ಬೆಂಗಳೂರು – ರಾಜ್ಯ ಸರ್ಕಾರ ಮತ್ತು ಕಾಂಗ್ರೆಸ್ ನಲ್ಲಿ ಪ್ರಮುಖವಾಗಿ ಕೇಳಿಬರುವ ಹೆಸರು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (DK Shivakumar). ಇವರನ್ನು ಹೇಗಾದರೂ ಮಣಿಸಲೇಬೇಕು ಎಂದು ಹಠಕ್ಕೆ ಬಿದ್ದವರಲ್ಲಿ ಮೊದಲ ಸ್ಥಾನದಲ್ಲಿರುವವರು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ನಾಯಕ ಕುಮಾರಸ್ವಾಮಿ.
ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರದ ಸಮಯದಲ್ಲಿ ಜೋಡೆತ್ತು ಎಂದು ಬಣ್ಣಿಸಲ್ಪಟ್ಟ ನಾಯಕರು ಇದೀಗ ಹಾವು- ಮುಂಗುಸಿಯಂತಾಗಿದ್ದಾರೆ.ರಾಜಕಾರಣದಲ್ಲಿ ಈ ಇಬ್ಬರ ನಡುವಿನ ಸಂಘರ್ಷ ರಾಜ್ಯದ ಜನರ ಗಮನ ಸೆಳೆದಿದೆ.
ಅವಕಾಶ ಸಿಕ್ಕಾಗೆಲ್ಲಾ ಅವರು, ಇವರನ್ನು ಮಣಿಸಲು,ಇವರು, ಅವರನ್ನು ಮಣಿಸಲು ಸದಾ ಹಾತೊರೆಯುತ್ತಿದ್ದಾರೆ.ಇದಕ್ಕಾಗಿ ಸಿಗುವ ಒಂದು ಸಣ್ಣ ಅವಕಾಶವನ್ನೂ ಈ ನಾಯಕರು ಬಿಟ್ಟು ಕೊಡುವುದಿಲ್ಲ.
ಶಿವಕುಮಾರ್ ಅವರನ್ನು ಮಣಿಸುವ ಈ ಕಾರ್ಯತಂತ್ರದ ಭಾಗವಾಗಿ ಅವರ ಮತ್ತೊಬ್ಬ ರಾಜಕೀಯ ಎದುರಾಳಿ ಮಾಜಿ ಮಂತ್ರಿ ಹಾಗೂ ಬಿಜೆಪಿ ಮುಖಂಡ ಸಿ.ಪಿ.ಯೋಗೇಶ್ವರ್ ಎಂಬ ಅಸ್ತ್ರವನ್ನು ಪ್ರಯೋಗಿಸಲು ಕುಮಾರಸ್ವಾಮಿ ಮುಂದಾಗಿದ್ದಾರೆ.
ಎನ್.ಡಿ.ಎ.ಮೈತ್ರಿ ಕೂಟ ಸೇರುವ ಮೂಲಕ ಈಗಾಗಲೇ ಜೆಡಿಎಸ್,ಬಿಜೆಪಿಯ ಮಿತ್ರ ಪಕ್ಷವಾಗಿದೆ.ಇದೇ ಅವಕಾಶ ಬಳಸಿಕೊಂಡು ಶಿವಕುಮಾರ್ ಅವರಿಗೆ ಎದಿರೇಟು ನೀಡಲು ಕುಮಾರಸ್ವಾಮಿ ರಣತಂತ್ರ ರೂಪಿಸುತ್ತಿದ್ದಾರೆ.
ಇದರ ಭಾಗವಾಗಿ ಶಿವಕುಮಾರ್ ಅವರ ರಾಜಕೀಯ ಶಕ್ತಿ ಎಂದೇ ಪರಿಗಣಿಸಲ್ಪಡುವ ಅವರ ಸೋದರ ಹಾಗೂ ಸಂಸದ ಡಿ.ಕೆ.ಸುರೇಶ್ ಅವರನ್ನು ಮಣಿಸಲು ತಂತ್ರ ಹೆಣೆದಿದ್ದಾರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ. ಸುರೇಶ್ ಅವರನ್ನು ಸೋಲಿಸಲು ಯೋಗೇಶ್ವರ್ ಅವರನ್ನು ಕಣಕ್ಕಿಳಿಸಲು ಸಿದ್ಧತೆ ನಡೆಸಿದ್ದಾರೆ.
