್ಬಂಧ ಇರುವ ಹಿನ್ನೆಲೆ, ಪವನ್ ಕಲ್ಯಾಣ್ ಪ್ರಚಾರ ಪಕ್ಷಕ್ಕೆ ಹೆಚ್ಚಿನ ಲಾಭ ತಂದುಕೊಡಲಿದೆ ಎನ್ನಲಾಗಿದೆ.
ಚಿಕ್ಕಬಳ್ಳಾಪುರ ಕೂಡ ತೆಲುಗು ಭಾಷಿಗರು ಹೆಚ್ಚಿರುವ ಕ್ಷೇತ್ರ. ತೆಲುಗು ಸಿನಿಮಾಗಳು ಹೆಚ್ಚಾಗಿ ಪ್ರಭಾವ ಬೀರಿರುವ ಕ್ಷೇತ್ರ. ಹಾಗಾಗಿ ಇಲ್ಲಿ ಬಿಜೆಪಿ ಅಭ್ಯರ್ಥಿ ಡಾ. ಸುಧಾಕರ್ ಪರ ಪವನ್ ಕಲ್ಯಾಣ್ ಪ್ರಚಾರ ನಡೆಸಲಿದ್ದಾರೆ. ಆ ಮೂಲಕ ತೆಲುಗು ಮತದಾರರ ಮತಗಳು ಬಿಜೆಪಿ ಕಡೆ ವಾಲಿದರೆ, ಬಿಜೆಪಿ ಅಭ್ಯರ್ಥಿ ಗೆಲುವಿಗೆ ಸಹಕಾರಿಯಾಗಲಿದೆ ಎನ್ನುವುದು ಬಿಜೆಪಿ ಲೆಕ್ಕಾಚಾರ. ರಾಜಧಾನಿ ಬೆಂಗಳೂರಿನ ದಕ್ಷಿಣ ಲೋಕಸಭಾ ಕ್ಷೇತ್ರದಲ್ಲೂ ತೆಲುಗು ಮಂದಿ ಹೆಚ್ಚಿದ್ದಾರೆ.ಈ ಹಿನ್ನೆಲೆ, ಪವನ್ ಕಲ್ಯಾಣ್ ಪ್ರಚಾರ ನಡೆಸಲಿದ್ದಾರೆ.