ವಾಸ್ತವವಾಗಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿಗಿಂತಲೂ ಜೆಡಿಎಸ್ ಸಂಘಟನಾತ್ಮಕವಾಗಿ ಹೆಚ್ಚು ಪ್ರಾಬಲ್ಯ ಹೊಂದಿದೆ.ಅದರೆ,ಇದು ಸುರೇಶ್ ಅವರನ್ನು ಮಣಿಸುವಷ್ಟರಮಟ್ಟಿಗೆ ಬಲಶಾಲಿಯಲ್ಲ. ಹೀಗಾಗಿ ಕುಮಾರಸ್ವಾಮಿ ಅವರು ಈ ಕ್ಷೇತ್ರವನ್ನು ಬಿಜೆಪಿಗೆ ಬಿಟ್ಟುಕೊಟ್ಟು ಯೋಗೇಶ್ವರ್ ಅವರನ್ನು ಅಭ್ಯರ್ಥಿಯಾಗಿ ಮಾಡುವಂತೆ ಬಿಜೆಪಿ ನಾಯಕರಿಗೆ ಮನವಿ ಮಾಡಲು ಸಿದ್ಧತೆ ನಡೆಸಿದ್ದಾರೆ.
ಕ್ಷೇತ್ರದಾದ್ಯಂತ ಜೆಡಿಎಸ್ ತನ್ನ ನೆಲೆ ಹೊಂದಿದೆ. ಕನಕಪುರ ಹೊರತುಪಡಿಸಿ ಉಳಿದೆಡೆ ಬಿಜೆಪಿ ಸಹ ತನ್ನದೇ ಆದ ಮತ ಬ್ಯಾಂಕ್ ಹೊಂದಿದೆ. ಕ್ಷೇತ್ರದ ವ್ಯಾಪ್ತಿಗೆ ಬರುವ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ರಾಮನಗರ ಜಿಲ್ಲೆಯ ರಾಮನಗರ, ಚನ್ನಪಟ್ಟಣ, ಮಾಗಡಿ, ಕನಕಪುರ, ಬೆಂಗಳೂರಿನ ದಕ್ಷಿಣ, ರಾಜರಾಜೇಶ್ವರಿ ನಗರ, ಆನೇಕಲ್ ಹಾಗೂ ತುಮಕೂರು ಜಿಲ್ಲೆಯ ಕುಣಿಗಲ್ ಕ್ಷೇತ್ರಗಳ ಪೈಕಿ ಎರಡು ಕಡೆ ಬಿಜೆಪಿ, ಒಂದು ಕಡೆ ಜೆಡಿಎಸ್ ಗೆದ್ದಿದ್ದರೆ, ಐದು ಕಡೆ ಕಾಂಗ್ರೆಸ್ ಗೆದ್ದಿದೆ.
ವಿಧಾನಸಭಾ ಚುನಾವಣೆಯಲ್ಲಿ ರಾಮನಗರ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಮೂರರಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿದ್ದಾರೆ. ಅದರಲ್ಲೂ ಕುಮಾರಸ್ವಾಮಿ ಅವರ ಭದ್ರಕೋಟೆ ರಾಮನಗರದಲ್ಲಿ ತಮ್ಮ ಕಟ್ಟಾ ಬೆಂಬಲಿಗ ಎಚ್.ಎ. ಇಕ್ಬಾಲ್ ಹುಸೇನ್ ಅವರನ್ನು ಡಿ.ಕೆ. ಸಹೋದರರು ಗೆಲ್ಲಿಸಿಕೊಂಡು ಬಂದಿದ್ದಾರೆ. ಇಡೀ ಜಿಲ್ಲೆಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ.
ಚನ್ನಪಟ್ಟಣದಲ್ಲಿ ಯೋಗೇಶ್ವರ್ ಸಹ ಸತತ ಸೋಲಿನಿಂದ ಕಂಗೆಟ್ಟಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆ ಜಿಲ್ಲೆಯಲ್ಲಿ ತಮ್ಮ ಅಸ್ತಿತ್ವ ಮತ್ತು ಸಾಮರ್ಥ್ಯ ಸಾಬೀತುಪಡಿಸಲು ಸಿಕ್ಕಿರುವ ಅವಕಾಶ ಎಂದು ಕುಮಾರಸ್ವಾಮಿ ಮತ್ತು ಯೋಗೇಶ್ವರ್ ಭಾವಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಮತ್ತು ಯೋಗೇಶ್ವರ್ ತಮ್ಮ ರಾಜಕೀಯ ವೈಷಮ್ಯ ಮರೆತು ಒಂದಾಗಿದ್ದಾರೆ.ಹಲವು ಬಾರಿ ಇಬ್ಬರೂ ನಾಯಕರು ಒಟ್ಟಾಕಿ ಕುಳಿತು ಮಾತುಕತೆ ನಡೆಸಿ, ಈ ವಿಷಯದಲ್ಲಿ ಒಮ್ಮತಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಮೈತ್ರಿ ಬಳಿಕ ರಾಜಕೀಯ ವೈಷಮ್ಯ ಮರೆತು ಒಂದಾಗಿರುವ ಇಬ್ಬರೂ ಲೋಕಸಭಾ ಚುನಾವಣೆಯಲ್ಲಿ ಸುರೇಶ್ ಅವರನ್ನು ಸೋಲಿಸುವ ಮೂಲಕ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ರಾಜಕೀಯವಾಗಿ ಕಟ್ಟಿ ಹಾಕಲು ಮುಂದಾಗಿದ್ದಾರೆ.
ಇದರ ಭಾಗವಾಗಿ ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿರುವ ವಿಜಯೇಂದ್ರ ಅವರೊಂದಿಗೆ ಕುಮಾರಸ್ವಾಮಿ ಸುಧೀರ್ಘ ಮಾತುಕತೆ ನಡೆಸಿದ್ದಾರೆ. ಬಿಡದಿಯ ತಮ್ಮ ತೋಟದ ಮನೆಯಲ್ಲಿ ನಡೆದ ಮಾತುಕತೆ ಸಮಯದಲ್ಲಿ ಈ ಇಬ್ಬರೂ ನಾಯಕರು ಲೋಕಸಭಾ ಚುನಾವಣೆಯಲ್ಲಿ ಶಿವಕುಮಾರ್ ಗೆ ತಕ್ಕ ಪಾಠ ಕಲಿಸಲೇಬೇಕು ಎಂದು ನಿರ್ವಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಮಾತುಕತೆಯಲ್ಲಿ ಡಿ.ಕೆ. ಸುರೇಶ್ ಅವರಿಗೆ ಪ್ರಬಲ ಪೈಪೋಟಿ ನೀಡಲು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಈ ಬಾರಿ ಸಿ.ಪಿ. ಯೋಗೇಶ್ವರ್ ಅವರನ್ನು ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿಸುವುದು ಬಹುತೇಕ ಅಂತಿಮಗೊಂಡಿದೆ ಎಂದು ತಿಳಿದು ಬಂದಿದೆ.
ಇದಕ್ಕೆ ಪೂರಕವೆಂಬಂತೆ ಈ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ ಅವರು, ರಾಜ್ಯದಿಂದ ಆಯ್ಕೆಯಾಗಿರುವ ಕಾಂಗ್ರೆಸ್ಸಿನ ಏಕೈಕ ಸಂಸದ ಸುರೇಶ್ ಅವರನ್ನು ಈ ಬಾರಿಯ ಚುನಾವಣೆಯಲ್ಲಿ ಸೋಲಿಸಿ ಮನೆಗೆ ಕಳುಹಿಸಲಾಗುವುದು ಇದಕ್ಕಾಗಿಯೇ ಕುಮಾರಸ್ವಾಮಿ ಅವರ ಜೊತೆಗೂಡಿ ನಾಲ್ಕು ಗೋಡೆಗಳ ಮಧ್ಯೆ ಕುಳಿತು ಕಾರ್ಯತಂತ್ರ ರೂಪಿಸಲಾಗಿದೆ ಎಂದು ಹೇಳಿದರು.
ಈ ತಂತ್ರದ ಹಿಂದೆ ಮತ್ತೊಂದು ಲೆಕ್ಕಾಚಾರವೂ ಇದೆ.ಲೋಕಸಭೆ ಚುನಾವಣೆಯಲ್ಲಿ ಡಿ.ಕೆ. ಶಿವಕುಮಾರ್ ಅವರ ಬಲಗೈ ಆಗಿರುವ ಸುರೇಶ್ ಅವರನ್ನು ಸೋಲಿಸಿ ಯೋಗೇಶ್ವರ್ ಅವರನ್ನು ಸಂಸತ್ತಿಗೆ ಕಳಿಸುವುದರಿಂದ ಮುಂದೆ ಚನ್ನಪಟ್ಟಣದಲ್ಲಿ ಜೆಡಿಎಸ್ ಹಾದಿ ಮತ್ತಷ್ಟು ಸುಗಮವಾಗಲಿದೆ.ಕುಮಾರಸ್ವಾಮಿ ಅವರಿಗೆ ಇಲ್ಲಿ ಪ್ರಬಲ ಎದುರಾಳಿಯೇ ಇಲ್ಲದಂತಾಗುತ್ತದೆ.
2 ಪ್ರತಿಕ್ರಿಯೆಗಳು
ВНЖ цифрового кочевника Испании ВНЖ цифрового кочевника Испании .
карниз с электроприводом для штор купить http://provorota.su/ .